ಶಿರಾ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬಲಗೊಳಿಸಲು ಕ್ಷೇತ್ರಗಳ ಪ್ರವಾಸ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಹಗರಣ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜೆಡಿಎಸ್ ಕಾರ್ಯಕರ್ತರು ಎಲ್ಲಾ ಬೂತ್ ಗಳಲ್ಲೂ ಸದಸ್ಯತ್ವ ನೊಂದಣಿ ಮಾಡಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ದರಾಗಿ ಎಂದು ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.
ಗುರುವಾರದಂದು ಶಿರಾ ನಗರದ ಸಿರಿಗಂಧ ಪ್ಯಾಲೇಸ್ ನಲ್ಲಿ ನಡೆದ ಜೆಡಿಎಸ್ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ನೀಡುವುದಿಲ್ಲ ಆದುದರಿಂದ ರಾಜ್ಯದ ನಾಡು, ನುಡಿ ,ಜಲ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರಬೇಕು, ಕರ್ನಾಟಕದ ಭದ್ರತೆಗೆ ಜೆಡಿಎಸ್ ಪಕ್ಷದ ಅನಿವಾರ್ಯತೆ ಇದೆ ಎಂದು ತಿಳಿಸಿ ದರು.
ಚುನಾವಣೆಯಲ್ಲಿ ಸೋಲು ಹಾಗೂ ಗೆಲುವು ಸಾಮಾನ್ಯ ಆದರೆ ಸೋತವರು ಮನೆಯಲ್ಲಿ ಕೂರದೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು. ಕೇವಲ ಚುನಾವಣೆಗೆ ಮಾತ್ರ ಮತ ಕೇಳಲು ಬರುವವನು ಜನಪ್ರತಿನಿಧಿಯೇ ಅಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಶಿರಾದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಉಗ್ರಶ್ ೫೮೦೦೦ ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಶಿರಾ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಬಲಿಷ್ಠ ಕಾರ್ಯಕರ್ತರ ಪಡೆಯಿದೆ, ನಮ್ಮ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ದಿವಂಗತ ಸತ್ಯನಾರಾಯಣ ಅವರ ಅವಧಿಯಲ್ಲಿ ಐಟಿಐ ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಸೇರಿದಂತೆ ತಾಲೂಕಿನಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ವಿಧಾನಪರಿಷತ್ ಶಾಸಕರಾದ ತಿಪ್ಪೇಸ್ವಾಮಿ ಮಾತನಾಡಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ತೊಂಬತ್ತ ಮೂರರ ಇಳಿ ವಯಸ್ಸಿನಲ್ಲೂ ಕೂಡ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರು ನೀಡಿದ ಮಹಿಳಾ ಮೀಸಲಾತಿ ಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಹಾಗು ಎಲ್ಲ ವರ್ಗದವರು ಸಾಮಾಜಿಕ ನ್ಯಾಯ ಪಡೆದಿರುತ್ತಾರೆ ಎಂದರು.

ಜೆಡಿಎಸ್ ಮುಖಂಡ ಆರ್. ಉಗ್ರೇಶ್ ಮಾತನಾಡಿ ನಮ್ಮ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಜನಪರ ಕಾರ್ಯಕ್ರಮಗಳು ಇಂದಿಗೂ ಕೂಡ ಪ್ರಸ್ತುತ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ
ಆರ್ ಸಿ ಅಂಜನಪ್ಪ , ಮಾಜಿ ಶಾಸಕ ತಿಮ್ಮರಾಯಪ್ಪ,ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಉಗ್ರೇಶ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ,ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯ ಪ್ರಕಾಶ್, ಕಲ್ಕೆರೆ ರವಿಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, , ನಗರಸಭೆ ಮಾಜಿ ಅಧ್ಯಕ್ಷ ಅಂಜನಪ್ಪ ನಗರಸಭೆ ಸದಸ್ಯರಾದ ರಾಮು, ರಾಘವೇಂದ್ರ ತಾಲೂಕ ಪಂಚಾಯತಿ ಉಪಾಧ್ಯಕ್ಷ ರಂಗನಾಥ್ ಗೌಡ, ಮುಖಂಡರುಗಳಾದ ಜಗದೀಶ್ ನಾಗರಾಜು, ,ರವೀಂದ್ರಪ್ಪ, ಜಯಣ್ಣ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ ಡಿ ನರಸಿಂಹಮೂರ್ತಿ ತಾಲೂಕ್ ಯುವ ಘಟಕದ ಅಧ್ಯಕ್ಷ ಪುನೀತ್, ನಗರ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಶ್ರೀರಂಗ, ಮಹಿಳಾ ಘಟಕದ ಅಧ್ಯಕ್ಷ ರೇಣುಕಮ್ಮ, ಎಸ್ ರಾಮಕೃಷ್ಣ, ಮುಂತಾದವರು ಉಪಸ್ಥಿತರಿದ್ದರು.

(Visited 1 times, 1 visits today)