ಪಾವಗಡ: ಬಡಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ. ಆದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಂತ್ರಿಕ ಎಡವಟ್ಟು ಹಾಗೂ ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಪಡಿತರ ಚೀಟಿದಾರರು ಬೆಳಗಿನಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತರೂ ರೇಷನ್ ಪಡೆಯಲಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಉಚಿತ ಯೋಜನೆಗಳನ್ನು ಘೋಷಿಸುವ ಸರ್ಕಾರ, ಕೋಟ್ಯಂತರ ಜನರು ಬಳಸುವ ಇಲಾಖೆಯ ಸರ್ವರ್ ಸಾಮರ್ಥ್ಯವನ್ನು ಏಕೆ ಹೆಚ್ಚಿಸುತ್ತಿಲ್ಲ? ಕೂಡಲೇ ತಾಂತ್ರಿಕ ಕೊರತೆಯನ್ನು ನೀಗಿಸಬೇಕು.
ಸರ್ವರ್ ಸಮಸ್ಯೆ ಸಂಪೂರ್ಣ ಬಗೆಹರಿಯುವವರೆಗೆ ಸಾರ್ವಜನಿಕರನ್ನು ಪೀಡಿಸದೆ, ಹಳೆಯ ಮಾದರಿಯಂತೆ ರಿಜಿಸ್ಟರ್ ಆಫ್ಲೈನ್ ಆಧಾರದಲ್ಲಿ ಪಡಿತರ ವಿತರಿಸಲು ಆಹಾರ ಇಲಾಖೆ ತಕ್ಷಣ ಆದೇಶ ಹೊರಡಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನಕ್ಕೆ ನೆರವಾಗಲು ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಲೋಪದೋಷಗಳಿಂದಾಗಿ ಈ ಸೌಲಭ್ಯವು ಜನಸಾಮಾನ್ಯರಿಗೆ ಸಕಾಲದಲ್ಲಿ ತಲುಪುತ್ತಿಲ್ಲ. ಪಡಿತರ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಯೋಜನೆಗಳು ತಾಂತ್ರಿಕ ಎಡವಟ್ಟುಗಳಿಂದ ಜನರಿಗೆ ತೊಂದರೆಯಾಗಿ ಪರಿಣಮಿಸಿವೆ
ತಾಲ್ಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಯಕ್ಕೆ ಸರಿಯಾಗಿ ಪಡಿತರ ಸಿಗದೆ ಸಾರ್ವಜನಿಕರು ಹಾಗೂ ಪಡಿತರ ಚೀಟಿದಾರರು ತೀವ್ರ ಪರದಾಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಹಾಗೂ ಸರ್ವರ್ ಸಮಸ್ಯೆ ತಲೆದೂರಿದ್ದು, ಬೆಳಗಿನಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತರೂ ಅಕ್ಕಿ-ರಾಗಿ ಸಿಗದೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಭಾಗದ ದಿನಗೂಲಿ ನೌಕರರು, ವೃದ್ಧರು ಮತ್ತು ಮಹಿಳೆಯರು ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಬಿಟ್ಟು ಮುಂಜಾನೆಯಿAದಲೇ ರೇಷನ್ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಇ-ಪೋಸ್ ಯಂತ್ರದಲ್ಲಿ ಬೆರಳಚ್ಚು ನೀಡುವಾಗ “ಸರ್ವರ್ ಬ್ಯುಸಿ” ಎಂಬ ಸಂದೇಶ ಬರುತ್ತಿದೆ. ಇದರಿಂದಾಗಿ ಇಡೀ ದಿನ ಕಾದು, ಬರೀ ಕೈಯಲ್ಲಿ ಮನೆಗೆ ಹಿಂತಿರುಗುವ ದುಸ್ಥಿತಿ ನಿರ್ಮಾಣವಾಗಿದೆ
ಆಹಾರ ಭದ್ರತೆಯು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯವಾದರೂ, ಡಿಜಿಟಲ್ ಮೂಲಸೌಕರ್ಯ ಮತ್ತು ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸದೇ ಇರುವುದು ಯೋಜನೆಯ ಮೂಲ ಉದ್ದೇಶವನ್ನೇ ಹಾಳುಗೆಡವುತ್ತಿದೆ. ತಂತ್ರಜ್ಞಾನವು ಜನರ ಜೀವನವನ್ನು ಸುಲಭಗೊಳಿಸಬೇಕೇ ಹೊರತು ಅವರಿಗೆ ಶಾಪವಾಗಬಾರದು. ಆಹಾರ ಇಲಾಖೆಯು ಇನ್ನು ಮುಂದಾದರೂ ಕಾಲಹರಣ ಮಾಡದೆ, ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಪಡಿತರದಾರರ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಿದೆ.
(Visited 1 times, 1 visits today)



