ತುರುವೇಕೆರೆ: ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ. ಮಕ್ಕಳು ಸಣ್ಣವರಿರುವಾಗಲೇ ಉತ್ತಮ ಸಂಸ್ಕಾರವನ್ನು ಪೋಷಕರು ಕಲಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶಿಸಿದರು.
ತಾಲೂಕಿನ ಅರೇಮಲ್ಲೇನಹಳ್ಳಿಯ ಶ್ರೀ ಲಕ್ಕಮ್ಮ ದೇವಿ, ಶ್ರೀ ತುಳಸಮ್ಮ ದೇವಿ, ಶ್ರೀ ಭೈರವೇಶ್ವರಸ್ವಾಮಿ ದೇವರುಗಳ ನೂತನ ದೇವಾಲಯ ಉದ್ಘಾಟನೆ, ನೂತನ ದೇವತಾಮೂರ್ತಿಗಳ ಪ್ರತಿಷ್ಠಾಪನೆ, ನೂತನ ಗೋಪುರ ಕಳಸ ಪ್ರತಿಷ್ಠಾಪನೆ ಕುಂಭಾಭಿಷೇಕ ಮಹೋತ್ಸವದಲ್ಲಿ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದ ಅವರು ನಮ್ಮಲ್ಲಿ ಪಾಪ ಕರ್ಮಗಳು ತುಂಬಿ ತುಳುಕುತ್ತಿರುವುದರಿಂದ ದೇವರು ನಮ್ಮ ಕಣ್ಣಿಗೆ ಕಾಣದಾಗಿದ್ದಾನೆ. ನಮ್ಮಲ್ಲಿ ಅಜ್ಞಾನ ತುಂಬಿ ಹೋಗಿದೆ. ಎಲ್ಲಿ ನೋಡಿದರೂ ಅನ್ಯಾಯ, ಭ್ರಷ್ಠಾಚಾರ ತುಂಬಿಹೋಗಿದೆ. ದೇವರ ಇರುವಿಕೆಯನ್ನು ಪ್ರಶ್ನಿಸುವ, ದೇವರನ್ನೇ, ದೇವರ ದುಡ್ಡನ್ನೇ ಹೊತ್ತೊಯ್ಯುವ ದುರ್ಬುದ್ದಿ ಜನರಲ್ಲಿ ಬಂದಿದೆ. ದೇವರೆಂಬ ಭಯ ಇಲ್ಲದಾಗಿದೆ. ಅನೇಕ ಜನ್ಮಗಳಿಂದಲೂ ಪಾಪ ಕರ್ಮಗಳನ್ನು ಮಾಡಿರುವುದರಿಂದ ನಮಗೆ ದೇವರು ಕಾಣಲಾರ. ನಾವು ಮಾಡಿರುವ ಕರ್ಮ ಗಳನ್ನು ಈ ಜನ್ಮದಲ್ಲಾದರೂ ತೊಳೆದುಕೊಳ್ಳಲು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಹಾಗಾಗಿ ಮಕ್ಕಳು ಚಿಕ್ಕವರಿದ್ದಾಗಲಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಆಗ ಮಾತ್ರ ನಾವು ಆ ಮಗುವಿನಿಂದ ಉತ್ತಮ ನಡವಳಿಕೆ ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.
ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಯನ್ನು ಸ್ವ ಅನುಭವದಿಂದ ಪಡೆದಲ್ಲಿ ಆತ್ಮಶಕ್ತಿ ವೃದ್ಧಿಯಾಗಲಿದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥಸ್ವಾಮೀಜಿ ಹೇಳಿದರು.
ಭಕ್ತಿ ಶ್ರದ್ಧೆಯಿಂದ ಶಿಲೆಯನ್ನಿಟ್ಟು ಗುರುಗಳ ಮಾರ್ಗದರ್ಶ ನದಲ್ಲಿ ಪೂಜಿಸಿದರೂ ಸಹ ಅದು ಶಂಕರನಾಗುತ್ತದೆ. ಧಾರ್ಮಿಕ ವಿಚಾರಗಳು ಬಂದಾಗ ಗ್ರಾಮದಲ್ಲಿ ಒಗ್ಗಟ್ಟು ತೋರಿಸಿ ಸತ್ಕಾರ್ಯ ಮಾಡಿದಲ್ಲಿ ಗ್ರಾಮವೇ ಶಾಂತಿಯಿ0ದ ಇರುತ್ತದೆ ಎಂಬುದಕ್ಕೆ ಈ ಅರೇಮಲ್ಲೇನಹಳ್ಳಿ ಗ್ರಾಮವೇ ಸಾಕ್ಷಿ ಎಂದು ಹೇಳಿದರು. ಭಗವಂತನನ್ನು ನಂಬಿದರೆ ಭಗವಂತ ಎಂದೂ ಕೈ ಬಿಡುವುದಿಲ್ಲ. ದ್ವೇಷ ಅಸೂಯೆ ಒಳ್ಳೆಯದಲ್ಲ. ಅರಿತು ಬಾಳಿದರೆ ಸಕಲವೂ ನಮ್ಮದಾಗುತ್ತದೆ. ಐಶ್ವರ್ಯ ಎಂದೂ ಶಾಶ್ವತವಲ್ಲ. ಅಗತ್ಯವಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಮನಸ್ಸಿಗೆ ತೃಪ್ತಿ ದೊರೆಯಲಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ದೇವಾಲಯದ ಮುಖ್ಯಸ್ಥರಾದ ಎ.ಬಿ.ಜಗದೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ದೊಡ್ಡಾಘಟ್ಟ ಚಂದ್ರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ, ಹಾಲು ಉತ್ಪಾದಕರ ಸಹಕಾರ ಸಂಘಗಳ ತಾಲೂಕು ನಿರ್ದೇಶಕ ಸಿ.ವ.ಮಹಲಿಂಗಯ್ಯ, ಸುಬ್ರಮಣಿ ಶ್ರೀಕಂಠೇಗೌಡ, ಗುತ್ತಿಗೆದಾರ ತ್ಯಾಗರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿ, ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎಚ್.ಧನಪಾಲ್. ನಿರ್ದೇಶಕ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಟಿ.ಆರ್.ಸುರೇಶ್, ಟಿಎಪಿಸಿಎಂಎಸ್ ನ ಮಾಜಿ ಉಪಾಧ್ಯಕ್ಷ ಗೋವಿಂದಪ್ಪ, ಪಿ ಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೇಮಚಂದ್ರು, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ವಿವಿದೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

(Visited 1 times, 1 visits today)