ತುಮಕೂರು  :

      ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಲುವಾಗಿ ಮಾರ್ಚ್ 31ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು, ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು/ಉದ್ದಿಮೆದಾರರು ಈ ಕೆಳಕಂಡ ನಿರ್ಧಾರವನ್ನು ಪಾಲಿಸಬೇಕೆಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.

ಮುಚ್ಚುವುದು:-

      ಟೈರ್ ಅಂಗಡಿ, ಮೆಕಾನಿಕಲ್ ಮತ್ತು ಇತರೆ ವರ್ಕ್ ಶಾಪ್, ಆಕ್ಸಸರೀಸ್, ಕಬ್ಬಿಣ ಹಾಗೂ ಸ್ಕ್ರಾಪ್ ವ್ಯಾಪಾರದ ಅಂಗಡಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಾಗ್ರಿಗೆಗಳ ಮಾರಾಟ ಮಳಿಗೆ, ಜವಳಿ ಮಳಿಗೆ, ಚಪ್ಪಲಿ ಮತ್ತು ಫ್ಯಾನ್ಸಿ ಸ್ಟೋರ್, ಚಿನ್ನಾಭರಣ ಮತ್ತು ಗಿರವಿ ಅಂಗಡಿ, ಹೋಮ್ ಅಪ್ಲೈನ್ಸಸ್ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿ, ಜಿಮ್ ಮತ್ತು ವ್ಯಾಯಾಮ ಕೇಂದ್ರ, ಕೋಚಿಂಗ್ ಸೆಂಟರ್, ಸಾರ್ವಜನಿಕ ಸಾರಿಗೆ ವ್ಯವಸ್ಥೆ(ಬಸ್, ಆಟೋ, ಟ್ಯಾಕ್ಸಿ), ಟೀ ಮತ್ತು ಚಾಟ್ಸ್ ಅಂಗಡಿ, ತಳ್ಳುವ ಗಾಡಿ ಮೇಲೆ ಮಾರಾಟ ಮಾಡುವ ಆಹಾರ ಪದಾರ್ಥಗಳು ಹಾಗೂ ಹಣ್ಣಿನ ಗಾಡಿಗಳು ಮತ್ತು ಬೇಕರಿ, ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಇನ್ನಿತರೆ ಧಾರ್ಮಿಕ ಸ್ಥಳಗಳು, ಎಲ್ಲಾ ಧರ್ಮಗಳ ಪ್ರಾರ್ಥನಾ ಒಗ್ಗೂಡುವಿಕೆ ಮತ್ತು ಹಬ್ಬಗಳ ಒಗ್ಗೂಡುವಿಕೆ, ಗಾರ್ಮೆಂಟ್ಸ್ ಮತ್ತು ಇತರೆ ಫ್ಯಾಕ್ಟರಿ ಮತ್ತು ಗೋಡನ್, ಬಾರ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ ಶಾಪ್, ಚಿತ್ರಮಂದಿರಗಳು, ಕೋಳಿ ಮಾಂಸದ ಅಂಗಡಿ, ಹೇರ್ ಸಲೂನ್ ಶಾಪ್ ಹಾಗೂ ಬ್ಯೂಟಿ ಪಾರ್ಲರ್, ಇತರೆ ವಾಣಿಜ್ಯ ಚಟುವಟಿಕೆಗಳು(ತೆರೆಯಲು ಅನುಮತಿ ನೀಡಿರುವ ಉದ್ಯಮಗಳನ್ನು ಹೊರತುಪಡಿಸಿ)ಕಡ್ಡಾಯವಾಗಿ ಮಾರ್ಚ್ 31ರವರೆಗೆ ಮುಚ್ಚಬೇಕು.

ತೆರೆಯುವುದು:-

      ಹಾಲು, ಹಣ್ಣು, ತರಕಾರಿ, ಆಹಾರ, ದಿನಸಿ, ದಿನಬಳಕೆ ವಸ್ತುಗಳ ಅಂಗಡಿ, ಚಿಲ್ಲರೆ ತರಕಾರಿ ಮಾರುಕಟ್ಟೆ, ಮಾಂಸ(ಕುರಿ ಮತ್ತು ಮೇಕೆ ಮಾತ್ರ)/ಮೀನು ಮಾರಾಟ ಅಂಗಡಿ, ಪೆಟ್ರೋಲ್ ಬಂಕ್, ಗ್ಯಾಸ್ ಎಲ್‍ಪಿಜಿ, ತೈಲ ಏಜೆನ್ಸಿ ಮತ್ತು ಅದಕ್ಕೆ ಸಂಬಂಧಿಸಿದ ಉಗ್ರಾಣಗಳು, ಎಲ್ಲಾ ಸರಕುಗಳ ಸಾಗಣೆ, ಆಸ್ಪತ್ರೆ, ಚಿಕಿತ್ಸಾಲಯ, ಔಷಧಾಲಯ, ಆಪ್ಟಿಕಲ್ಸ್, ರೋಗಪತ್ತೆ ಕೇಂದ್ರ ಮತ್ತು ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಇತರೆ ಅಂಗಡಿ, ಸ್ಥಾಪನೆಗಳು, ಉಗ್ರಾಣಗಳು ಮತ್ತು ಕಾರ್ಖಾನೆಗಳು.

      ಸರ್ಕಾರವು ಅಧಿಸೂಚಿಸಿದಂತೆ ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಸರ್ಕಾರಿ ಕಚೇರಿಗಳು ಮತ್ತು ಅಂಚೆ ಸೇವೆಗಳು, ವಿದ್ಯುಚ್ಛಕ್ತಿ, ನೀರು ಪೂರೈಕೆ ಮತ್ತು ಪೌರಸೇವೆಗಳು. ಬ್ಯಾಂಕುಗಳು ಮತ್ತು ಎಟಿಎಂ ಸೆಂಟರ್‍ಗಳು, ಟೆಲಿಕಾಂ, ಅಂತರ್ಜಾಲ ಮತ್ತು ಕೇಬಲ್ ಸೇವೆಗಳು. ಹೋಟೆಲ್ ಮತ್ತು ರೆಸ್ಟೋರೆಂಟ್(ಪಾರ್ಸಲ್ ಸೌಲಭ್ಯ ಮಾತ್ರ)ಮತ್ತು ಹೋಮ್ ಡೆಲಿವರಿ, ಕೃಷಿ ಉಪಕರಣಗಳು ಮತ್ತು ಕೀಟನಾಶಕ ಮತ್ತು ರಸಗೊಬ್ಬರ ಅಂಗಡಿ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಖಾಸಗಿ ಭದ್ರತಾ ಸೇವೆಗಳನ್ನು ಒಳಗೊಂಡ ಭದ್ರತಾ ಸೇವೆಗಳು, ಕುಡಿಯುವ ನೀರಿನ ತಯಾರಿಕೆ, ಸರಬರಾಜು ಮತ್ತು ವಿತರಣೆ, ಔಷಧಿಗಳು, ಮುಖಗವಸು ಮತ್ತು ಕೋವಿಡ್-19ರ ಶುಶ್ರೂಷೆಗೆ ಸಂಬಂಧಿಸಿದ ಇತರ ಸುರಕ್ಷಾ ವಸ್ತುಗಳನ್ನು ತಯಾರಿಸುವ ಖಾಸಗಿ ಘಟಕಗಳು ತೆರೆದಿರುತ್ತವೆ.

       ಉದ್ದಿಮೆದಾರರು ತಮ್ಮ ಉದ್ದಿಮೆಗೆ ಬರುವ ಗ್ರಾಹಕರು ಕನಿಷ್ಠ ಒಂದು ಮೀಟರ್ ಸಾರ್ವಜನಿಕ ಅಂತರ(Soಛಿiಚಿಟ ಆisಣಚಿಟಿಛಿe)ವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳವುದು. ಯಾವುದೇ ಸಮಯದಲ್ಲಿ 5ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರದಂತೆ ಕ್ರಮವಹಿಸುವುದು. ತಮ್ಮ ಉದ್ದಿಮೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಕೈಗಳನ್ನು ಹ್ಯಾಂಡ್‍ವಾಶ್/ಹ್ಯಾಂಡ್ ಸ್ಯಾನಿಟೈಜರ್ ಬಳಸಿ ತೊಳೆದುಕೊಳ್ಳವುದು ಮತ್ತು ಮುಖಗವಸುಗಳನ್ನು ಕಡ್ಡಾಯವಾಗಿ ಬಳಸತಕ್ಕದ್ದು.

      ಈ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿದ್ದು, ಸದರಿ ಆದೇಶವು ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ. ಉದ್ದಿಮೆ ಮತ್ತು ಸೌಲಭ್ಯಗಳನ್ನು ತೆರೆಯುವುದು ಬಿಟ್ಟು ಉಳಿದ ಎಲ್ಲವುಗಳನ್ನು ಕೂಡಲೇ ಬಂದ್ ಮಾಡಿಕೊಳ್ಳತಕ್ಕದ್ದು. ತಪ್ಪಿದಲ್ಲಿ ಸ್ವತ್ತಿನ ಮಾಲೀಕರುಗಳಿಗೆ ಹಾಗೂ ಉದ್ದಿಮೆ ಪರವಾನಗಿದಾರರಿಗೆ ದಂಡ ವಿಧಿಸಿ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಿ ಕಾರ್ಪೋರೇಷನ್ ಕಾಯ್ದೆ 1976ರಲ್ಲಿ ಪ್ರದತ್ತವಾಗಿರುವ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು.

      ಯಾವುದೇ ಉಪಬಂಧಗಳನ್ನು ಉಲ್ಲಂಘಿಸುವ ಯಾವೊಬ್ಬ ವ್ಯಕ್ತಿ, ಸಂಸ್ಥೆಗೆ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಕೋಪ ನಿರ್ವಹಣಾ ಅಧಿನಿಯಮ ಮತ್ತು ಐ.ಪಿ.ಸಿ ಸೆಕ್ಷನ್ 188ರ ಅನ್ವರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

(Visited 46 times, 1 visits today)