ತುಮಕೂರು : 

      ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕರ. ಇದನ್ನು ಪ್ರತಿಯೊಬ್ಬರೂ ಅರಿತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಹೇಳಿದರು.

      ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸಂಕಲ್ಪ ಫೌಂಡೇಶನ್ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಆಹಾರ ವಿತರಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

      ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹೋಟೆಲ್‍ನವರು, ಅಂಗಡಿಗಳ ವರ್ತಕರು ತಮ್ಮ ದಿನನಿತ್ಯ ವ್ಯಾಪಾರ ವಹಿವಾಟಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದರು.

     ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ಹಾಕಲಾಗುತ್ತಿದ್ದರೂ ದಂಡ ಕಟ್ಟಿದ ತದ ನಂತರ ಮತ್ತೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬರುತ್ತಿವೆ. ಇದಕ್ಕೆ ಅವಕಾಶ ನೀಡದೆ ಹೋಟೆಲ್‍ನವರು, ವರ್ತಕರುಗಳು ಸ್ವಯಂ ಪ್ರೇರಿತರಾಗಿಯೇ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಬೇಕು ಎಂದು ಸಲಹೆ ಮಾಡಿದರು.

      ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.  ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಜಾಸ್ತಿಯೇ ಇದೆ. ಹಾಗಾಗಿ ಹೋಟೆಲ್ ಮಾಲೀಕರು ಮಹಾನಗರ ಪಾಲಿಕೆ ಜತೆ ಕೈಜೋಡಿಸಿ ಪ್ಲಾಸ್ಟಿಕ್ ಮುಕ್ತ ತುಮಕೂರು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

      ನಾಗರಿಕರು ಸಹ ತಾವಾಗಿಯೇ ಈ ಬಗ್ಗೆ ಅರಿತು ಪ್ಲಾಸ್ಟಿಕ್ ತ್ಯಜಿಸಿದರೆ ಮಾತ್ರ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬಹುದಾಗಿದೆ ಎಂದರು.
ಪಾಲಿಕೆ ಆಯುಕ್ತ ರೇಣುಕಾ ಮಾತನಾಡಿ, ಹೋಟೆಲ್ ಅಸೋಸಿಯೇಷನ್ ಮೂಲಕವೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

     ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ ದಂಡ ಹಾಕುವ ಹಂತಕ್ಕೆ ಪರಿಸ್ಥಿತಿಯನ್ನು ಹೋಟೆಲ್‍ಗಳವರು, ವರ್ತಕರು ತಂದುಕೊಳ್ಳಬಾರದು. ಸ್ವಯಂ ಪ್ರೇರಿತರಾಗಿಯೇ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಬೇಕು ಎಂದರು.

       ಕೆಲ ಹೋಟೆಲ್‍ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರಿಂದ ಮನುಷ್ಯರಿಗೆ ಕ್ಯಾನ್ಸರ್ ರೋಗ ಬರಲು ಕಾರಣವಾಗುತ್ತಿದೆ. ಕೆಲ ಫುಟ್‍ಪಾತ್ ಹೋಟೆಲ್‍ಗಳಲ್ಲಿ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಮನುಷ್ಯನ ಆರೋಗ್ಯ ದೃಷ್ಠಿಯಿಂದ ಹಾಗೂ ಸ್ವಚ್ಚ ಪರಿಸರ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಎಂದು ಅವರು ಹೇಳಿದರು. ಪ್ಲಾಸ್ಟಿಕ್‍ನಿಂದ ಮನುಷ್ಯನ ಆರೋಗ್ಯವನ್ನೇ ಹಾಳಾಗುತ್ತಿದೆ. ಬಿ.ಪಿ., ಶುಗರ್ ಇನ್ನಿತರೆ ಕಾಯಿಲೆಗಳಿಗೆ ಈ ಪ್ಲಾಸ್ಟಿಕ್ ಬಳಕೆ ಕಾರಣವಾಗುತ್ತಿದೆ ಎಂದರು. ಹೇಳಿದರು.

      ಹೋಟೆಲ್ ಅಸೋಸಿಯೇಷನ್‍ನವರು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸಬೇಕು. ಜತೆಗೆ ಇತರೆ ಹೋಟೆಲ್‍ಗಳವರಿಗೂ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

     ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿ.ಎಸ್. ಮಂಜುನಾಥ್, ಡಾ. ನವೀನ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 16 times, 1 visits today)