ಮಧುಗಿರಿ:
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಎಟಿಎಂ ಕಾರ್ಡ್ನ್ನು ಅದಲು -ಬದಲು ಮಾಡಿ ಗಾರ್ಮೆಂಟ್ಸ್ ಮಹಿಳೆಯೊಬ್ಬರ ಖಾತೆಯಿಂದ ಇಪ್ಪತ್ತು ಸಾವಿರ ಹಣ ಡ್ರಾ ಮಾಡಿ ಮೋಸ ಮಾಡಿದ್ದ ವ್ಯಕ್ತಿಯನ್ನು ಮಧುಗಿರಿ ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ನ್ಯಾಯದೀಶರು ಅದೇಶಿಸಿದ್ದಾರೆ.
ಆಚೇನಹಳ್ಳಿ ಗ್ರಾಮದ ನಾಗರತ್ನಮ್ಮ ಕರ್ನಾ ಟಕ ಬ್ಯಾಂಕ್ ಖಾತೆಯಿಂದ ಇಪ್ಪತ್ತು ಸಾವಿರ ರೂಗಳನ್ನು ಬಿಡಿಸಿಕೊಂಡು ಬರುವಂತೆ ಅವರ ತಂದೆಯ ಮೂಲಕ ಎಟಿಎಂ ಕಾರ್ಡನ್ನು ಕೊಟ್ಟು ಕಳುಹಿಸಿದ್ದಾರೆ. ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಾರದಿದ್ದಾಗ ಪಕ್ಕದಲ್ಲಿದ್ದ ವ್ಯಕ್ತಿಗೆ ಎಟಿಎಂ ಕಾರ್ಡ್ ನೀಡಿ ಹಣ ಡ್ರಾ ಮಾಡುವಂತೆ ಹೇಳಿದ್ದಾರೆ. ಆ ವ್ಯಕ್ತಿ ತನ್ನ ಬಳಿ ಇದ್ದ ಹಳೆ ಕಾರ್ಡನ್ನು ನೀಡಿ ಈ ಎಟಿಎಂ ಕಾರ್ಡ್ ನ್ನು ಬೇರೆ ಎಟಿಎಂ ನಲ್ಲಿ ಬಳಸಿ ಹಣ ಡ್ರಾ ಮಾಡಿದ್ದಾರೆ. ಆದರೆ ಹಣ ಡ್ರಾ ಆಗಿರುವ ಬಗ್ಗೆ ಗ್ರಾಹಕರಿಗೆ ದೂರವಾಣಿ ಮೆಸೇಜ್ ಬಂದಿದೆ. ತಂದೆಗೆ ಹಣ ದೊರೆತ್ತಿಲ್ಲ. ಈ ಬಗ್ಗೆ ಮಧುಗಿರಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋ ಬಳಿಯ ಮಾದೇನಹಳ್ಳಿ ಗ್ರಾಮದ ಅರುಣ್ ಕುಮಾರ್ ಎಂಬ ಅರೋಪಿ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನಿಗಾಗಿ ಹಾಜರಾದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬಯಲುಗೊಂಡಿದೆ. ಮಧುಗಿರಿ ಕ್ರೈಂ ಸಬ್ಇನ್ಸ್ಪೆಕ್ಟರ್ ಮಂಗಳಗೌರಮ್ಮ ಪ್ರಕರಣ ದಾಖಲಿಸಿಕೊಂಡಿದ್ದರು.