ತುಮಕೂರು:


ವಿದ್ಯುತ್ ಪ್ರವಹಿಸುತ್ತಿದ್ದ ಕೇಬಲ್ ವೈರ್ ಮೈಮೇಲೆ ಬಿದ್ದ ಪರಿಣಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ಬಾಯಿ ಜಾದವ್ (೩೬) ಮೃತ ದುರ್ದೈವಿಯಾಗಿದ್ದಾರೆ.
ಮೃತ ದುರ್ದೈವಿಯಾದ ಲಕ್ಷ್ಮೀ ಬಾಯಿ ಜಾದವ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದವರಾಗಿದ್ದಾರೆ. ಇತ್ತೀಚೆಗಷ್ಟೇ ಮೃತ ಲಕ್ಷ್ಮೀಬಾಯಿಗೆ ಮದುವೆ ನಿಶ್ಚಯವಾಗಿತ್ತು. ಇವರು ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಕುಣಿಗಲ್ ಪಟ್ಟಣದಲ್ಲಿ ವಾಸವಿದ್ದ ಲಕ್ಷ್ಮೀಬಾಯಿ, ಕೆಲಸ ಮುಗಿಸಿ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಜೊತೆ ಕುಣಿಗಲ್ ಗೆ ಬೈಕ್ ನಲ್ಲಿ ಲಕ್ಷ್ಮೀ ಬಾಯಿ ಬರುತ್ತಿದ್ದರು.
ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್ ಗೆ, ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ ಕೇಬಲ್ ವೈರ್ ಬಿದ್ದಿದೆ. ಕೇಬಲ್ ವೈರ್ ಮೇಲೆ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಸವಾರ ಲಕ್ಷ್ಮಣ್ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳಾದ ಲಕ್ಷ್ಮಣ್ ಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 1 times, 1 visits today)