ತುಮಕೂರು: ಕನ್ನಡದ ಬಗ್ಗೆ ಅಸಡ್ಡೆಯಾಗಿ ಮಾತನಾಡಿರುವ ನಟ ಕಮಲಹಾಸನ್ ಅವರ ಥಗ್ ಲೈಫ್ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ಒತ್ತಾಯಿಸಿ ಜಿಲ್ಲಾ ಕನ್ನಡ ಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದ ಎಸ್.ಮಾಲ್‌ನಲ್ಲಿರುವ ಐನಾಕ್ಸ್ ಎದುರು ಪ್ರತಿಭಟನೆ ನಡೆಸಿದರು.
ಕಮಲಹಾಸನ್ ವಿರುದ್ಧ ಧಿಕ್ಕಾರ ಕೂಗಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಐನಾಕ್ಸ್ ವ್ಯವಸ್ಥಾಪಕರಿಗೆ ಮನವಿಪತ್ರ ನೀಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಕಮಲಹಾಸನ್ ಸಿನಿಮಾವನ್ನು ಪ್ರದರ್ಶನ ಮಾಡಕೂಡದು. ಅವರ ಸಿನಿಮಾವನ್ನು ರಾಜ್ಯದ ಯಾವ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ಚಲನಚಿತ್ರಮಂಡಳಿಯೂ ಹೇಳಿದೆ. ಇಷ್ಟಾಗಿಯೂ ಚಿತ್ರ ಬಿಡಗಡೆ ಮಾಡಿದರೆ ಮುಂದಾಗುವ ಅಚಾತುರ್ಯಗಳಿಗೆ ಚಿತ್ರಮಂದಿರದವರೇ ಹೊಣೆಯಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಕನ್ನಡ ಭಾಷೆಯ ಇತಿಹಾಸ ತಿಳಿಯದ ನಟ ಕಮಲಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಅಸಡ್ಡೆಯ ಹೇಳಿಕೆ ನೀಡಿ ಕನ್ನಡ ಭಾಷೆ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಆಡಿದ ಮಾತಿಗೆ ಕ್ಷಮೆ ಕೇಳಬೇಕು ಎಂದು ಕನ್ನಡ ಸಾಹಿತಿಗಳು, ಸಂಘಟನೆಗಳು, ಕನ್ನಡಿಗರು ಒತ್ತಾಯ ಮಾಡಿದರೂ ಕ್ಷಮೆ ಕೇಳುವುದಿಲ್ಲ ಎಂದು ಉದ್ದಟತನ ಪ್ರದರ್ಶಿಸಿರುವ ಕಮಲಹಾಸನ್‌ಗೆ ಕನ್ನಡಿಗರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ನಟ ಶಿವರಾಜ್‌ಕುಮಾರ್ ಅವರು ಕಮಲಹಾಸನ್‌ರನ್ನು ಸಮರ್ಥಿಸಿಕೊಳ್ಳಬಾರದು, ಕನ್ನಡಿಗರ ಪರ ನಿಲ್ಲಬೇಕು. ಕನ್ನಡದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ, ಕ್ಷಮೆ ಕೇಳದೆ ಮೊಂಡುತನ ಮಾಡುತ್ತಿರುವ ಕಮಲಹಾಸನ್ ಚಿತ್ರಗಳನ್ನು ರಾಜ್ಯದ ಚಿತ್ರಮಂದಿರಗಳು ಬಹಿಷ್ಕರಿಸಬೇಕು ಎಂದು ಧನಿಯಾಕುಮಾರ್ ಒತ್ತಾಯಿಸಿದರು.
ಕನ್ನಡ ಸೇನೆ ಜಿಲ್ಲಾ ಗೌರವಾಧ್ಯಕ್ಷ ಆರ್.ಎನ್.ವೆಂಕಟಾಚಲ, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ಮುಖಂಡರಾದ ಹೊಸಕೋಟೆ ನಟರಾಜ್, ಕೊಪ್ಪಲ್ ನಾಗರಾಜು, ನಟರಾಜಶೆಟ್ಟರು, ಗುರುರಾಘವೇಂದ್ರ, ಶಿವಕುಮಾರ್, ಸತೀಶ್, ವಿಠಲ್, ಬಸವರಾಜು, ವರದರಾಜು, ಜಿಮ್ ನಟರಾಜ್, ಪರಶುರಾಮ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)