ತಿಪಟೂರು :

      ಸಾರ್ವಜನಿಕರ ಸಂಪರ್ಕ ರಸ್ತೆಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಕಸಬಾ ಹೋಬಳಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬುಧವಾರ ರಾತ್ರಿ ನಡೆಯಿತು.

      ಈ ವೇಳೆ ಮಾತನಾಡಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅನುದಾನದಲ್ಲಿ ಬಿದರೆಗುಡಿಯಿಂದ ಮತ್ತಿಹಳ್ಳಿ ಹಾಗೂ ಮಾಣಿಕಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜೆಲ್ಲಿ-ಕಲ್ಲು, ಮಣ್ಣನ್ನು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸುಮಾರು ವರ್ಷಗಳಿಂದ ಇದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು. ಆದರೆ ಏಕಾಏಕಿ ರಸ್ತೆಗೆ ಕೆಲವರು ಮುಳ್ಳು ಹಾಕಿ, ಗುಂಡಿಗಳನ್ನು ತೆಗೆದು ರಸ್ತೆಯಲ್ಲಿ ಓಡಾಡಲು ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದರು. ಈ ಬಗ್ಗೆ ಗ್ರಾಮಪಂಚಾಯಿತಿಗೆ ದೂರು ಸಲ್ಲಿಸಲಾಗಿದ್ದು, ಅಲ್ಲದೆ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಆಕ್ರಮ ಎಸೆಗಿರುವ ವ್ಯಕ್ತಿಗೆ ನೊಟೀಸ್ ಜಾರಿ ಮಾಡಿದರೂ ಅದನ್ನು ತಿರಸ್ಕರಿಸಿದÀ ಕಾರಣ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

      ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ದಂಡಾಧಿಕಾರಿ ಡಾ. ಮಂಜುನಾಥ್, ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಸ್ಥಳ ಪರಿಶೀಲಿಸಿ, ಸಮಸ್ಯೆ ಬಗೆಹರಿಸುತ್ತೇವೆ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಿ ಎಂದರು. ಆಗ ಪ್ರತಿಭಟನಾಕರರು ಸಮಸ್ಯೆಯನ್ನು ಬಗೆಹರಿಸದಿದ್ದರೆ ಹೋರಾಟ ಮಾಡಲಾಗುವುದು ಎಂದರು.

      ಪ್ರತಿಭಟನೆಯಲ್ಲಿ ಗ್ರಾಮಪಂಚಾಯಿತಿಯ ಉಪಾಧ್ಯಕ್ಷ ಉದಯ್‍ಕುಮಾರ್, ಸದಸ್ಯರಾದ ಲಿಂಗರಾಜು, ಕಾಂತರಾಜು, ಹರೀಶ್, ಮಾಜಿ ಅಧ್ಯಕ್ಷ ಗಂಗಾಧರ್, ಡೈರಿ ಅಧ್ಯಕ್ಷ ಬಸವರಾಜು, ಚಂದ್ರಣ್ಣ, ಜಯಣ್ಣ, ಓಂಕಾರ್‍ಮೂರ್ತಿ, ಶೇಖರ್, ವೀರಭದ್ರೇಶ್ವರ ಗೆಳೆಯರ ಬಳಗದ ವಿನಯ್, ಹರೀಶ್, ಸಿದ್ದಪ್ಪ, ಪರಮೇಶ್, ಲೋಹಿತ್ ಮುಂತಾದವರು ಸೇರಿದಂತೆ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

(Visited 12 times, 1 visits today)