ತುಮಕೂರು: 

      ನಗರದ ಸಿದ್ದಗಂಗಾ ಮಠದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಕೋವಿಡ್-19 ಲಸಿಕೆ ಪಡೆದರು.

ಕೋವಿಡ್ ಲಸಿಕೆ ಪಡೆದ ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಳೆದ ಒಂದು ವರ್ಷದ ಹಿಂದೆ ಕೋವಿಡ್ ಮಹಾಮಾರಿ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು, ಬಹಳ ಪ್ರಯತ್ನ ಮಾಡಿ ನಮ್ಮ ವಿಜ್ಞಾನಿಗಳು ಕೋವ್ಯಾಕ್ಸಿನ್ ಔಷಧಿಯನ್ನು ಕಂಡು ಹಿಡಿದಿದ್ದಾರೆ. ಕೋವಿಡ್‍ಶೀಲ್ಡ್ ಮತ್ತು ಕೋವ್ಯಾಕ್ಸಿನ್‍ನ್ನು ಒಂದು ತಿಂಗಳಿಂದ ನೀಡುತ್ತಿದ್ದು, ಇದೀಗ ಸಾರ್ವಜನಿಕರಿಗೂ ಲಸಿಕೆ ನೀಡಲಾಗುತ್ತಿದೆ ಎಂದರು.

      ಈಗ 2ನೇ ಹಂತದ ಅಲೆ ಬರುತ್ತಿದೆ ಎಂಬ ಸುದ್ದಿಗಳು ಬರುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಾವು ಕೋವಿಡ್ ವ್ಯಾಕ್ಸಿನ್ ಪಡೆಯುವುದು ಒಳ್ಳೆಯದು. ನಮ್ಮ ದೇಹದಲ್ಲಿ ಕೋವಿಡ್ ಅಂಶ ಇದ್ದರೆ ಅದನ್ನು ನಿರ್ಮೂಲನೆ ಮಾಡಲು ಸಹಕಾರಿಯಾ ಗುತ್ತದೆ. ಜತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಎಂದ ಅವರು, ಇದರಿಂದ ಪಾರಾಗಲು ನಮ್ಮ ಸುತ್ತಮುಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

      ಕೋವಿಡ್ ನಿಯಂತ್ರಣಕ್ಕೆ ಸರ್ಕಾರವೂ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಜತೆಗೆ ನಾವೆಲ್ಲರೂ ಕೈ ಜೋಡಿಸಿ ಈ ಮಹಾಮಾರಿಯನ್ನು ನಿಯಂತ್ರಣಕ್ಕೆ ಸಹಕರಿಸೋಣ ಎಂದರು.

      ತಾವು ಸಹ ಇಂದು ಕೊರೊನಾ ಲಸಿಕೆ ಚುಚ್ಚುಮದ್ದು ಪಡೆದದ್ದೇ ಗೊತ್ತಾಗಲಿಲ್ಲ. ಇದರಿಂದ ರಕ್ಷಣೆ ಪಡೆಯಲು ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯಬೇಕು ಎಂದು ಅವರು ತಿಳಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಮಾತ ನಾಡಿ, ಇಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಕೋವಿಡ್ ಲಸಿಕೆ ಪಡೆದಿದ್ದಾರೆ. ಇದೇ ರೀತಿ ಸಾರ್ವಜನಿಕರು ಸಹ ಲಸಿಕೆ ಪಡೆಯುವ ಮೂಲಕ ಈ ಮಹಾಮಾರಿ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

      ಕೋವಿಡ್ ನಿರ್ಮೂಲನೆಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಸರ್ಕಾರದಿಂದ ಸಾರ್ವಜನಿಕರಿಗೆ ಲಸಿಕೆ ಕೊಡುವ ಕಾರ್ಯ ಕ್ರಮ ನಡೆಯುತ್ತಿದೆ. ಜಿಲ್ಲೆಯಲ್ಲಿಯೂ ಈ ಅಭಿಯಾನ ಯಶಸ್ವಿಯಾಗಿ ನಡೆದಿದೆ ಎಂದ ಅವರು ಈಗಾಗಲೇ ಶ್ರೀಗಳು, ಜಿಲ್ಲಾ ಉಸ್ತು ವಾರಿ ಸಚಿವರು, ಶಾಸಕರುಗಳು ಲಸಿಕೆ ಪಡೆದಿದ್ದಾರೆ ಎಂದರು.

      ಈಗಾಗಲೇ 1.10 ಲಕ್ಷ ಮಂದಿ ಸಾರ್ವಜನಿಕರಿಗೆ, 20 ಸಾವಿರ ಆರೋಗ್ಯ ಕಾರ್ಯಕರ್ತರಿಗೆ, 11 ಸಾವಿರ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀq Àಲಾಗಿದೆ ಎಂದು ಅವರು ಹೇಳಿದರು. ಕೋವಿಡ್ ಸೋಂಕಿತರ ಸಂಖ್ಯೆ ಪ್ರತಿದಿನ ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿ ಸರಾಸರಿ 40 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

      ಅದರಲ್ಲೂ ತುಮಕೂರು ನಗರ ಪ್ರದೇಶದಲ್ಲಿ ಹೆಚ್ಚಾಗಿ ಸೋಂಕು ಕಂಡು ಬರುತ್ತಿದೆ. ಆದ್ದರಿಂದ ಸಾರ್ವಜನಿಕರು ಈ ಕೊರೊನಾ ಮಹಾಮಾರಿ ನಿಯಂತ್ರಿಸಲು ಸ್ವಚ್ಚತೆಗೆ ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪರಮೇಶ್, ಕುಮಾರ್ ಉಪಸ್ಥಿತರಿದ್ದರು.

(Visited 7 times, 1 visits today)