ತುಮಕೂರು:

      ಜಿಲ್ಲಾ ಪಂಚಾಯತಿಯ ಲಿಂಕ್ ಡಾಕ್ಯೂಮೆಂಟ್‍ನಡಿ ಬಿಡುಗಡೆಯಾಗುವ ಅನುದಾನವನ್ನು ಮುಂಬರುವ 2019ರ ಫೆಬ್ರುವರಿ ಮಾಹೆಯ ಅಂತ್ಯದ ಒಳಗೆ ಸದ್ಭಳಕೆ ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.

      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ನವೆಂಬರ್ ಅಂತ್ಯದ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಲಿಂಕ್ ಡಾಕ್ಯೂಮೆಂಟ್ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಪ್ರಗತಿಯನ್ನು ಡಿ.ಎಸ್.ಸಾಫ್ಟ್‍ವೇರ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗುತ್ತದೆ. ಈ ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿಗಳು ಪರಿಶೀಲನೆ ಮಾಡುತ್ತಿದ್ದು, ತುಮಕೂರು ಜಿಲ್ಲೆ ಶೇ. 49ರಷ್ಟು ಮಾತ್ರ ಪ್ರಗತಿಯಾಗಿದೆ. ಇದು ಜಿಲ್ಲಾ ಪಂಚಾಯತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

      ಸಹಕಾರ, ಸಣ್ಣ ನೀರಾವರಿ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳು ಅನುದಾನ ಬಳಕೆಯ ಪ್ರಗತಿಯಲ್ಲಿ ಕುಂಠಿತವಾಗಿರುವುದು ಕಂಡು ಬಂದಿದೆ. ಅನುದಾನ ಸದ್ಭಳಕೆ ಮಾಡಿಕೊಂಡು ಪ್ರಗತಿಯಾಗಿದ್ದರೆ ಡಿ.ಎಸ್.ಸಾಫ್ಟ್‍ವೇರ್‍ನಲ್ಲಿ ಅಪ್‍ಡೇಟ್ ಮಾಡದಿರುವ ಇಲಾಖೆಗಳು ಎರಡು ದಿನದೊಳಗೆ ಅಪ್‍ಡೇಟ್ ಮಾಡುವಂತೆ ಅವರು ಸೂಚಿಸಿದರು.

      ಕೆ.ಡಿ.ಪಿ.ಸಭೆ ನಡೆಯುವ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಲಿಂಕ್ ಡಾಕ್ಯೂಮೆಂಟ್‍ನ ಪ್ರಗತಿಯ ಬಗ್ಗೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಮುಖ್ಯ ಯೋಜನಾಧಿಕಾರಿ ಬಾಲರಾಜು ಅವರಿಗೆ ಸೂಚನೆ ನೀಡಿದ ಸಿಇಓ ಅವರು, ಅನುಪಾಲನಾ ವರದಿಯನ್ನು ಜಿಲ್ಲಾ ಪಂಚಾಯತಿಗೆ ನೀಡುವಾಗ ಖುದ್ದು ಅಧಿಕಾರಿಗಳೇ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದರು.

      ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪಿ.ಆರ್.ಐ.ಡಿ. ಹಾಗೂ ಇನ್ನೂ ಇತರೆ ಏಜೆನ್ಸಿಗಳು ಶಾಲೆಗಳ ದುರಸ್ತಿ ಕಾಮಗಾರಿಗಳನ್ನು ನಿಗಧಿತ ಸಮಯಕ್ಕೆ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು. ತಿಪಟೂರಿನ 5 ಗ್ರಾಮಗಳಿಗೆ ಹಾಗೂ ಪಾವಗಡ ತಾಲ್ಲೂಕಿನ 2 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಮುಂದೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಮಸ್ಯಾತ್ಮಕ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, 194.83ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, 3674 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಇಂಜಿನಿಯರಿಂಗ್ ವಿಭಾಗದ ಇಂಜಿನಿಯರುಗಳು ಸಭೆಗೆ ಮಾಹಿತಿ ನೀಡಿದರು.

      ತುಮಕೂರು ಜಿಲ್ಲೆಯಲ್ಲಿರುವ ನಕಲಿ ವೈದ್ಯರು/ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಹಾಗೂ ಕೂಡಲೇ ಈ ಆಸ್ಪತ್ರೆಗಳಿಗೆ ಬೀಗಮುದ್ರೆ ಹಾಕುವಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಾರಾಯಣ ಮೂರ್ತಿ ಡಿಎಚ್‍ಓ ಅವರಿಗೆ ಸೂಚನೆ ನೀಡಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಓ ಡಾ: ಚಂದ್ರಿಕಾರವರು ಸಿರಾ, ಮಧುಗಿರಿ, ಪಾವಗಡ, ಕೊರಟಗೆರೆ ಸೇರಿದಂತೆ ಜಿಲ್ಲೆಯಲ್ಲಿರುವ ನಕಲಿ ವೈದ್ಯರು/ ಆಸ್ಪತ್ರೆ ಪತ್ತೆ ಹಚ್ಚಿ ಮಾಧ್ಯಮಗಳಲ್ಲಿ ಪ್ರಚಾರ ನೀಡಲಾಗಿದೆ. ಆಸ್ಪತ್ರೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.

      ರೈತರ ಬೆಳೆವಿಮೆಯ ಬಿಡುಗಡೆಯ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡುವ ಸಂಬಂಧ ಬರುವ ಸೋಮವಾರ ಸಿಇಓ ಅಧ್ಯಕ್ಷತೆಯಲ್ಲಿ ಬ್ಯಾಂಕ್‍ಗಳ ಹಾಗೂ ವಿಮಾ ಕಂಪನಿಗಳ ಸಭೆಯನ್ನು ಕರೆಯಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

     ಜಿಲ್ಲೆಯಲ್ಲಿ ಬರಗಾಲವಿರುವುದರಿಂದ ಮೇವು ಬ್ಯಾಂಕ್‍ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದ್ದು, ಕೊರಟಗೆರೆ ತಾಲ್ಲೂಕಿನಲ್ಲಿ 4 ಸ್ಥಳದಲ್ಲಿ, ಪಾವಗಡ 2 ಸ್ಥಳಗಳು ಸೇರಿದಂತೆ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಸ್ಥಳ ಗುರುತಿಸಿದೆ ಎಂದು ಪಶು ವೈದ್ಯ ಇಲಾಖೆಯ ಡಾ: ಪ್ರಕಾಶ್‍ರವರು ತಿಳಿಸಿದರು.

      ಜಿಲ್ಲಾ ಪಂಚಾಯತಿಯಿಂದ ಬಿಡುಗಡೆಯಾಗಿರುವ ಎಲ್ಲಾ ಅನುದಾನವನ್ನು ಫೆಬ್ರವರಿ ಮಾಹೆಯ ಒಳಗೆ ಸದ್ಭಳಕೆ ಮಾಡಿಕೊಳ್ಳಿ, ಸರ್ಕಾರಕ್ಕೆ ವಾಪಸ್ ಹೋಗಲು ಅವಕಾಶ ನೀಡಬೇಡಿ ಎಂದು ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಲತಾ ರವಿಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಬರಗಾಲದ ಹಿನ್ನಲೆಯಲ್ಲಿ ಹೇಮಾವತಿ ನಾಲೆಯಿಂದ ಬರುವ ನೀರನ್ನು ಕೆರೆಗಳಿಗೆ ತುಂಬಿಸಲು ಹೆಚ್ಚಿನ ಆಧ್ಯತೆ ನೀಡಿ. ಇಲ್ಲದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಹೇಮಾವತಿ ನಾಲಾ ಇಂಜಿನಿಯರ್‍ಗಳಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಡಾ: ನವ್ಯಬಾಬು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಅಕ್ಕಮಹಾದೇವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶನ ಸದಸ್ಯ ಪಿ.ಯು. ದಿನೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

(Visited 29 times, 1 visits today)