
ತುಮಕೂರು: ಶಿಕ್ಷಣ, ಸಂಸ್ಕೃತಿ, ಮಾನವತೆ ಉಳಿಸುವ ಘೋಷವಾಕ್ಯದೊಂದಿಗೆ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರವನ್ನು ನಡೆಸಲಾಯಿತು.
ಶಿಬಿರವನ್ನು ಎಐಡಿಎಸ್ಒ ತುಮಕೂರು ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಲಕ್ಕಪ್ಪ ಸಿ.ಬಿ. ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ರಾಜ್ಯ ಉಪಾಧ್ಯಕ್ಷ ರಲ್ಲೊಬ್ಬರಾದ ಅಪೂರ್ವರವರು “ಸಾಮಾಜಿಕ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ” ಎಂಬ ಮುಖ್ಯ ವಿಷಯದ ಕುರಿತು ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಸಮಾಜದ ಉನ್ನತಿಗಾಗಿ ನಿಸ್ವಾರ್ಥವಾಗಿ ಬದುಕಿದ ಮತ್ತು ತ್ಯಾಗ ಮಾಡಿದ ವಿವೇಕಾನಂದ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಮತ್ತು ಅನೇಕ ಮಹನೀಯರ ಜೀವನದಿಂದ ಸ್ಫೂರ್ತಿ ಪಡೆದು ವಿದ್ಯಾರ್ಥಿಗಳು ಸದಾ ಸಾಮಾಜಿಕ ಬದಲಾವಣೆಗೆ ಮುನ್ನುಗ್ಗಬೇಕು. ವಿದ್ಯಾರ್ಥಿಗಳನ್ನು ಕೇವಲ ವೈಯಕ್ತಿಕ ಯಶಸ್ಸಿಗಾಗಿ ಮಾತ್ರವಲ್ಲದೆ ಸಮಾಜದ ಪ್ರಗತಿ ಮತ್ತು ಉನ್ನತಿಗಾಗಿ ಸಿದ್ಧಪಡಿಸುವ ಸಮಗ್ರ ವ್ಯಕ್ತಿತ್ವ ವಿಕಸನದ ಅಗತ್ಯವನ್ನು ಅವರು ವಿವರಿಸಿದರು.
ಮುಂದುವರೆದು ಪ್ರಸ್ತುತ ಶೈಕ್ಷಣಿಕ ಮತ್ತು ಸಮಾಜದ ಸಮಸ್ಯೆಗ ಳನ್ನು ಕುರಿತು ಹೇಳಿದರು, ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು, ದುಬಾರಿ ಶಿಕ್ಷಣ, ನಿರುದ್ಯೋಗ ,ಜಾತಿ ವಾದದ ಅಸ್ತಿತ್ವ ಮತ್ತು ಮುಂತಾದ ಸಮಸ್ಯೆಗಳನ್ನು ತೊಡೆದು ಹಾಕಲು ವಿದ್ಯಾರ್ಥಿ ಯುವಜನರು ಮುಂದೆ ಬರಬೇಕೆಂದು ಕರೆ ನೀಡಿದರು
ಶಿಬಿರದಲ್ಲಿ ಕಿರುಚಿತ್ರ ಪ್ರದರ್ಶನ ಮತ್ತು ಮನರಂಜನ ಕ್ರೀಡಾ ಚಟುವಟಿಕೆಗಳು ನಡೆಸಲಾಯಿತು. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳ ಒಳಗೆ ಮತ್ತು ಹೊರಗೆ ನಡೆಯುವ ಪ್ರತಿಯೊಂದು ಅನ್ಯಾಯದ ವಿರುದ್ಧ ಚಳುವಳಿಗಳನ್ನು ನಿರ್ಮಿಸಲು ಮತ್ತು ಧ್ವನಿ ಎತ್ತಲು, ಹಾಗೂ ಈ ಮಹಾನ್ ವ್ಯಕ್ತಿಗಳ ಆಲೋಚನೆಗಳು ಮತ್ತು ತತ್ವಗಳನ್ನು ತಮ್ಮ ಜೀವನ ಮತ್ತು ಕಾರ್ಯಗಳಲ್ಲಿ ಸಕ್ರಿಯವಾಗಿ ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಹಿಂದಿರುಗಿದರು.



