ತುಮಕೂರು: ಗಣಿಭಾದಿತ ಪ್ರದೇಶಗಳ ಅಭಿವೃದ್ದಿಗೆಂದು ಮೀಸಲಿಟ್ಟಿರುವ ಹಣವನ್ನು ಬಾಧಿತ ಪ್ರದೇಶಗಳ ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ದಿಗೆ ಬಳಸುವಂತೆ ಸರಕಾರದ ಮೇಲೆ ನಿಗಾವಹಿಸುವುದು, ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ ಸರಕಾರದ ಮೇಲೆ ಒತ್ತಡ ತರುವುದು ಹಾಗೂ ಸೆಸ್ ಹಣ ಅನ್ಯ ಉದ್ದೇಶಗಳೀಗೆ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಬಾದಿತ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.
ನಗರದ ವಿಜ್ಞಾನ ಕೇಂದ್ರದಲ್ಲಿ ಜನಾಂದೋಲನ ಮಹಾಮೈತ್ರಿ ವತಿಯಿಂದ ಆಗಸ್ಟ್ ೧೬ ರಂದು ಹಮ್ಮಿಕೊಂಡಿರುವ ಗಣಿ ಭಾದಿತ ಪ್ರದೇಶಗಳ ಪುನಶ್ಚೇತನ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಲಿ ಜನಾರ್ಧನ್ ರೆಡ್ಡಿ ನೇತೃತ್ವದಲ್ಲಿ ನಡೆದ ಎಗ್ಗಿಲ್ಲದ ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಜನರು ಹೋರಾಟದ ಫಲವಾಗಿ ೨೦೧೧ ರಲ್ಲಿ ಸುಪ್ರಿಂಕೋರ್ಟು ನೀಡಿದ ತೀರ್ಪಿನ ಅನ್ವಯ ಜೈಲು ಶಿಕ್ಷೆ ಅನುಭವಿಸಿದ್ದಲ್ಲದೆ, ದಂಡವನ್ನು ಕಟ್ಟಬೇಕಾಯಿತು.ಇವೆಲ್ಲವೂ ಸಾಧ್ಯ ವಾಗಿದ್ದು,ರೈತರು,ಕಾರ್ಮಿಕರು,ಪರಿಸರವಾದಿ ಗಳು,ಹೋರಾಟಗಾರರ ಐಕ್ಯ ಹೋರಾಟದಿಂದ.ಹಾಗಾಗಿ ಈ ಹೋರಾಟವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಆ.೧೬ರ ಸಮಾವೇಶದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತಾಗಬೇಕು ಎಂದರು.
ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿ ನಿಗಮದಲ್ಲಿ ಸುಮಾರು ೩೦ ಸಾವಿರ ಕೋಟಿ ಹಣವಿದೆ. ಇದನ್ನು ಬೇರೆ ಬೇರೆ ಉದ್ದೇ ಶಗಳಿಗೆ ಬಳಸಿಕೊಳ್ಳಲು ಕೇಂದ್ರದ ಕೈಗಾರಿಕಾ ಮಂತ್ರಿಗಳು ಸೇರಿದಂತೆ ಹಲವು ತುದಿಗಾಲಲ್ಲಿ ಕಾಯುತಿದ್ದಾರೆ.ಆದರೆ ಇದಕ್ಕೆ ಸುಪ್ರಿಂಕೋರ್ಟು ಅವಕಾಶ ಮಾಡಿಕೊಟ್ಟಿಲ್ಲ. ಬಾಧಿತ ಪ್ರದೇಶಗಳ ಜನರ ಶೈಕ್ಷಣಿಕ,ಆರೋಗ್ಯ ಮತ್ತು ಅದಾಯ ವೃದ್ದಿಗೆ ಈ ಹಣ ಸದುಪ ಯೋಗವಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಇಂತಹ ಸಮಾಲೋಚನಾ ಸಭೆಗಳ ಮೂಲಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹೋರಾಟಗಾರರಿಂದ ಮಾಹಿತಿ ಸಂಗ್ರಹಿಸಿ,ನಿಗಮದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಎಸ್.ಆರ್.ಹಿರೇಮಠ್ ತಿಳಿಸಿದರು.
ಅಕ್ರಮ ಮತ್ತು ಸಕ್ರಮ ಎರಡು ಗಣಿಗಾರಿಕೆಯಿಂದ ಇಡೀ ಪರಿಸರ ಹಾಳಾಗಿದೆ.ಹಾಗಾಗಿ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬುದು ನಮ್ಮ ಆಗ್ರಹವಾಗಿದೆ.ನಮ್ಮ ಒತ್ತಾಯದ ಮೇರೆಗೆ ತೀರ ಅಗತ್ಯವೆನಿಸಿದಾಗ ಒಂದು ಪ್ರದೇಶದಲ್ಲಿ ೨೦ ಮಿಲಿಯನ್ ಮೆಟ್ರಿಕ್ ಟನ್ ಅದಿರು ತೆಗೆಯಲು ಮಾತ್ರ ಸುಪ್ರಿಂಕೋರ್ಟು ಅವಕಾಶ ಕಲ್ಪಿಸಿದೆ.ಇದರಲ್ಲಿ ಯಾವುದೇ ಆಕ್ರಮವಾಗದಂತೆ ಹೋರಾಟಗಾರರು ಎಚ್ಚರಿಕೆ ವಹಿಸಬೇಕಾಗಿದೆ.ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ನಮ್ಮ ಮುಂದಿರುವ ಅಂಬೇಡ್ಕರ್ ಅವರ ಮಾವಾಡ್ ಕೆರೆ ನೀರು ಹೋರಾಟ,ಗಾಂಧಿಯ ಉಪ್ಪಿನ ಸತ್ಯಾಗ್ರಹ,ದೆಹಲಿ ರೈತರ ಐಕ್ಯ ಹೋರಾಟದ ರೀತಿ ಹೋರಾಟಗಳನ್ನು ನಡೆಸಿ, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ನೀಡೋಣ.ಹಮ್ ಲಡೇಂಗೆ, ಹಮ್ಮ್ ಜೀತೇಂಗೆ ಎಂಬುದು ನಮ್ಮ ಗುರಿಯಾಗಬೇಕು ಎಂದು ಎಸ್.ಆರ್.ಹಿರೇಮಠ್ ನುಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಪರಿಸರವಿದ್ದರೆ ನಾವು,ಗಣಿಯಿಂದಾಗಿ ಪರಿಸರದ ಮೇಲಾದ ದುಷ್ಪರಿಣಾಮದಿಂದ ಹವಾಮಾನ ವೈಪರಿತ್ಯ ಉಂಟಾಗಿ ಜನರು ವಿವಿಧ ರೀತಿಯ ತೊಂದರೆ ಅನುಭವಿಸುತಿದ್ದಾರೆ.ಇದರ ಜೊತೆಗೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ತೆಡೆಯುವ ನಿಟ್ಟಿನಲ್ಲಿ ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.
ಜನಾಂದೋಲನ ಮಹಾಮೈತ್ರಿಯ ಜಿಲ್ಲಾ ಧ್ಯಕ್ಷರಾದ ಪಂಡಿತ್ ಜವಹರ್ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪರಿಸರ ವಾದಿ ಸಿ.ಯತಿರಾಜು,ಮಹಾ ಮೈತ್ರಿಯ ಕೆ.ವಿ.ಭಟ್ ಉಪಸ್ಥಿತರಿದ್ದರು.ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರೈತರಾದ ರವೀಶ್,ಚಿಕ್ಕಬೋರೇಗೌಡ,ವಿಚಾರವಾದಿಗಳು, ಪರಿಸರವಾದಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

(Visited 1 times, 1 visits today)