ತುಮಕೂರು :

     ಅಂಗನವಾಡಿ ಸಂಬಂಧ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯಬೇಕು. ಅಂಗನವಾಡಿಗಳಲ್ಲೇ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಬೇಕು ಎಂದು ಒತ್ತಾಯಿಸಿ ಸಹಸ್ರ ಸಹಸ್ರ ಅಂಗನವಾಡಿ ಕಾರ್ಯಕರ್ತೆಯರು ತುಮಕೂರು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

      ತುಮಕೂರು ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಬಿಎಚ್.ರಸ್ತೆ ಎಂ.ಜಿ.ರಸ್ತೆ ಮೂಲಕ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು. ರಾಜ್ಯ ಸರ್ಕಾರದ ವಿರುದ್ದ ಗೋµಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅಂಗನವಾಡಿ ಕೇಂದ್ರ ವೇಳಾಪಟ್ಟಿಯಲ್ಲಿ ಮೂರು ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಾತೃಪೂರ್ಣ ಯೋಜನೆ ಯಶಸ್ವಿಗೆ ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿಗಳಿಗೆ ಗುಣಾತ್ಮಕ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

      1995 ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ ಪಾಸಾದವರು ಅನೇಕರು ಪಧವೀಧರರು ಇದ್ದು ಅವರಿಗೆ ತರಬೇತಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ-ಯು.ಕೆ.ಜಿ ಪ್ರಾರಂಭಿಸಬೇಕು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಎಲ್.ಕೆ.ಜಿ – ಯು.ಕೆ.ಜಿಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು ಮತ್ತು ಕ್ರಮ ವಹಿಸಬೇಕು. ಐಸಿಡಿಎಸ್ 6 ಉದ್ದೇಶಗಳಿಗೆ ಬಿಟ್ಟು ಉಳಿದ ಯಾವುದೇ ಕೆಲಸವನ್ನು ಅಂಗನವಾಡಿ ನೌಕರರಿಂದ ಕಡ್ಡಾಯವಾಗಿ ಮಾಡಿಸಬಾರದು ಎಂದರು.

      ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 9 ವರ್ಷದ ವರ್ಗೀಕರಣವನ್ನು ವಿರೋಧಿಸಬೇಕು. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ. ಎಲ್.ಐ.ಸಿ ಆಧಾರಿತ ಪೆನ್‍ಷನ್ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್.ಪಿ.ಎಸ್ ಮಾನದಂಡದಂತೆ ವೇತನ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ನಿವೃತ್ತಿ ಆದ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಗೆ ಇಡುಗಂಟು ತಕ್ಷಣ ಬಿಡುಗಡೆ ಆಗಬೇಕು. ಇಲಾಖೆಯ ಲೋಪದೋಷಗಳಿಂದ ಪ್ರಾನ್ ಕಾರ್ಡು ನೀಡದವರಿಗೆ ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡಬೇಕು. ಕಾರ್ಯಕರ್ತೆ ಸಹಾಯಕಿಯರಿಗೆ ಪ್ರಾನ್ ಕಾರ್ಡು ನೀಡದವರಿಗೆ ತಕ್ಷಣ ನೀಡಬೇಕು. 2016 ಏಪ್ರಿಲ್ ನಿಂದ ಆಯ್ಕೆ ಆದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಖಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ನಿವೃತ್ತಿ ಆದವರಿಗೆ ಕನಿಷ್ಠ 6000 ರೂ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

     ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೀನಾಕ್ಷಿಸುಂದರಂ ಮಾತನಾಡಿ, ದೇಶದಾದ್ಯಂತ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರುತ್ತಿದೆ. ಇದರಿಂದ ಜನರು ತತ್ತರಿಸುತ್ತಿದ್ದಾರೆ. ಆದರೆ ನಾವು ಈರುಳ್ಳಿ ತಿನ್ನಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಕೇಂದ್ರ ಸರ್ಕಾರದ ಸಚಿವರು ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇನ್ನೂ ಹಲವು ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದು ಬಿಟ್ಟು ಕೇಂದ್ರ ಸರ್ಕಾರ ವೃಥಾ ಅನ್ಯವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅಂಗನವಾಡಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ಇರುವ ಯೋಜನೆಗಳ ಪ್ರಮುಖ ಜವಾಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮುಖಾಂತರ ಬಲಹೀನಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದು ಕೊಳ್ಳುವುದಲ್ಲದೇ ಐಸಿಡಿಎಸ್ ಯೋಜನೆ ತನ್ನ ಉದ್ದೇಶ ಕಳೆದುಕೊಳ್ಳಲಿದೆ ಎಂದು ಹೇಳಿದರು.

       ರಾಜ್ಯದಲ್ಲಿ ಸಾರ್ವಜನಿಕ, ಪೋಷಕರ ಸಹಿ ಸಂಗ್ರಹ ಮಾಡಿಸಲಾಗಿದೆ.30 ಜಿಲ್ಲೆಗಳನ್ನೊಳಗೊಂಡ 6 ಜಾಥಗಳನ್ನು ನಡೆಸಲಾಗಿದೆ.
ಸರ್ಕಾರ ಅಂಗನವಾಡಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಡಿಸೆಂಬರ್ 10 ರಿಂದ ಅನಿರ್ಧಿಷ್ಟವಾಧಿ ಹೋರಾಟಕ್ಕೆ ಸಿದ್ದವಾಗಿದೆ ಎಂದರು.

      ಮೇಲ್ವೀಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣ ಅಂಗನವಾಡಿ ನೌಕರರಿಗೆ ಕೊಡಬೇಕು. ಮೇಲ್ವಿಚಾರಕಿಯರ ಹುದ್ದೆಗಳಿಗೆ 2015ರ ಭಾರತ ಸರ್ಕಾರದ ಸುತ್ತೋಲೆ ಪ್ರಕಾರ ಈಗಾಗಲೇ ಇರುವಂತೆ, 50ರಷ್ಟು ಹುದ್ದೆಗಳಿಗೆ ಮುಂಬಡ್ತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಬೇಕು. ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹೆಣ್ಣು ಮಕ್ಕಳಿಗೆ ಮಾತ್ರ ವಲ್ಲದೆ ಕುಟುಂಬದವರಿಗೆ ಎಂದು ತಿದ್ದುಪಡಿಯಾಗಬೇಕು. ಖಾಲಿಯಿರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ತುಂಬಬೇಕು. ಹಲವು ಯೋಜನೆಗಳಿಗೆ ಡಿಡಿ, ಪಿಓ, ಸಿಡಿಪಿಓ, ಎಸಿಡಿಪಿಓ ಮೇಲ್ವಿಚಾರಕಿಯರನ್ನು ಖಾಯಂ ಆಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್..ಕೆ.ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಿ.ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಅನಸೂಯ, ಪುಷ್ಪ, ಗುಬ್ಬಿ ಅನಸೂಯ, ಶಾಂತಕುಮಾರಿ, ಮಂಗಳ ಮೊದಲಾದವರು ಇದ್ದರು.

(Visited 20 times, 1 visits today)