ಹುಳಿಯಾರು: ಸರ್ಕಾರ ಮದ್ಯ ಮಾರಾಟದ ಅಂಗಡಿಗಳನ್ನು ತೆರೆದಿದ್ದರೂ, ಅಲ್ಲಿಗೆ ಹೋಗದಿರುವ ನಿರ್ಧಾರ ನಮ್ಮದಾಗಬೇಕು ಎಂದು ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಪಂ ಪಿಡಿಒ ರಮೇಶ್ ಅವರು ಕರೆ ನೀಡಿದರು.
ಹುಳಿಯಾರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಮಧ್ಯ ವರ್ಜನ ಶಿಬಿರದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಪ್ರಮುಖ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.
ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿ ಮೊದಮೊದಲು ಸ್ನೇಹಿತರ ಒತ್ತಾಯಕ್ಕೋ ಅಥವಾ ಚುನಾವಣೆಯ ಸಂದರ್ಭದಲ್ಲಿ ಸಿಗುವ ಉಚಿತ ಮದ್ಯಕ್ಕೋ ಮಾರುಹೋಗುತ್ತಾನೆ. ತದನಂತರ ಇದು ವ್ಯಸನವಾಗಿ ಬದಲಾಗಿ, ತಮಗಿರುವ ಜಮೀನನ್ನು ಅಡವಿಟ್ಟು ಕೊನೆಗೆ ಅದನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೊನೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದಾಗ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಿ ಇಡೀ ಕುಟುಂಬವೇ ಬೀದಿಗೆ ಬೀಳುತ್ತದೆ. ಕೊನೆಗೆ ಹೆಂಡತಿ-ಮಕ್ಕಳ ಭವಿಷ್ಯ ಅಂಧಕಾರವಾಗುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಎರಡು-ಮೂರು ವರ್ಷಗಳ ಕಾಲ ಮದ್ಯ ಸಿಗದೇ ಇದ್ದಾಗ ಎಷ್ಟೋ ಕುಡುಕರು ಅನಿವಾರ್ಯವಾಗಿ ಕುಡಿತವನ್ನು ಬಿಟ್ಟಿದ್ದರು. ಇಂದು ಅವರು ಉತ್ತಮ ವ್ಯವಸಾಯಗಾರರಾಗಿ, ಸ್ವಂತ ಮನೆ ಕಟ್ಟಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಕೊರೊನಾ ಬಂದು ನಮಗೆ ಮದ್ಯ ಸಿಗದೇ ಇದ್ದದ್ದೇ ನಮ್ಮ ಬದುಕು ಬದಲಾಗಲು ಕಾರಣವಾಯಿತು ಎಂದು ಅವರೇ ಸ್ವತಃ ಒಪ್ಪಿಕೊಳ್ಳುತ್ತಿದ್ದಾರೆ. ಅಂದರೆ, ಮನಸ್ಸು ಮಾಡಿದರೆ ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಿದೆ ಎಂಬುದಕ್ಕೆ ಕೊರೊನಾ ದಿನಗಳೇ ಸಾಕ್ಷಿ ಎಂದು ಉದಾಹರಿಸಿದರು.
ಇಂದು ನಮ್ಮ ಹಳ್ಳಿಗಳನ್ನು ನಾವು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾದರೆ ನಮಗೆ ಮೂರು ಸವಾಲುಗಳಿವೆ. ನಮ್ಮ ಗ್ರಾಮಗಳನ್ನು ನಾವು ’ಋಣ ಮುಕ್ತ, ವ್ಯಸನ ಮುಕ್ತ ಹಾಗೂ ವ್ಯಾಜ್ಯ ಮುಕ್ತ’ ಮಾಡಬೇಕಾಗಿದೆ. ಹೆಣ್ಣುಮಕ್ಕಳು ತಮ್ಮ ಗಂಡAದಿರು ಕುಡಿತ ಬಿಟ್ಟು ನೆಮ್ಮದಿಯ ಜೀವನ ನಡೆಸಲಿ ಎಂದು ಬಯಸುತ್ತಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗದೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಬೇಕು. ಉಳಿಸಿದ ಹಣವೇ ಗಳಿಸಿದ ಹಣಕ್ಕೆ ಸಮಾನವಾಗಿದ್ದು, ಕುಡಿತಕ್ಕೆ ವ್ಯಯಿಸುವ ಹಣವನ್ನು ಉಳಿಸಿ ಕುಟುಂಬದ ನಿರ್ವಹಣೆಗೆ ಬಳಸಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಜಗದೀಶ್, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುಜರಿನಾಗಣ್ಣ, ಒಕ್ಕೂಟದ ಅಧ್ಯಕ್ಷರಾದ ಎಚ್.ಡಿ.ದುರ್ಗರಾಜು, ಶಿಬಿರಾಧಿಕಾರಿ ಕೆ.ರಮೇಶ್, ಸಹಾಯಕರಾದ ವೆಂಕಟೇಶ್, ರಾಜೇಶ್, ಜನಜಾಗೃತಿ ಮೇಲ್ವಿಚಾರಕ ದರ್ಶನ್, ವಲಯ ಮೇಲ್ವಿಚಾರಕರಾದ ಭಾಗ್ಯಮ್ಮ, ಯಳನಾಡು ವಲಯ ಮೇಲ್ವಿಚಾರಕರಾದ ಕೇಶವಮೂರ್ತಿ, ಜ್ಞಾನವಿಕಾಸದ ಸಮನ್ವಯಾಧಿಕಾರಿ ಸುನಿತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

(Visited 1 times, 1 visits today)