ಹುಳಿಯಾರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಹಿನ್ನೀರಿನಲ್ಲಿರುವ ಮಾರುಹೊಳೆ ಗ್ರಾಮವು ತನ್ನ ಒಡಲಲ್ಲಿ ಸುಮಾರು ೮೦೦ ವರ್ಷಗಳ ಸುದೀರ್ಘ ಇತಿಹಾಸವನ್ನು ಬಚ್ಚಿಟ್ಟುಕೊಂಡಿದೆ. ಆದರೆ, ಈ ಐತಿಹಾಸಿಕ ಹಿರಿಮೆಗೆ ಸಾಕ್ಷಿಯಾಗಿ ನಿಂತಿದ್ದ ಹೊಯ್ಸಳರ ಕಾಲದ ಅಪರೂಪದ ಶಾಸನವೊಂದು ಇಂದು ಅನಾಥವಾಗಿ, ಅವಸಾನದ ಅಂಚು ತಲುಪಿರುವುದು ಅತ್ಯಂತ ವಿಷಾದನೀಯ ಸಂಗತಿ.
ಗ್ರಾಮದ ‘ಕೊರಮರಕಟ್ಟೆ’ ಎಂಬ ಜಾಗದಲ್ಲಿರುವ ಈ ಶಾಸನವು ಕ್ರಿ.ಶ. ೧೨೨೬ ರ ಕಾಲಘಟ್ಟಕ್ಕೆ ಅಂದರೆ, ಹೊಯ್ಸಳ ಸಾಮ್ರಾಟ ಎರಡನೇ ನರಸಿಂಹನ ಆಳ್ವಿಕೆಯ ಅವಧಿಗೆ ಸೇರಿದ್ದಾಗಿದೆ. ಇಷ್ಟೊಂದು ಪ್ರಮುಖ ಇತಿಹಾಸ ಸಾರುವ ಕಲ್ಲು, ಪ್ರಸ್ತುತ ಬೇಲಿ-ಪೊದೆಗಳ ನಡುವೆ ಹಾಳಾಗುತ್ತಿದ್ದು, ನಿಧಿಚೋರರ ದುರಾಶೆಗೆ ಸಿಲುಕಿ ಮಣ್ಣಿನಲ್ಲಿ ಮುಚ್ಚಿಹೋಗುವ ದುಸ್ಥಿತಿಯಲ್ಲಿದೆ. ಇಂತಹ ಅಪರೂಪದ ಶಾಸನವನ್ನು ಶಾಸನ ಸಂಶೋಧಕರಾದ ಶಶಿಕುಮಾರನಾಯ್ಕ ಅವರು ಬೆಳಕಿಗೆ ತಂದಿದ್ದು ಇದನ್ನು ರಕ್ಷಿಸುವ ಕಾರ್ಯ ಆಗಬೇಕಿದೆ.
ಕರ್ನಾಟಕದ ಸಾಂಸ್ಕöÈತಿಕ ಇತಿಹಾಸವನ್ನು ದಾಖಲಿಸುವಲ್ಲಿ ’ಎಪಿಗ್ರಾಫಿಯಾ ಕರ್ನಾಟಿಕ’ ಗ್ರಂಥಮಾಲೆ ಅತ್ಯಂತ ಪ್ರಾಮಾಣಿಕ ಆಕರವಾಗಿದೆ. ಸಂಪುಟ ೨೫ ರ ಚಿಕ್ಕನಾಯಕನಹಳ್ಳಿ ತಾಲೂಕು ಶಾಸನ ಸಂಖ್ಯೆ ೭೫ ರಲ್ಲಿ ಈ ಮಾರುಹೊಳೆಯ ಶಾಸನವನ್ನು ಸಂಪೂರ್ಣವಾಗಿ ದಾಖಲಿಸಲಾಗಿದೆ.
ಈ ಶಾಸನ ದಾಖಲೆಯು ೧೩ ನೇ ಶತಮಾನದ ಹೊಯ್ಸಳರ ಕಾಲದಲ್ಲಿದ್ದ ಭೂದಾನ ಪದ್ಧತಿ, ಭೂಕಂದಾಯ ವ್ಯವಸ್ಥೆ, ಪ್ರಾದೇಶಿಕ ಆಡಳಿತ ವಿಭಾಗಗಳು ಮತ್ತು ಸಾಮಾಜಿಕ ರಚನೆಯ ಮೇಲೆ ಬೆಳಕು ಚೆಲ್ಲುತ್ತದೆ.
ಈ ಶಾಸನದ ವಿವರಣೆಯಂತೆ ಅಂದು ಈ ಭಾಗವು ‘ಮಗರೆ-೩೦೦’ ಎಂಬ ಪ್ರಾದೇಶಿಕ ವಿಭಾಗಕ್ಕೊಳಪಟ್ಟಿತ್ತು (೩೦೦ ಹಳ್ಳಿಗಳು ಅಥವಾ ಆದಾಯದ ಘಟಕಗಳನ್ನು ಹೊಂದಿದ್ದ ಪ್ರಾಂತ್ಯ). ಸಾಮಂತ ಅಧಿಕಾರಿಯೊಬ್ಬ ಗ್ರಾಮವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ದಾನ ನೀಡುವಾಗ, ಕೇವಲ ರಾಜನ ಆಜ್ಞೆಯಷ್ಟೇ ಅಲ್ಲದೆ ಸ್ಥಳೀಯ ನಾಡಪ್ರಭುಗಳು, ಊರಿನ ಗಣ್ಯರು ಹಾಗೂ ಕೃಷಿಕರ (ರೈತರ) ಸಮ್ಮುಖದಲ್ಲೇ ಈ ಪ್ರಕ್ರಿಯೆ ನಡೆದಿತ್ತು. ಅಂದರೆ, ಅಂದಿನ ಕಾಲದಲ್ಲೇ ಪಾರದರ್ಶಕ ಆಡಳಿತ ಮತ್ತು ಸಾರ್ವಜನಿಕ ಸಹಭಾಗಿತ್ವ ಇತ್ತು ಎಂಬುದಕ್ಕೆ ಇದು ಪುರಾವೆಯಾಗಿದೆ.
ಕ್ರಿ.ಶ. ೧೨೨೬ ರಲ್ಲಿ ಹೊಯ್ಸಳ ಸಾಮ್ರಾಟ ಎರಡನೇ ನರಸಿಂಹನು ದೋರಸಮುದ್ರದಿಂದ (ಇಂದಿನ ಹಳೇಬೀಡು) ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ, ’ಮಗರೆ-೩೦೦’ ಪ್ರಾಂತ್ಯದ ಸಾಮಂತ ಅಧಿಕಾರಿಯಾಗಿದ್ದ ಕೇಶವ ದಂಡನಾಥನು ಮಾರುಹೊಳೆ ಗ್ರಾಮವನ್ನು ‘ಪ್ರಸನ್ನಕೇಶವಪುರ’ ಎಂದು ಮರುನಾಮಕರಣ ಮಾಡಿ, ಎಂಭತ್ತು ಜನ ವಿದ್ವಾಂಸ ಬ್ರಾಹ್ಮಣರಿಗೆ ದಾನವಾಗಿ ನೀಡಿದ್ದನು.
ಶಾಸನದ ಕೊನೆಯಲ್ಲಿ ಉಲ್ಲೇಖವಾಗಿರುವ ಶಾಪಾಶಯವು ಸಾರ್ವಜನಿಕ ಸ್ವತ್ತಿನ ಸಂರಕ್ಷಣೆಗೆ ನೀಡುತ್ತಿದ್ದ ಮಹತ್ವವನ್ನು ಸಾರುತ್ತದ್ದು ಈ ಶಾಸನದ ಮೂಲಕ ನೀಡಿದ ದಾನವನ್ನು ಯಾರಾದರೂ ಅಪಹರಿಸಿದರೆ ಅಥವಾ ಹಾಳುಮಾಡಿದರೆ, ಅರವತ್ತು ಸಾವಿರ ವರ್ಷಗಳ ಕಾಲ ಮಲದ ಹುಳುವಾಗಿ ಜನಿಸುವರು. ವಿಷವು ತಿಂದ ಒಬ್ಬನನ್ನು ಮಾತ್ರ ಕೊಲ್ಲುತ್ತದೆ, ಆದರೆ ಬ್ರಹ್ಮಸ್ವವನ್ನು (ದೇವರ ಹಾಗೂ ಧರ್ಮದ ದಾನವನ್ನು) ಅಪಹರಿಸಿದರೆ ಅದು ಅವರ ಮಕ್ಕಳು, ಮೊಮ್ಮಕ್ಕಳ ವಂಶವನ್ನೇ ನಾಶಮಾಡುತ್ತದೆ ಎಂಬುದಾಗಿ ಬರೆಯಲಾಗಿದೆ.
ಮಾರುಹೊಳೆಯ ಸುದೀರ್ಘ ಇತಿಹಾಸ ಮತ್ತು ಹೊಯ್ಸಳರ ಆಡಳಿತ ಶೈಲಿಗೆ ಕೈಗನ್ನಡಿಯಾಗಿರುವ ಈ ಶಾಸನಕಲ್ಲು ಇಂದು ಸೂಕ್ತ ರಕ್ಷಣೆ ಇಲ್ಲದೇ ಕಾಲಗರ್ಭದಲ್ಲಿ ಲೀನವಾಗುವ ಅಪಾಯದಲ್ಲಿದೆ. ನಿಧಿಚೋರರು ಶಾಸನದ ಸುತ್ತಮುತ್ತ ಅಗೆದು ಹಾಳುಗೆಡವುತ್ತಿರುವುದು ಚಾರಿತ್ರಿಕ ಅಪರಾಧ.
ಸಂಬAಧಪಟ್ಟ ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮಾಂತರ ಆಡಳಿತ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಣ್ಣಿನಲ್ಲಿ ಹೂತುಹೋಗುತ್ತಿರುವ ಈ ಶಾಸನವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಮುಂದಿನ ಪೀಳಿಗೆಗೆ ಇತಿಹಾಸದ ಕುರುಹುಗಳನ್ನು ಉಳಿಸಿಕೊಡಬೇಕಿದೆ.

(Visited 1 times, 1 visits today)