ತಿಪಟೂರು: ಹಲವು ದಶಕಗಳಿಂದ ಬಗರ್ ಹುಕುಂ ಅಡಿಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದ ಜಮೀನನ್ನು ತಾಲೂಕು ಆಡಳಿತ ಏಕಾಏಕಿ ಅರಣ್ಯ ಹಾಗೂ ಸರ್ಕಾರಿ ಜಮೀನು ಎಂದು ದಾಖಲಿಸಿ ವಶಪಡಿಸಿಕೊಳ್ಳುತ್ತಿರುವ ಕ್ರಮ ಖಂಡಿಸಿ, ತಾಲೂಕಿನ ಹೊನ್ನವಳ್ಳಿ ಹೋಬಳಿಯ ರುದ್ರಾಪುರದಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಹಾಗೂ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಸಮಾವೇಶದಲ್ಲಿ ೫೦೦ಕ್ಕೂ ಹೆಚ್ಚು ರೈತರು ಭಾಗವಹಿಸಿ, ಭೂಮಿ ಹಕ್ಕಿಗಾಗಿ ಹೋರಾಟದ ಸಂಕಲ್ಪ ಮಾಡಿದರು.
ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದು ಅಕ್ಷಮ್ಯ ಅಪರಾಧ. ಕಂದಾಯ ಸಚಿವರು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಿದ್ದರೂ, ಸ್ಥಳಿಯ ಮಟ್ಟದಲ್ಲಿ ಪಹಣಿಯಿಂದ ರೈತರ ಹೆಸರು ತೆಗೆದು ಹಾಕಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕಲ್ಲು-ಮಣ್ಣಿನ ಪ್ರದೇಶವನ್ನು ಭಾವಿತ ಅರಣ್ಯವೆಂದು ಗುರುತಿಸಿ ಜಮೀನು ಕಸಿಯಲು ಬರುವ ಅಧಿಕಾರಿಗಳನ್ನು ಗ್ರಾಮಸ್ಥರು ದೇವಾಲಯದ ಕಂಬಕ್ಕೆ ಕಟ್ಟಿಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಜಿಲ್ಲಾಧಿಕಾರಿ ನಿಂಗಪ್ಪ ಮಾತನಾಡಿ, ಕಾನೂನು ಎಂಬುದು ರೈತನನ್ನು ಎದುರಿಸುವ ಆಯುಧವಲ್ಲ, ಅದು ಭೂಮಿಯನ್ನು ರಕ್ಷಿಸುವ ಕವಚ. ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ರೈತರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗೃತ ರಾಗಿರಬೇಕು. ಪ್ರತಿಯೊಬ್ಬ ರೈತನು ತನ್ನ ಜಮೀನಿನ ದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳಬೇಕು. ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಇರುವ ಕಾನೂನು ಹಕ್ಕುಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದರು.
ಎಐಕೆಕೆಎಂಎಸ್ ಸಂಘಟನೆಯ ಅಧ್ಯಕ್ಷ ಎಂ.ಶಶಿಧರ್, ಉಪಾಧ್ಯಕ್ಷ ಶಿವಪ್ರಕಾಶ್, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಿದ್ದಬಸವಯ್ಯ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶವಂತ್, ತೀಮ್ಮೇಗೌಡ ಗಡಬನಹಳ್ಳಿ, ಕೆಆರ್ಎಸ್ ಪಕ್ಷದ ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ರುದ್ರೇಶಹೊಸದುರ್ಗ, ಲೋಕೇಶ್ ಭೈರನಾಯಕನಹಳ್ಳಿ, ಅಲ್ಲಾಬಕಾಷ್, ರಾಜಮ್ಮ ರೈತರಾದ ಮಲ್ಲಪ್ಪ, ಕುಮಾರ್, ದಶರಥ, ಓಂಕಾರಮೂರ್ತಿ, ಬಸವನಾಯ್ಕ ಇದ್ದರು.
(Visited 1 times, 1 visits today)





