ತುಮಕೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ನೀಡುತ್ತಿರುವ ಮೊಟ್ಟೆ ಮತ್ತು ಬಾಳೆ ಹಣ್ಣಿನ ದರ ಕಡಿಮೆ ಇದ್ದು, ಮೊಟ್ಟೆ ದರವನ್ನು ಪರಿಷ್ಕರಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಪಿ.ಜಿ.ತಿಮ್ಮೇಗೌಡ ಹಾಗೂ ಸಂಘದ ಪದಾಧಿಕಾರಿಗಳು ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಂಘದ ಪದಾಧಿಕಾರಿಗಳೊಂದಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿರುವ ಅವರು, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ರೂ೭.೫೦ ರಿಂದ ೮.೦೦ರವರೆಗೆ ಏರಿಕೆಯಾಗಿರುವುದರಿಂದ, ಪ್ರತಿ ವಿದ್ಯಾರ್ಥಿಗೆ ಪ್ರತಿದಿನ ೨ ರಿಂದ ೩ ರವರೆಗೆ ಹೆಚ್ಚುವರಿ ವೆಚ್ಚವನ್ನು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಭರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಆಡಳಿತಾತ್ಮಕವಾಗಿಯೂ ಕಾರ್ಯಸಾಧ್ಯವಲ್ಲ ಎಂಬುದು ಶಿಕ್ಷಕರ ಮನವಿಯಾಗಿದೆ.
ಶಿಕ್ಷಕರ ಕರ್ತವ್ಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ಆದರೆ ಇಲಾಖೆಯು ಸಮರ್ಪಕ ಅನುದಾನ ನೀಡದೆ, ಯೋಜನೆಯ ಯಶಸ್ಸಿನ ಸಂಪೂರ್ಣ ಹೊಣೆಯನ್ನು ಮುಖ್ಯ ಶಿಕ್ಷಕರ ಮೇಲೆ ಹೊರಿಸಿರುವುದು ಶಿಕ್ಷಕರಿಗೆ ಅನಗತ್ಯ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನು ಉಂಟು ಮಾಡಿದೆ. ಈ ಹಿಂದೆಯೂ ಹಲವು ಬಾರಿ ಈ ಕುರಿತು ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಇಲಾಖೆಯ ಮಹತ್ವದ ಯೋಜನೆಗೆ ತೊಂದರೆಯಾಗಬಾರದೆAಬ ಉದ್ದೇಶದಿಂದ ಶಿಕ್ಷಕರು ತಮ್ಮ ಸ್ವಂತ ಹಣವನ್ನು ವೆಚ್ಚ ಮಾಡಿ ಯೋಜನೆಯನ್ನು ಮುಂದುವರಿಸಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಹೊರೆ ಭರಿಸುವುದು ಸಂಪೂರ್ಣ ಅಸಾಧ್ಯವಾಗಿದೆ. ಆದ್ದರಿಂದ ರಾಜ್ಯ ಸಂಘವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸರ್ಕಾರದ ಉನ್ನತ ಮಟ್ಟದಲ್ಲಿ ತಕ್ಷಣ ಚರ್ಚಿಸಿ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಸಿಇಓ ಅವರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿಜಿ ತಿಮ್ಮೇಗೌಡ, ತುಮಕೂರು ತಾಲೂಕು ಅಧ್ಯಕ್ಷ ಕೆ ನಾಗರಾಜು, ಪ್ರಧಾನ ಕಾರ್ಯದರ್ಶಿ ಪಿಎನ್ ದಿನೇಶ್, ಉಪಾಧ್ಯಕ್ಷರುಗಳಾದ ಕೆ.ವಿ.ನಾಗರಾಜ, ಶ್ರೀಮತಿ ಸವಿತಾ, ನಂದಿನಿ, ಮೆಹಬೂಬಿ, ಶ್ರೀನಿವಾಸ, ಜಗದೀಶ, ಸಿದ್ದರಾಜು, ಮಂಗಳ ಗೌರಮ್ಮ, ಶಿವಕುಮಾರ್, ಹಾಗೂ ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳಾದ ಸುಧಾಕರ್ ಭಾಗವಹಿಸಿದ್ದರು.

(Visited 1 times, 1 visits today)