ಹುಳಿಯಾರು: ಹುಳಿಯಾರು ಕೆರೆಯ ಬಫರ್ ಝೋನ್ ಗುರುತಿಸುವ ಕಾರ್ಯ ನಡೆದಿದ್ದು ಕೆರೆ ಗಡಿಯಿಂದ ಒಟ್ಟು ೩೦ ಮೀಟರ್ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇದರಿಂದ ಕೆರೆ ದಡದಲ್ಲಿರುವ ನಿವಾಸಿಗಳಿಗೆ ಆತಂಕ ಶುರುವಾಗಿದ್ದು ಅಲೆಮಾರಿಗಳ ಕೋಟದಲ್ಲಿ ನಿವೇಶನ ಪಡೆದಿರುವವರು ಮನೆ ಕಟ್ಟಿಕೊಳ್ಳುವ ತವಕ ಹಾಗೂ ನಿವೇಶನವೇ ಸಿಗದವರು ನಿವೇಶನಕ್ಕಾಗಿ ಹೋರಾಡುವ ಅನಿವಾರ್ಯತೆ ಶುರುವಾಗಿದೆ.
ಹುಳಿಯಾರು ಕೆರೆ ಅಂಗಳದಲ್ಲಿ ಮುಳುಗಡೆ ಪ್ರದೇಶದಲ್ಲಿನ ನಿವಾಸಿಗಳನ್ನು ತೆರವುಗೊಳಿಸಿ ಪುನರ್ವಸತಿ ಕಲ್ಪಿಸುವ ಕಾರ್ಯ ಕಳೆದ ಹಲವಾರು ವರ್ಷಗಳಿಂದಲೂ ನಡೆಯುತ್ತಲೇ ಬಂದಿದ್ದು ಈ ಮುಂಚೆ ಅಲೆಮಾರಿ ಜನಾಂಗದವರಿಗೆ ಗೌಡಗೆರೆ ಸರ್ವೇ ನಂಬರ್‌ನಲ್ಲಿ ೨.೨೮ ಎಕರೆ ಪ್ರದೇಶದಲ್ಲಿ ೩೬ ಮಂದಿಗೆ ನಿವೇಶನ ಕಲ್ಪಿಸಲಾಗಿದ್ದು ಇದೀಗ ಕಂಪನಹಳ್ಳಿ ಸರ್ವೇ ನಂಬರ್‌ನಲ್ಲಿ ೨ ಎಕರೆ ಜಾಗದಲ್ಲಿ ೧೬ ಮಂದಿಗೆ ನಿವೇಶನ ನೀಡುವ ಕಾರ್ಯಕ್ಕೆ ತಾಲೂಕು ಆಡಳಿತ ಮುಂದಾಗಿದೆ.
ಆದರೂ ಕೆರೆ ಅಂಗಳದ ಎಲ್ಲಾ ನಿವಾಸಿಗಳ ತೆರುವುಗೊಳಿಸಿ ಪುನರ್ವಸತಿ ಕಲ್ಪಿಸುವ ಕಾರ್ಯ ಪೂರ್ಣಗೊಂಡಿಲ್ಲ. ಮಳೆಗಾಲ ಆರಂಭವಾದಾಗಲೆಲ್ಲ ಅಲ್ಲಿನ ನಿವಾಸಿಗಳಿಗೆ ಮನೆ ಜಲಾವೃತಗೊಳ್ಳುವ ಭಯದಿಂದ ಮುಕ್ತ ಮಾಡಲು ಸಾಧ್ಯವಾಗಿಲ್ಲ. ಆದರೆ ಉಪ ವಿಭಾಗಾಧಿಕಾರಿಗಳು ಸೇರಿದಂತೆ ತಹಸಿಲ್ದಾರ್ ಅವರು ಕೆರೆ ಅಂಗಳಕ್ಕೆ ಭೇಟಿ ನೀಡಿ ಬಫರ್ ಝೋನ್ ಸರ್ವೇ ಮಾಡಿರುವುದು ನಿವೇಶನ ಸಿಗದೆ ಉಳಿದಿರುವ ಕುಟುಂಬದವರಿಗೆ ಆತಂಕ ಶುರುವಾಗಿದೆ.
ಕಳೆದ ೪೦ ವರ್ಷಗಳಿಂದಲೂ ಇಲ್ಲಿನ ಕೆರೆ ಅಂಗಳದಲ್ಲಿ ವಾಸವಿದ್ದ ಅಲೆಮಾರಿಗಳ ಕುಟುಂಬ ಸೇರಿದಂತೆ ಆದಿ ಕರ್ನಾಟಕ, ಆದಿ ದ್ರಾವಿಡ, ಹಿಂದುಳಿದ ವರ್ಗದವರು, ಲಂಬಾಣಿ, ಮುಸ್ಲಿಂ ಜನಾಂಗದವರು ವಾಸವಿದ್ದಾರೆ. ಈಗ ೫೨ ಮಂದಿಗೆ ಮಾತ್ರ ನಿವೇಶನ ಸಿಕ್ಕಿದ್ದು ಕೆರೆ ದಂಡೆಯಲ್ಲಿರುವವರಿಗೆ ಮಾತ್ರ ಕೊಡಲಾಗುತ್ತದೆ, ಕೆರೆಯ ಇನ್ನೊಂದು ಭಾಗದಲ್ಲಿರುವವರಿಗೆ ಕೊಡಲು ಸಾಧ್ಯವಿಲ್ಲ ಎಂದು ತಾಲೂಕು ಆಡಳಿತ ತಾರತಮ್ಯ ಮಾಡುತ್ತಿದೆ ಎಂದು ಅಲ್ಲಿನ ನಿವಾಸಿಗಳ ಆರೋಪವಾಗಿದೆ.

ಈ ಹಿಂದೆ ಒತ್ತುವರಿದಾರರ ಸಮೀಕ್ಷೆ ಮಾಡಲಾಗಿದ್ದು ೮೧ ಜನ ನಿವಾಸಿಗಳ ಪಟ್ಟಿ ಮಾಡಲಾಗಿತ್ತು. ಇದೀಗ ಅದರಲ್ಲಿ ಎಷ್ಟು ಜನರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ನಡೆದಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಎಲ್ಲರಿಗೂ ಅವಕಾಶ ಕಲ್ಪಿಸದಿದ್ದಲ್ಲಿ ಹೋರಾಟಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ರಾಘವೇಂದ್ರ- ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸರಿಯಾದ ಪಟ್ಟಿ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಒಮ್ಮೆ ೩೦, ಒಮ್ಮೆ ೩೫, ಮತ್ತೊಮ್ಮೆ ೭೦ ಎಂದು ಹೀಗೆ ಪಟ್ಟಿ ಹೇಳುತ್ತಿದ್ದಾರೆ. ನಿಖರವಾದ ಪಟ್ಟಿ ಕೊಡದಿದ್ದಲ್ಲಿ ನಾವಾದರೂ ಏನು ಮಾಡಲು ಸಾಧ್ಯ. ಸರ್ವೆ ಇಲಾಖೆ ಗುರುತಿಸಿರುವ ಕೆರೆ ಅಂಗಳದ ದಡದಲ್ಲಿ ಒಟ್ಟು ಎಷ್ಟು ಮಂದಿ ನಿವಾಸಿಗಳಿದ್ದಾರೆ ಎಂಬುದನ್ನು ಸದ್ಯ ಪರಿಶೀಲಿಸಲಾಗುತ್ತಿದೆ. > ಕೆ.ಪುರಂದರ- ತಹಸಿಲ್ದಾರ್

(Visited 1 times, 1 visits today)