ತುಮಕೂರು :

      ತಾಲ್ಲೂಕಿನ ಅಮಾನಿಕೆರೆ ಗ್ರಾಮದ ಸರ್ವೇ ನಂ 8, ಕಸಬಾ ಹೋಬಳಿಯ 91,92 (ರೈಲ್ವೆ ನಿಲ್ದಾಣದ ಪಕ್ಕ)ರ ಸರ್ವೇ ನಂಬರ್‍ನಲ್ಲಿರುವ ಎನ್.ಆರ್.ಕಾಲೋನಿಯ ಕುಳವಾಡಿ ವಂಶಸ್ಥರ ಜಮೀನುಗಳನ್ನು ಕೆಲವರು ಕಬಳಿಸುವ ಹುನ್ನಾರ ಮಾಡಿದ್ದು, ಸದರಿ ಜಮೀನುಗಳಿಗೆ ಖಾತೆ, ಪಿಐಡಿಯನ್ನು ಪಾಲಿಕೆ ವತಿಯಿಂದ ಮಾಡಿಕೊಡದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ನೇತೃತ್ವದಲ್ಲಿ ಪಾಲಿಕೆ ಆಯುಕ್ತ ಯೋಗಾನಂದ್ ಅವರಿಗೆ ಮನವಿ ಸಲ್ಲಿಸಲಾಯಿತು.

      ಸದರಿ ಜಮೀನಿಗೆ ಸಂಬಂಧಿಸಿದಂತೆ ತುಮಕೂರು ತಹಶೀಲ್ದಾರ್ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಪ್ರಕರಣಗಳು ಬಾಕಿ ಇರುವಾಗಲೇ ಸಂಬಂಧಿತ ಇಲಾಖೆಗಳು ಬೇರೆಯವರ ಹೆಸರಿಗೆ ಖಾತೆ ಮಾಡಲು ಮುಂದಾಗಿದ್ದು, ಸದರಿ ಜಮೀನಿಗೆ ಸಂಬಂಧಿ ಸಿದಂತೆ ಖಾತೆ ಸೇರಿದಂತೆ ಇತರೆ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

     ಈ ವಿವಾದಿತ ಜಮೀನುಗಳಿಗೆ ಸಂಬಂಧಿಸಿದಂತೆ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆ ಮಾಡಿದರೆ ಅಧಿಕಾರಿಗಳು ಕಾನೂನು ರೀತ್ಯ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು, ಸದರಿ ಜಮೀನಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಅರ್ಜಿಯನ್ನು ಸಲ್ಲಿಸಲಾಯಿತು.

      ಒಂದು ವೇಳೆ ಸದರಿ ಜಮೀನಿಗೆ ಸಂಬಂಧಿಸಿದಂತೆ ಈಗಾಗಲೇ ಖಾತೆ, ಪಿಐಡಿ ಮಾಡಿದ್ದಲ್ಲಿ, ಈ ಬಗ್ಗೆ ತನಿಖೆ ನಡೆಸಬೇಕು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಎ.ನಾಗೇಶ್, ಕುಂಭಯ್ಯ, ನರಸಿಂಹಮೂರ್ತಿ, ದೇವರಾಜು, ಚಿಕ್ಕಮ್ಮ ಇತರರಿದ್ದರು.

(Visited 24 times, 1 visits today)