ತುಮಕೂರು:

      ಸ್ವಚ್ಛತೆಯನ್ನು ಕಾಪಾಡಲು ತಮ್ಮ ಜೀವವನ್ನೇ ಲೆಕ್ಕಿಸದಿರುವ ಪೌರಕಾರ್ಮಿಕರು ನಿಜವಾದ ಶ್ರಮಜೀವಿಗಳು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

      ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಬಾಲಭವನದಲ್ಲಿಂದು ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ವಾರಕ್ಕೊಂದು ಬಾರಿ ಪತ್ರಿಕೆಯಲ್ಲಿ ಪೌರಕಾರ್ಮಿಕರು ಸಾವನ್ನಪ್ಪುವ ಸುದ್ದಿಗಳನ್ನು ನೋಡುತ್ತಲೇ ಇದ್ದೇವೆ. ತಮ್ಮ ಜೀವವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರು ದೇಶದ ಸೈನಿಕರಿಗೆ ಸಮಾನರು ಎಂದು ಹೇಳಿದರು.

      ವಿದೇಶಗಳಲ್ಲಿರುವಂತೆ ನಮ್ಮ ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ಸ್ಥಾನ-ಮಾನ ಇಲ್ಲ. ಏಕವಚನದಲ್ಲಿ ಮಾತನಾಡಿಸುವ, ಕೀಳರಿಮೆಯಿಂದ ನೋಡುವ ಭಾವ ಹೋದಾಗ ಮಾತ್ರ ಸಮಾನತೆ ಎನ್ನುವುದು ದೇಶದಲ್ಲಿ ಬರುತ್ತದೆ. ಒಂದೇ ರೀತಿಯ ಸಮಾನತೆಯನ್ನು ತರಲು ಪ್ರಧಾನ ಮಂತ್ರಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಪಾಲಿಕೆಯು ಪೌರಕಾರ್ಮಿಕರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಮೊದಲ ಆದ್ಯತೆಯಾಗಿ ಒದಗಿಸಬೇಕು. ಶ್ರಮಜೀವಿಗಳಾದ ಪೌರಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನವನ್ನು ನೀಡಬೇಕು ಎಂದರು.

      ಕೆಲಸದ ಅವಧಿಯಲ್ಲಿ ತೊಂದರೆಗೊಳಗಾದ ಪೌರಕಾರ್ಮಿಕರಿಗೆ ವಿಮಾ ಸೌಲಭ್ಯ ದೊರೆಯಬೇಕು. ಕೌಶಲ್ಯ ಅಭಿವೃದ್ಧಿಯ ಬಗ್ಗೆ ಪೌರಕಾರ್ಮಿಕರಿಗೆ ತಂಡವಾರು ತರಬೇತಿ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ ಪಾಲಿಕೆ ಕೊಟ್ಟಂತಹ ಅಗತ್ಯ ಉಪಕರಣ ಹಾಗೂ ಸಮವಸ್ತ್ರಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಪೌರಕಾರ್ಮಿಕರಿಗೆ ಕಿವಿಮಾತು ಹೇಳಿದರು.

       ಪಾಲಿಕೆ ಮೇಯರ್ ಲಲಿತಾರವೀಶ್ ಮಾತನಾಡಿ, ನಗರದ 35 ವಾರ್ಡ್‍ಗಳು ಸ್ವಚ್ಛವಾಗಿರಲು ಕಾರಣ ನಮ್ಮ ಪೌರಕಾರ್ಮಿಕರು. ಬೆಳಿಗ್ಗೆ 6 ಗಂಟೆಯಿಂದಲೇ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ರಸ್ತೆ, ಚರಂಡಿ, ಸ್ವಚ್ಛಗೊಳಿಸುತ್ತಾರೆ. ಪೌರಕಾರ್ಮಿಕರ ಜೀವನ ಚೆನ್ನಾಗಿರಲು ಇಂತಹ ಕಾರ್ಯಕ್ರಮ ಅಗತ್ಯ ಎಂದರಲ್ಲದೆ ಪೌರಕಾರ್ಮಿಕರ ಜೀವ ವಿಮೆಗಾಗಿ 58 ಲಕ್ಷ ರೂ. ಗಳನ್ನು ಪಾಲಿಕೆಯಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದರು.

      ಪಾಲಿಕೆ ವೈದ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ವಿಚಾರ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ರಕ್ತದಾನ ಮಾಡಿದರು. ಉತ್ತಮ ಉತ್ತಮ ಸೇವೆ ಸಲ್ಲಿಸಿದ 9 ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. 

(Visited 26 times, 1 visits today)