ತುಮಕೂರು :

     ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2020ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಹಾಗೂ ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರು ಜಿಲ್ಲೆಯ ತುರುವೇಕೆರೆ, ಕುಣಿಗಲ್, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತಿಟಪೂರು ತಾಲೂಕಿನ ವಿವಿಧ ಗ್ರಾಮಗಳ ಮನೆಗಳಿಗೆ ಇಂದು ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.

      ಜಿಲ್ಲೆಯ ತುರುವೇಕೆರೆ ತಾಲೂಕಿನ ಜಿ.ದೊಡ್ಡೇರಿ, ಶೆಟ್ಟಿಗೊಂಡನಹಳ್ಳಿ, ಗುಬ್ಬಿ ತಾಲೂಕಿನ ಕಲ್ಲೂರು, ನಿಟ್ಟೂರು, ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್, ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿದರು.

      ವೀಕ್ಷಕರಾದ ಮಣಿವಣ್ಣನ್ ಅವರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಮನೆಯ ಸದಸ್ಯರೆಲ್ಲರ ಹೆಸರು ಸೇರ್ಪಡೆಯಾಗಿರುವ, ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿರುವ ಹಾಗೂ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಸ್ಥಳಾಂತರಗೊಂಡಿರುವ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರುವ ಬಗ್ಗೆ ಪರಿಶೀಲಿಸಿದರು.

      ಹಳೆಯ ಎಪಿಕ್ ಕಾರ್ಡುಗಳಿಗೆ ಮಾನ್ಯತೆ ಇಲ್ಲದಿರುವುದರಿಂದ 18 ವರ್ಷ ತುಂಬಿದ ಎಲ್ಲಾ ಅರ್ಹ ಮತದಾರರು, ಚುನಾವಣಾ ಆಯೋಗದಿಂದ ನೀಡಲಾಗುವ ಹೊಸ ಎಪಿಕ್ ಕಾರ್ಡುಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಮನವರಿಕೆ ಮಾಡಿದರು. ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ, ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ತುರುವೇಕೆರೆ ತಹಶೀಲ್ದಾರ್ ನಯೀಮ್ ಉನ್ನೀಸಾ ಅವರು ವೀಕ್ಷಕರ ಗಮನಕ್ಕೆ ತಂದರು.

      ಇದಕ್ಕೂ ಮುನ್ನ ಕುಣಿಗಲ್ ತಾಲೂಕು ದೊಡ್ಡಮದುರೆ ಗ್ರಾಮದ ರಾಮಣ್ಣ ಎಂಬ ಮತದಾರರನ ಮನೆಗೆ ಭೇಟಿ ನೀಡಿದ ಅವರು ಮನೆಯವರೆಲ್ಲರ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಹಾಗೂ ಮತದಾರರ ಪಟ್ಟಿಯಲ್ಲಿ ಅವರ ಹೆಸರಿರುವ ಬಗ್ಗೆ ಪರಿಶೀಲಿಸಿದರು. ನಂತರ ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಕುಣಿಗಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

      ನಂತರ ಗುಬ್ಬಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 165 ಆಡಗೊಂಡನಹಳ್ಳಿ ಗ್ರಾಮದ ಮನೆಯೊಂದಕ್ಕೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಪಟ್ಟಿಯ ಕ್ರಮ ಸಂಖ್ಯೆ 10ರಲ್ಲಿರುವ ಮತದಾರರ ನಿಖಿಲ್ ಗೌಡ ಬಿನ್ ಲಕ್ಷ್ಮಿನಾರಾಯಣ ಅವರು ಗ್ರಾಮದಲ್ಲಿ ವಾಸವಿಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪರಿಶೀಲಿಸಿ ವರದಿ ನೀಡಬೇಕೆಂದು ತಹಶೀಲ್ದಾರ್ ಮಮತಾ ಅವರಿಗೆ ಸೂಚನೆ ನೀಡಿದರು.

      ಮತದಾರರ ಪಟ್ಟಿ, ನಮೂನೆ-6, 7, 8, 8ಎ ಮೂಲಕ ಸ್ವೀಕೃತ ಅರ್ಜಿ ಹಾಗೂ ವಿಲೇವಾರಿಯಾದ ಅರ್ಜಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

(Visited 22 times, 1 visits today)