
ತುಮಕೂರು: ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದಿಂದ ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತಿಪಟೂರು ತಾಲ್ಲೂಕುಗಳಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲೆಯ ೯೭೭ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃ ಷ್ಟಿಯಿಂದ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆಯಿಂದ ಉಂಟಾಗಿರುವ ಅನಾರೋಗ್ಯಕರ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಸುಧಾರಿಸಲು ಪೌಷ್ಠಿಕ ಆಹಾರ ಒದಗಿಸಲು ಯೋಜಿಸಲಾಗಿದೆ.
ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ೯೭೭ ಸರ್ಕಾರಿ ಶಾಲೆಗಳ ೩೭೦೪೧ ವಿದ್ಯಾರ್ಥಿಗಳಿಗೆ ವಾರದ ೫ ದಿನಗಳು ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದ್ದು, ಮಕ್ಕಳಿಗೆ ಪ್ರತಿ ಸೋಮವಾರ ಹಾಗೂ ಗುರುವಾರ ಕಡಲೇಕಾಳು ಉಸುಲಿ, ಮಂಗಳವಾರ ಹಾಗೂ ಶುಕ್ರವಾರ ಹೆಸರುಕಾಳು ಉಸುಲಿ, ಬುಧವಾರ ಶೇಂಗಾ ಉಸುಲಿ ವಿತರಿಸಲಾಗುತ್ತಿದೆ. ಅಲ್ಲದೇ ಪ್ರತಿ ಶನಿವಾರ ಕಿತ್ತಳೆ/ಮೋಸಂಬಿ/ಸಪೋಟ ಹಣ್ಣನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ನವೆಂಬರ್ ೩ ರಿಂದ ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ ಮತ್ತು ತಿಪಟೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿತರಿಸಲಾಗುವ ೬ ದಿನಗಳ ಪೂರಕ ಪೌಷ್ಠಿಕ ಆಹಾರ ಸೌಲಭ್ಯ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಆರೋಗ್ಯ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಈ ಯೋಜನೆಯು ಸಹಕಾರಿಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಬೇಕು ಹಾಗೂ ಈ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ಪುನರ್ವಸತಿ ಮತ್ತು ಸುಧಾರಣಾ ಯೋಜನೆಗಳಡಿ ವೈಯಕ್ತಿಕ ಹಾಗೂ ಸಮುದಾಯ ಕಾರ್ಯಕ್ರಮಗಳಾದ ಪರಿಸರ, ರಸ್ತೆ, ಕುಡಿಯುವ ನೀರು, ಜಲಮೂಲಗಳ ಸಂರಕ್ಷಣೆ ಅರಣ್ಯ ಅಭಿವೃದ್ಧಿಯಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕ, ಆರೋಗ್ಯ, ಕೃಷಿ, ಪರಿಸರ ಸಂರಕ್ಷಣೆ, ಜಲಾನಯನ ಮತ್ತು ಮಣ್ಣಿನ ಸಂರಕ್ಷಣೆ, ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ವಸತಿ ರಹಿತರಿಗೆ ವಸತಿ ಕಲ್ಪಿಸಲು ಯೋಜಿಸಲಾಗಿದೆ.
ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸಲು ಗಣಿಬಾಧಿತ ತಾಲ್ಲೂಕುಗಳಲ್ಲಿ ಜಿಲ್ಲಾ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಬಲಪಡಿಸುವಿಕೆ, ದುರ್ಬಲ ವರ್ಗದವರ ಶಿಕ್ಷಣ ಬಲಪಡಿಸುವಿಕೆ, ಸಾಕ್ಷರತೆ ಸುಧಾರಣೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಜೀವನ ಶೈಲಿ ಗುಣಮಟ್ಟವನ್ನು ಸುಧಾರಿಸುವುದು, ಅಂಗನವಾಡಿಗಳ ಬಲವರ್ಧನೆ, ಶಾಲಾ ಪೂರ್ವ ಶಿಕ್ಷಣ, ಲಸಿಕೆ, ಆರೋಗ್ಯ ತಪಾಸಣೆ ಒದಗಿಸುವುದು, ಶುದ್ಧ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ, ರಸ್ತೆಗಳ ನಿರ್ಮಾಣದಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



