ಹುಳಿಯಾರು:
ಹುಳಿಯಾರಿನ ವಿವಿಧ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ತುಮಕೂರಿನ ಉಪ ಕೃಷಿ ನಿರ್ದೇಶಕರಾದ ಡಿ.ಉಮೇಶ್ ನೇತೃತ್ವದ ತಂಡ ಅನಿರೀಕ್ಷಿತ ದಾಳಿ ನಡೆಸಿ ಪರವಾನಗಿ, ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನಿನ ಪರಿಶೀಲನೆ ನಡೆಸಿತು.
ಬಿತ್ತನೆ ಸಮಯದಲ್ಲಿ ರೈತರಿಂದ ಬೇಡಿಕೆ ಹೆಚ್ಚಾದ ಸಮಯದಲ್ಲಿ ಸರಕಾರ ಫಿಕ್ಸ್ ಮಾಡಿದ ಎಂಆರ್ಪಿ ದರದಲ್ಲಿ ಬೀಜ ಹಾಗೂ ಗೊಬ್ಬರ ಮಾರಾಟ ಮಾಡಬೇಕು ಹಾಗೊಂದು ವೇಳೆ ಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನ ಮಾಡುವುದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಲಿಂಕ್ ಮಾಡುವುದು ಕಂಡು ಬಂದರೆ ಶಿಸ್ತು ಕ್ರಮಕೈಗೊಳ್ಳಲಾಗುವುದೆಂದು ಪರಿಶೀಲನೆ ವೇಳೆ ವ್ಯತ್ಯಾಸ ಹಾಗೂ ನಕಲಿ ಬೀಜ ಮಾರಾಟ ಕಂಡು ಬಂದಲ್ಲಿ ಮುಲಾಜಿಲ್ಲದೆ ನೋಟಿಸ್ ನೀಡಿ ಅಂಗಡಿ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಲ್ಲಾ ಮಾರಾಟಗಾರರಿಗೂ ಎಚ್ಚರಿಕೆ ನೀಡಿದರು.
ತಾಲ್ಲೂಕಿನಲ್ಲಿ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಅಧಿನಿಯಮದಡಿ ಯಾವುದೇ ಕೃಷಿ ಪರಿಕರ ಮಾರಾಟಗಾರರು ಕಾನೂನು ಉಲ್ಲಂಘನೆ ಮಾಡಿದಲ್ಲಿ ರೈತರು ಸಮೀಪದ ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ನಿರ್ದೇಶಕರು ಇವರಿಗೆ ದೂರು ನೀಡಬಹುದು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿಗಳನ್ನು ಎಲ್ಲಾ ಕೃಷಿ ಅಧಿಕಾರಿಗಳು ಕೈಗೊಂಡು ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದೆಂದು ತಿಳಿಸಿದರು. ಈ ವೇಳೆ ಕೃಷಿ ಇಲಾಖೆಯ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.