ತುಮಕೂರು:

     ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ 43ನೇ ವರ್ಷದ ಸಿದ್ಧಿ ವಿನಾಯಕ ವಿಸರ್ಜನಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಕೆ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮೆರವಣಿಗೆಗೆ ಚಾಲನೆ ನೀಡಿದರು.

      ಮೆರವಣಿಗೆಯೂ ವಿನಾಯಕ ನಗರದಿಂದ ಬಿ.ಎಚ್.ರಸ್ತೆ, ಟೌನ್‍ಹಾಲ್, ಎಂ.ಜಿ.ರಸ್ತೆ, ಹೊರಪೇಟೆ, ಗುಂಚಿಸರ್ಕಲ್, ಮಂಡಿಪೇಟೆ, ಆಯಿಲ್ ಮಿಲ್ ರೋಡ್, ಚಿಕ್ಕಪೇಟೆ, ಕೋಟೆ ಆಂಜನೇಯಸ್ವಾಮಿ ವೃತ್ತ, ಗಾರ್ಡನ್ ರಸ್ತೆ ಮುಖಾಂತರ ಕೆ.ಎನ್.ಎಸ್ ಕಲ್ಯಾಣಿಯಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ವಿಸರ್ಜಿಸಲಾಯಿತು.

      ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿ ಶಿವು ಎಲೆಕ್ಟ್ರಿಕಲ್‍ವತಿಯಿಂದ ವಿದ್ಯುತ್ ದೀಪಾಲಂಕಾರ ಹಾಗೂ ವಾದ್ಯಗೋಷ್ಠಿ ಮೂಲಕ ಸಿದ್ಧಿವಿನಾಯಕ ಮೂರ್ತಿಯನ್ನು ಸ್ವಾಗತಿಸಲಾಯಿತು, ಮೆರವಣಿಯಲ್ಲಿ ಚೆನ್ನೈನ ಶಿವತಾಂಡವ ನೃತ್ಯ, ಬೆಂಗಳೂರಿನ ಸುಪ್ರಸಿದ್ಧ ವಿಶೇಷ ಅಲಂಕೃತ ವಾಹನ, ಡೋಲು, ನಂದಿಧ್ವಜ, ನಾಸಿಕ್‍ಡೋಲು, ಚಿಟ್ಟಿಮೇಳ, ವೀರಗಾಸೆ, ಸೋಮನಕುಣಿತ, ಡಂಕವಾದ್ಯ, ಚಂಡೆವಾದ್ಯ, ಕೀಲುಕುಣಿತ, ಪಟದ ಕುಣಿತ, ಕೋಲಾಟ, ಸೋಮನ ಕುಣಿತದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.ಇದೇ ವೇಳೆ ಮಂಡಳಿ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ಉಪಾಧ್ಯಕ್ಷ ನಾಗೇಶ್, ಉತ್ಸವ ಸಮಿತಿ ಅಧ್ಯಕ್ಷರುಗಳಾದ ಕೋರಿ ಮಂಜಣ್ಣ, ಆರ್.ರಮೇಶ್‍ಬಾಬು, ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾದ ಟಿ.ಎಚ್.ಪ್ರಸನ್ನಕುಮಾರ್, ಕಾರ್ಯದರ್ಶಿ ರಾಘವೇಂದ್ರರಾವ್, ಜಂಟಿ ಕಾರ್ಯದರ್ಶಿ ಸಿದ್ದರಾಮಯ್ಯ ಹಾಗೂ ಮಂಡಳಿಯ ನಿರ್ದೇಶಕರು, ಗಣ್ಯರು ಉಪಸ್ಥಿತರಿದ್ದರು.

      ಮೆರವಣಿಗೆ ಸಾಗುವಾಗ ಸಿದ್ದಿವಿನಾಯಕ ಮೂರ್ತಿಗೆ ಅಂಗಡಿ ಮಾಲೀಕರು, ಸಾರ್ವಜನಿಕರು ರಸ್ತೆಯನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸಿ ಮೆರವಣಿಗೆಯನ್ನು ಸ್ವಾಗತಿಸಿದ್ದು ಕಂಡುಬಂತು.

(Visited 16 times, 1 visits today)