ಚಿಕ್ಕನಾಯಕನಹಳ್ಳಿ:

      ತಾಲ್ಲೂಕಿನ ಸೋಮನಹಳ್ಳಿ ಕಟಕಳೆವು ಗಡಿಹಳ್ಳದಲ್ಲಿ ಆಸ್ತಿವಿಚಾರವಾಗಿ ವ್ಯಕ್ತಿಯೋರ್ವನನ್ನು ಕೊಲೈಗೈದು ಹಳ್ಳದಲ್ಲಿ ಬಿಸಾಡಿ ಹೋಗಿರುವ ಘಟನೆ ನಡೆದಿದೆ.

      ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ನಿವಾಸಿ ಗಂಗಾಧರಯ್ಯ ಕೊಲೆಯಾಗಿರುವ ದುರ್ದೈವಿ.

      ಮೃತ ವ್ಯಕ್ತಿಗೆ ಇಬ್ಬರು ಹೆಂಡತಿಯರ ವೈಯಕ್ತಿಕ ದ್ವೇಷದಿಂದಾಗಿ ತನ್ನ ಗಂಡನನ್ನೇ ಕೊಲೆ ಮಾಡಿರುವ ಶಂಕೆ ಪೋಲಿಸರಿಂದ ವ್ಯಕ್ತವಾದ ಹಿನ್ನಲೆಯಲ್ಲಿ ಮೊದಲ ಹೆಂಡತಿ ಶಾಂತಮ್ಮನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

      ಮೃತನ ತಂದೆ ತಿಮ್ಮಯ್ಯನಿಗೆ ಗಂಗಾಧರಯ್ಯ ಒಬ್ಬನೇ ಮಗನಾಗಿದ್ದು ಈತ ಶಾಂತಮ್ಮನನ್ನು ಮೊದಲನೆ ವಿವಾಹವಾಗಿದ್ದ. ಜಯಮ್ಮ ಎಂಬುವವರನ್ನು ಎರಡನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಶಾಂತಮ್ಮನಿಗೆ ಮಗಳು, ಜಯಮ್ಮನಿಗೆ ಒಬ್ಬ ಮಗನಿದ್ದರು, ಇವರು ಕುಟುಂಬದಲ್ಲಿ ಆಸ್ತಿವಂತರಾಗಿದ್ದ ಪರಿಣಾಮ ಎರಡೂ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಎಂದು ಪೋಲಿಸರಿಂದ ತಿಳಿದು ಬಂದಿದೆ. 

      ಇತ್ತೀಚೆಗೆ ಶಾಂತಮ್ಮನ ಮಗಳನ್ನು ವಿವಾಹ ಮಾಡಿಕೊಡಲಾಗಿತ್ತು, ಆ ನಂತರ ಶಾಂತಮ್ಮ ಮತ್ತು ಜಯಮ್ಮನ ನಡುವೆ ಆಸ್ತಿ ವಿಚಾರವಾಗಿ ಕ್ಷುಲ್ಲಕ, ಸಣ್ಣಪುಟ್ಟ ಘರ್ಷಣೆಗಳು ಆಗ್ಗಿಂದಾಗ್ಗೆ ಜಗಳವಾಗುತ್ತಿತ್ತು ಎಂದು ಸ್ಥಳೀಯರಿಂದ ತಿಳಿದು ಬಂದಿತು. ಕಳೆದ ಭಾನುವಾರ ರಾತ್ರಿ ಸೋಮನಹಳ್ಳಿಗೆ ಸುಮಾರು 1.ಕಿ.ಮೀ ದೂರದ ತೋಟದ ಬಳಿ ಗಂಗಾಧರಯ್ಯನನ್ನು ಕೊಲೆಗೈಯಲಾಗಿದೆ. ಸ್ಥಳದಲ್ಲಿ ಮೃತವ್ಯಕ್ತಿಯ ಚಪ್ಪಲಿ, ಪಂಚೆ, ಮೊಬೈಲ್ ಪತ್ತೆಯಾಗಿದೆ.

      ಮೃತ ವ್ಯಕ್ತಿಯನ್ನು ಚಿ.ನಾ.ಹಳ್ಳಿ-ತಿಪಟೂರು ಗಡಿ ಭಾಗದ ಕಟ್ಟೆಕಳೆವು ಗಡಿ ಹಳ್ಳದಲ್ಲಿ ಎಸೆದು ಹೋಗಿದ್ದು ಸೋಮವಾರ ಬೆಳಗ್ಗೆ ದಾರಿಹೋಕರಿಂದ ಪೋಲಿಸರಿಗೆ ಸುದ್ದಿ ತಲುಪಿದೆ. ಸ್ಥಳಕ್ಕೆ ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್, ಕೆ.ಬಿ.ಕ್ರಾಸ್‍ನ ತನಿಖಾಧಿಕಾರಿ ರಾಮ್‍ಪ್ರಸಾದ್, ಚಿ.ನಾ.ಹಳ್ಳಿ ವೃತ್ತ ನಿರೀಕ್ಷಣಾಧಿಕಾರಿ ಸುರೇಶ್, ಪಿಎಸ್‍ಐ ಟಿ.ಹೆಚ್.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶಿಲಿಸಿ ತನಿಖೆ ಕೈಗೊಂಡಿದ್ದಾರೆ.

 

(Visited 18 times, 1 visits today)