ತುಮಕೂರು: ದಲಿತ ಸೇನೆ ರಾಮ್ ವಿಲಾಸ್ ಸಂಘಟನೆ, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸಂಘಟನೆಗಳ ವತಿಯಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಸರ್ಕಾರಿ ಶಾಲೆಯ ಜಾಗವನ್ನು ಸರ್ಕಾರಿ ಶಾಲೆಗಳಿಗೆ ಉಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಕುರಿತು ದಲಿತ ಸೇನೆ ರಾಮ್ ವಿಲಾಸ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಗೂಳುರು ಸಿದ್ಧರಾಜು ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ಬಡಮಕ್ಕಳಿಗೆ ಮೌಲ್ಯಾಧಾರಿತ ಗುಣಾತ್ಮಕ ಶಿಕ್ಷಣ ನೀಡಲು ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದ ಇಂತಹ ಸಂದರ್ಭದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಸಂಘ ಸಂಸ್ಥೆಯವರು ತಮ್ಮ ಸ್ವಾರ್ಥ ಸಾಧನೆ ಈಡೇರಿಕೆಗಾಗಿ ಸರ್ಕಾರಿ ಶಾಲೆಯ ಜಾಗವನ್ನು ಕೆಲ ಖಾಸಗಿ ಸಂಘ ಸಂಸ್ಥೆಯ ಹೆಸರಿಗೆ ಖಾತೆ ಮಾಡಲು ಸರ್ವ ರೀತಿಯಲ್ಲೂ ಪಿತೂರಿ ಮಾಡಿದ್ದಾರೆ. ಈ ಹಿಂದೆ ಬೆಂಗಳೂರು ಮೂಲದ ಎನ್. ಜಿ. ಓ. ಸಂಸ್ಥೆಯ ಸಹಯೋಗಕ್ಕೆ ಕೊಡಲು ಒಪ್ಪಿದ್ದರು ಆ ಸಂದರ್ಭದಲ್ಲಿ ಕೆಲ ಮಾದ್ಯಮಗಳು ಮತ್ತು ಪತ್ರಿಕೆಗಳಲ್ಲಿ ಆಕ್ಷೇಪ ವ್ಯಕ್ತವಾದ ನಂತರ ಅದನ್ನು ಅಲ್ಲಿಗೆ ನಿಲ್ಲಿಸಿದ್ದರು. ಆದರೆ ಇದೀಗ ಮಾನಸ ಬುದ್ದಿಮಾಂದ್ಯ ಸಂಸ್ಥೆಗೆ ಈ ಶಾಲೆಯ ಜಾಗವನ್ನು ಖಾತೆ ಮಾಡಲು ಮುಂದಾಗಿದ್ದಾರೆ. ಸದರಿ ಶಾಲೆಯಲ್ಲಿ ವಿದ್ಯೆ ಕಲಿಯುತ್ತಿರುವವರು ಸಹ ಅಂಗವಿಕಲ ಮಕ್ಕಳು, ವಿಶೇಷ ಚೇತನ ಮಕ್ಕಳ ಮೇಲೆ ನಮಗೆ ಅಪಾರ ಪ್ರೀತಿ ಹಾಗೂ ಅನುಕಂಪವೂ ಇದೆ, ಆದರೆ ನೈಜವಾದ ಮಕ್ಕಳಿಗೆ ಪಾಠ ಪ್ರವಚನ ಮಾಡಲು ತೊಂದರೆಯಾಗುತ್ತಿದೆ, ಜೊತೆಗೆ ಈ ಶಾಲೆಯನ್ನು ಖಾಸಗಿ ಸಂಘ ಸಂಸ್ಥೆ ನಡೆಸುತ್ತಿರುವುದರಿಂದ ಸರ್ಕಾರಿ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಲು ಅವಕಾಶವಾಗುತ್ತದೆ. ಈ ರೀತಿಯಾಗಿ ಮಾಡಿದರೆ ಸರ್ಕಾರಿ ಶಾಲೆಯನ್ನು ಮುಚ್ಚಿಸಿ ಜಾಗವನ್ನು ಕಬಳಿಸಬಹುದು ಎಂಬ ದುರುದ್ದೇಶ ಹೊಂದಿರುತ್ತಾರೆ ಎಂದು ತಿಳಿಸಿದರು.
ಇತ್ತೀಚೆಗೆ ಮಾನಸ ಬುದ್ದಿಮಾಂದ್ಯ ಸಂಸ್ಥೆಯವರು ಏಕಾಏಕಿ ಸರ್ಕಾರಿ ಶಾಲೆಯ ಹತ್ತಿರ ಹೋಗಿ ಶಾಲಾ ಸಿಬ್ಬಂದಿಗಳಿಗೆ ನಿಮ್ಮ ಮಕ್ಕಳನ್ನು ಆಚೆ ಕಳಿಸಿ, ನಿಮ್ಮ ದಾಖಲಾತಿಗಳನ್ನು ಬೇರೆ ಕಡೆ ಸ್ಥಳಾಂತರಿಸಿ ನಾವು ಬಿಲ್ಡಿಂಗ್ ಕೆಡವಬೇಕು, ಕಟ್ಟಡ ಕಟ್ಟಬೇಕು ನಮ್ಮ ಸಂಸ್ಥೆಗೆ ಈ ಜಾಗ ಆಗಿದೆ ಎಂದು ಧಮ್ಮಿ ಹಾಕುತ್ತಿದ್ದಾರೆ. ಈ ವಿಚಾರವಾಗಿ ಮುಖ್ಯಶಿಕ್ಷಕರು ಹಾಗೂ ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಹಾನಗರ ಪಾಲಿಕೆಯವರಿಗೆ ಸರ್ಕಾರಿ ಶಾಲೆಯ ಜಾಗವನ್ನು ಅದೇ ಶಾಲೆಯ ಹೆಸರಿಗೆ ಖಾತೆ ಮಾಡಲು ಸುಮಾರು ಬಾರಿ ಅರ್ಜಿ ಸಲ್ಲಿಸಿರುತ್ತಾರೆ. ಆದರೂ ಮಹಾನಗರ ಪಾಲಿಕೆಯವರು ಸರ್ಕಾರಿ ಶಾಲೆಯ ಹೆಸರಿಗೆ ಖಾತೆ ಮಾಡಿರುವುದಿಲ್ಲ. ಜೊತೆಗೆ ರಾಜ್ಯ ಸರ್ಕಾರದ ಆದೇಶದಂತೆ ೧೨ ವರ್ಷಗಳ ಕಾಲ ಯಾವುದೇ ಶಾಲಾ ಕಾಲೇಜು ಅನುಭವದಲ್ಲಿದ್ದರೆ ಸದರಿ ಜಾಗವನ್ನು ಅದೇ ಶಾಲಾ ಕಾಲೇಜಿಗೆ ಖಾತೆ ಮಾಡಬೇಕೆಂಬ ಆದೇಶವಿದ್ದರೂ ಸಹ ಅದನ್ನು ಗಾಳಿಗೆ ತೂರಿ, ಮಹಾನಗರ ಪಾಲಿಕೆಯವರು ಖಾಸಗಿ ಸಂಸ್ಥೆಯವರೊAದಿಗೆ ಶಾಮೀಲಾಗಿ ಸರ್ಕಾರಿ ಶಾಲೆಯ ಹೆಸರಿಗೆ ಖಾತೆ ಮಾಡುತ್ತಿಲ್ಲ ಎಂದು ಗಂಭೀರ ಆರೋಪವನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಕುಮಾರ್ ಮಾಡಿದ್ದಾರೆ.
ಮುಂದುವರೆದು ಮಾತನಾಡಿ ಪರಿಶಿಷ್ಠ ಜಾತಿ ಮತ್ತು ಪಂಗಡದ ಮಕ್ಕಳು, ಹಿಂದುಳಿದ, ಅಲ್ಪಸಂಖ್ಯಾತರ ಬಡಮಕ್ಕಳ ಹಿತದೃಷ್ಟಿಯಿಂದ ತುಮಕೂರು ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗಾಂಧಿನಗರ, ಶಾಲೆಯನ್ನು ಇದೇ ಸರ್ಕಾರಿ ಶಾಲೆಯ ಹೆಸರಿಗೆ ಖಾತೆ ಮಾಡಿಕೊಟ್ಟು, ಸರ್ಕಾರಿ ಆಸ್ತಿ ಕಾಪಾಡಿ ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಮತ್ತು ಮೌಲ್ಯಾಧಾರಿತ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ. ಮಾತನಾಡಿ ಈ ಸರ್ಕಾರಿ ಶಾಲಾ ಮಕ್ಕಳನ್ನು ಈ ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಮಾಡದೇ ಹೊರ ದಬ್ಬಲು ಸಂಚು ರೂಪಿಸಿರುವ ಖಾಸಗಿ ಸಂಘ ಸಂಸ್ಥೆಯವರ ವಿರುದ್ಧ ಈ ಕೂಡಲೇ ಕ್ರಮವಹಿಸಿ ಇವರುಗಳಿಗೆ ಸಹಕರಿಸುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿಯವರ ವಿರುದ್ಧ ಕ್ರಮ ಕೈಗೊಂಡು ಮಾನಸ ಬುದ್ಧಿಮಾಂಧ್ಯ ಖಾಸಗಿ ಸಂಸ್ಥೆಯವರಿಗೆ ಯಾವುದೇ ಕಾರಣಕ್ಕೂ ಈ ಶಾಲೆಯನ್ನು ಬಿಟ್ಟುಕೊಡದೇ ಸರ್ಕಾರಿ ಶಾಲೆಯನ್ನು ಉಳಿಸಬೇಕಾದ ಕಾರ್ಯವನ್ನು ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಪಾಲಿಕೆ ವತಿಯಿಂದ ಆಗಬೇಕಾಗಿದೆ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಮ್ ವಿಲಾಸ್ ಸಂಘಟನೆ ಜಿಲ್ಲಾಧ್ಯಕ್ಷರಾದ ಗುಳೂರು ಸಿದ್ದರಾಜ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎನ್. ಕೆ ನಿಧಿ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ, ಮುಖಂಡರು ಹಾಗೂ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ಗೋವಿಂದ್ ರಾಜ್ ಕೆ, ಗುಬ್ಬಿ ಶಿವರಾಜ್ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)



