ತುಮಕೂರು:

      ದೇವರಾಯನದುರ್ಗ ಗ್ರಾಮದಲ್ಲಿ ಫೆಬ್ರವರಿ ಮಾಹೆಯ 13, 14 ಮತ್ತು 15ರಂದು ನಡೆಯುವ ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನಾನುಕೂಲವಾಗದಂತೆ ಮುಂಜಾಗ್ರತಾ ಕ್ರಮವಾಗಿ ಟ್ರಾಫಿಕ್ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

     ದೇವರಾಯನದುರ್ಗ ಗ್ರಾಮದ ಯಾತ್ರಿ ನಿವಾಸದಲ್ಲಿಂದು 12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ “ಕುಂಭಾಭಿಷೇಕ” ಮಹೋತ್ಸವದ ಹಿನ್ನೆಲೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಂಭಾಭಿಷೇಕಕ್ಕೂ ಮುನ್ನ ರಥ ಬೀದಿ ಹಾಗೂ ಇತರೆ ರಸ್ತೆಗಳನ್ನು ದುರಸ್ತಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಈ ಹಿಂದೆ ಕುಂಭಾಭಿಷೇಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿಯಲ್ಲಿಯೇ ಈ ಬಾರಿಯೂ ನೆರವೇರಿಸಬೇಕು. ಅದರಲ್ಲಿ ಯಾವುದೇ ಬದಲಾವಣೆಗಳು ಬೇಡ. ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲು ದಾನಿಗಳಿಂದ ನಿರ್ವಹಿಸುವ ಕಾಮಗಾರಿಗಳಿಗೆ ಹೊಸ ಮುಚ್ಚಳಿಕೆ ಪತ್ರ ತೆಗೆದುಕೊಳ್ಳುವುದು ಬೇಡ. ಈ ಹಿಂದೆ ದಾನಿಗಳು ಹೇಗೆ ಮಾಡುತ್ತಿದ್ದರೋ ಅಥವಾ ಯಾರಿಗೆ ದೇವರ ಕಾರ್ಯ ಮಾಡಬೇಕೆನ್ನುವ ಆಸಕ್ತಿ ಇರುತ್ತದೋ ಅವರಿಗೆ ಅವಕಾಶ ನೀಡಬೇಕೆಂದು ದೇವಾಲಯದ ಕಾರ್ಯನಿರ್ವಾಕ ಅಧಿಕಾರಿ ಸವಿತಾ ಅವರಿಗೆ ನಿರ್ದೇಶನ ನೀಡಿದರು.

      ಶ್ರೀ ಭೋಗನರಸಿಂಹಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಪ್ರಸಾದ ನಿಲಯವನ್ನು ಕಲ್ಯಾಣ ಮಂಟಪವನ್ನಾಗಿ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ಸವಿತಾ ಪ್ರಸ್ತಾಪಿಸಿದಾಗ, ಕುಂಭಾಭಿಷೇಕದ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೆ ಪ್ರಸಾದ ನಿಲಯವನ್ನೇ ವ್ಯವಸ್ಥಿತವಾಗಿ ಸರಿಪಡಿಸಬೇಕೆಂದರು.

      ದೇವಾಲಯಕ್ಕೆ ಸೇರಿದ ಕಾಟೇಜಿನಲ್ಲಿ ನಡೆಸಲಾಗುತ್ತಿರುವ ಅಂಗನವಾಡಿ ಹಿಂಭಾಗ ಸ್ನಾನದ ಗೃಹ ಮತ್ತು ಶೌಚಾಲಯವನ್ನು ನಿರ್ಮಿಸಲು ಅನುಮತಿ ನೀಡಬೇಕೆಂದು ಕಾಟೇಜಿನ ದಾನಿ ಮನವಿ ಮಾಡಿದಾಗ, ಅಂಗನವಾಡಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಡಿಸಿ ಸೂಚಿಸಿದರು.

      ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಾಜಗೋಪುರ ಕಳಾಕರ್ಷಣೆಯನ್ನು ನವೆಂಬರ್ 22ರಂದು ನಡೆಸುವ, ಶ್ರೀ ಕ್ಷೇತ್ರದ ಬ್ರಹ್ಮರಥೋತ್ಸವ ರಥದ ನಿಲುಗಡೆ ಸ್ಥಳವನ್ನು ತಗ್ಗಿಸಿ ಸಮತಟ್ಟು ಮಾಡಿಸಿ ಸುಭದ್ರತೆ ಮಾಡುವ, ಶ್ರೀ ಭೋಗನರಸಿಂಹಸ್ವಾಮಿ ದೇವಾಲಯದ ಪ್ರಾಕಾರದಲ್ಲಿ ಗ್ರಿಲ್ ಅಳವಡಿಸುವ, ದೇವಾಲಯದಲ್ಲಿರುವ ಅನುಪಯುಕ್ತ ಸಾಮಗ್ರಿಗಳನ್ನು ವಿಲೇವಾರಿ ಮಾಡುವ, ನೂತನ ನಿತ್ಯ ಅನ್ನಸಂತರ್ಪಣಾ ಭವನದ ಮೇಲ್ಭಾಗದ ಕೊಠಡಿಗಳಿಗೆ ಪೀಠೋಪಕರಣಗಳನ್ನು ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ಖರೀದಿ ಸೇರಿದಂತೆ ಹಲವಾರು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಯಿತು.

      ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಸಿ.ಎಲ್. ಶಿವಕುಮಾರ್, ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವ್ಯವಸ್ಥಾಪನ, ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಎನ್.ನರಸಿಂಹಭಟ್ಟರ್, ಶ್ರೀ ಭೋಗನರಸಿಂಹಸ್ವಾಮಿ ದೇವಾಲಯದ ವೆಂಕಟರಾಜಭಟ್ಟರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಕುಂಭಾಭಿಷೇಕ ಮಹೋತ್ಸವದ ದಾನಿಗಳು, ಮತ್ತಿತರರು, ಉಪಸ್ಥಿತರಿದ್ದರು.

(Visited 24 times, 1 visits today)