ತುಮಕೂರು:

      ಇಂದು ಹಸಿವಿಗಾಗಿ ರಾಜಕಾರಣ ಮಾಡುತ್ತಿಲ್ಲ. ಹಸುವಿಗಾಗಿ ರಾಜಕಾರಣ ನಡೆಯುತ್ತಿದೆ. ಇದು ಅಪಾಯಕಾರಿ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

      ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಶಶಾಂಕ ಪ್ರಕಾಶನ ಆಯೋಜಿಸಿದ್ದ ಡಾ. ಓ. ನಾಗರಾಜು ಅವರ ಹಟ್ಟಿ ಅರಳಿ ಹೂವಾಗಿ ಕಾಂದಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಸಂಘರ್ಷ ನಡೆಯದಿದ್ದರೆ ಅದು ಒಳ್ಳೆಯ ಕಾಲ. ಬ್ರಿಟೀಷರ ಮತ್ತು ರಾಜರ ಕಾಲವೇ ಎಷ್ಟೋ ಉತ್ತಮವಾಗಿತ್ತು ಎಂದು ಹೇಳುವವರೂ ಇದ್ದಾರೆ. ಅಂದು ಕೂಡ ಸಮಸ್ಯೆಗಳು ಇದ್ದವು. ಸಂಘರ್ಷ ನಡೆದರೆ ಅಲ್ಲಿ ಏನೋ ನಡೆಯುತ್ತಿದೆ ಎಂದರ್ಥ. ಹಸಿವಿಗಾಗಿ ರಾಜಕಾರಣ ಮಾಡಿದರೆ ಒಳ್ಳೆಯದು. ಅದು ಆಗದೆ ಹಸುವಿನ ರಾಜಕಾರಣ ನಡೆಯುತ್ತಿದೆ ಎಂದು ತಿಳಿಸಿದರು.

      ಚಳವಳಿಗಳು ಸೃಜನಶೀಲತೆಯನ್ನು ನಾಶ ಮಾಡುತ್ತದೆ ಎಂಬ ವಾದವಿದೆ. ಆದರೆ ಇದು ಸುಳ್ಳು. ಸಾಮಾಜಿಕ ಮತ್ತು ಸಾಹಿತ್ಯಕ ಚಳವಳಿಗಳು ನಡೆಯುವುದರಿಂದಲೇ ಒಳ್ಳೆಯ ಕೃತಿಗಳು ಮೂಡಿಬರಲು ಸಾಧ್ಯ. ಅದರ ಭಾಗವೇ ಹಟ್ಟಿ ಅರಳಿ ಹೂವಾಗಿ ಕೃತಿಯಂಥವುಗಳು ಬರಹ ರೂಪ ತಾಳುತ್ತವೆ ಎಂದರು.

      ಪಂಪ, ವಚನಕಾರರು, ಕುಮಾರವ್ಯಾಸ ಸಾಹಿತ್ಯ ಕೃತಿಗಳಲ್ಲಿ ಚಳವಳಿಯಿಂದ ಸೃಜನಶೀಲವಾಗಿ ಅಭಿವ್ಯಕ್ತಿಸಿರುವುದನ್ನು ನಾವು ನೋಡಬಹುದು. ಈ ಸನ್ನಿವೇಶಗಳನ್ನು ನೋಡದೇ ಹೋದರೆ ಇಂತಹ ಅಪವ್ಯಾಖ್ಯಾನಗಳು ಮೂಡಿಬರಲು ಸಾಧ್ಯ. ಪಂಪ ರಾಜಪ್ರಭುತ್ವದ ವಿರುದ್ದ ದನಿ ಎತ್ತಿದ. ವಚನಕಾರರು ಭಾಷಾ ಚಳವಳಿಯನ್ನೇ ನಡೆಸುವ ಜೊತೆಗೆ ಧಾರ್ಮಿಕ ಚಳವಳಿಯನ್ನು ಮಾಡಿದರು ಎಂದು ವಿವರಿಸಿದರು.

      ದಲಿತ-ಬಂಡಾಯ ಸಾಹಿತ್ಯ ಬಂದ ಮೇಲೆ ಸಾಹಿತಿಗಳು ಬೀದಿಗೆ ಬಂದರು. ಹಟ್ಟಿಗಳಿಗಳ ಅನುಭವ ಹೊರಬಂತು. 70ರ ದಶಕ ದಲ್ಲಾದ ಚಳವಳಿಯ ಪರಿಣಾಮ ಇಂದು ಊರು ಕೇರಿ, ಹಟ್ಟಿಗಳು ಕೂಡ ಸಾಹಿತ್ಯದ ಒಳಗೆ ಬಂದಿವೆ. ಇತ್ತೀಚಿನ ಬರಹಗಳಲ್ಲಿ ಹೊಸ ಚಹರೆ ಕಂಡುಬರುತ್ತಿದೆ. ಜನಪರ ಚಳವಳಿಗಳ ಪ್ರಭಾವ ಪರಿಣಾಮವೇ ಇಂತಹ ಕೃತಿಗಳ ರಚನೆಗೆ ಕಾರಣ ಎಂದು ತಿಳಿಸಿದರು.

      ಹಟ್ಟಿ ಅರಳಿ ಹೂವಾಗಿ ಒಂದು ಆದರ್ಶದ ಕಾದಂಬರಿ. ಇಲ್ಲಿ ಬರುವ ಪಾತ್ರಗಳೆಲ್ಲವೂ ಒಳ್ಳೆಯವೇ ಆಗಿದೆ. ಕಾದಂಬರಿಕಾರರ ಆಶಯ ಒಳ್ಳೆಯದೆ.ಹಟ್ಟಿಗಳ ಅರಳಿ ಹೂವಾಗುವ ಮತ್ತು ಹಟ್ಟಿಗಳು ನರಳಿ ನೋವಾಗುವ ಬಗೆಯೂ ಇದೆ. ಶಿಕ್ಷಣ ಪಡೆದವರು ಹೊಸ ಆಲೋಚನೆ ಮಾಡತೊಡಗುತ್ತಾರೆ. ಕಾದಂಬರಿಯಲ್ಲಿ ಈ ಬದಲಾವಣೆಯೂ ಕಂಡುಬರುತ್ತದೆ ಎಂದರು.

      ಹಟ್ಟಿಗಳಿಂದ ಬಂದ ಹೊಸ ಅನುಭವ ದ್ರವ್ಯದ ಭಾಗವಾಗಿ ಇದು ಕಾದಂಬರಿಯಾಗಿದೆ. ಕಾದಂಬರಿ ಉತ್ತಮವಾಗಿ ಓದಿಸಿಕೊಂಡು ಹೋಗುತ್ತದೆ. ಪ್ರಜಾಪ್ರಭುತ್ವದ ನಂತರ ಹಳ್ಳಿಗಳು ಬದಲಾಗಿರುವುದನ್ನು ಹಟ್ಟಿ ಅರಳಿ ಕಾದಂಬರಿಯಲ್ಲಿ ದಾಖಲಾಗಿದೆ. ಇದು ಡಾ.ಒ.ನಾಗರಾಜು ಅವರ ಕನಸಿನ ಕಾದಂಬರಿ. ಸಮಾಜ ಸೌಹಾರ್ದವಾಗಿರಬೇಕು ಎಂಬ ಕಾದಂಬರಿ ಕಾರರ ಕನಸು ನನಸಾದರೆ ಒಳ್ಳೆಯದು ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಸಮಾಜ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿ ಡಾ.ಆರನಕಟ್ಟೆ ರಂಗನಾಥ ಹಟ್ಟಿ ಅರಳಿ ಹೂವಾಗಿ ಕಾದಂಬರಿ ಕುರಿತು ಮಾತನಾಡಿದರು. ಯುವಜನ ಮುಖಂಡ ಬಿ.ರಾಜಶೇಖರಮೂರ್ತಿ, ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್, ಕಾದಂಬರಿಕಾರ ಡಾ.ಓ.ನಾಗರಾಜು ಉಪಸ್ಥಿತರಿದ್ದರು.

      ಉಪನ್ಯಾಸಕಿ ಶ್ವೇತಾರಾಣಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಓ.ನಾಗಭೂಷಣ್ ಬಗ್ಗನಡು ಕಾರ್ಯಕ್ರಮ ನಿರೂಪಿಸಿದರು. ಯುವ ಮುಖಂಡ ರಂಗಥಾಮಯ್ಯ ಹಾಡು ಹಾಡಿದರು. ಪ್ರಾಧ್ಯಾಪಕ ತಿಪ್ಪೇಸ್ವಾಮಿ ವಂದಿಸಿದರು.

(Visited 24 times, 1 visits today)