ತುಮಕೂರು


ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ನಮ್ಮ ಕ್ಲಿನಿಕ್‍ನ್ನು ನಗರದ ಜಯಪುರ ಹಾಗೂ ದಿಬ್ಬೂರಿನಲ್ಲಿಂದು ಶಾಸಕ ಜ್ಯೋತಿಗಣೇಶ್ ಉದ್ಘಾಟಿಸಿದರು.
ಜಯಪುರ ಮತ್ತು ದಿಬ್ಬೂರಿನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿದ ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ರಾಜ್ಯ ಸರ್ಕಾರ ಸಾಮಾನ್ಯ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಮ್ಮ ಕ್ಲಿನಿಕ್‍ಗಳನ್ನು ಘೋಷಣೆ ಮಾಡಿದ್ದು, ರಾಜ್ಯಾದ್ಯಂತ 400ಕ್ಕೂ ಹೆಚ್ಚಿನ ನಮ್ಮ ಕ್ಲಿನಿಕ್‍ಗಳನ್ನು ಆರಂಭಿಸುತ್ತಿದೆ. ಅದರಲ್ಲೂ ನಗರಕ್ಕೆ 7 ನಮ್ಮ ಕ್ಲಿನಿಕ್ ಕೊಟ್ಟಿರುವುದು ವಿಶೇಷವಾಗಿದೆ ಎಂದರು.
ಮೊದಲನೆಯದು ಮೆಳೇಕೋಟೆಯಲ್ಲಿ, ನಂತರ ಮರಳೂರು ದಿಣ್ಣೆಯಲ್ಲಿ ಆರಂಭಿಸಿದ್ದು, ಇಂದು ಜಯಪುರ ಮತ್ತು ದಿಬ್ಬೂರಿನಲ್ಲಿ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ನಮ್ಮ ಕ್ಲಿನಿಕ್‍ನ್ನು ನೀಡಲಾಗಿದೆ. ನಗರದ 35 ವಾರ್ಡ್‍ಗಳಿಗೆ ಒಟ್ಟು 14 ಆರೋಗ್ಯ ಕೇಂದ್ರಗಳು ಜನರ ಆರೋಗ್ಯ ಕಾಪಾಡಲು ಸದಾ ಕಾರ್ಯನಿರತವಾಗಿರುತ್ತವೆ ಎಂದರು.
ಜನರಿಗೆ ಆರೋಗ್ಯ ಭಾಗ್ಯ ಕೊಡುವಂತಹ ಕಲ್ಪನೆ ಈ ನಮ್ಮ ಕ್ಲಿನಿಕ್ ನದ್ದಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಅವರು ಹೇಳಿದರು.
ನಮ್ಮ ಕ್ಲಿನಿಕ್‍ಗಳು ನಗರ ಪ್ರದೇಶದ ಸಮುದಾಯಕ್ಕೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶ ಹೊಂದಿದ್ದು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತದಿಂದ ಹಾಗೂ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.
ಆರೋಗ್ಯ ಸೇವೆಗಳು ಅತ್ಯವಶ್ಯವಿರುವ ಜನಸಂಖ್ಯೆಯ ಮೌಲ್ಯಮಾಪನ ಮತ್ತು ನಗರ ಪ್ರದೇಶಗಳ ಮ್ಯಾಪಿಂಗ್ ಆಧಾರದ ಮೇಲೆ ಪ್ರಸ್ತುತ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಲ್ಲದ ಕೊಳಗೇರಿ/ ದುರ್ಬಲ ಪ್ರದೇಶಗಳಿಗೆ
ಆದ್ಯತೆ ನೀಡಲಾಗುತ್ತಿದೆ. .ಪ್ರತಿ 30000 ದಿಂದ 60000 ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ರಾಜ್ಯ ಸರ್ಕಾರ ತುಮಕೂರು ಜಿಲ್ಲೆಗೆ 10 ನಮ್ಮ ಕ್ಲಿನಿಕ್ ನೀಡಿದ್ದು, ಅದರಲ್ಲೂ ತುಮಕೂರು
ನಗರಕ್ಕೆ 7 ನಮ್ಮ ಕ್ಲಿನಿಕ್ ನೀಡಿರುವುದು ಜನರ ಆರೋಗ್ಯ ಕಾಳಜಿಯ ಪ್ರತೀಕವಾಗಿದೆ ಎಂದರು.
ನಗರದಲ್ಲಿ ಆರಂಭವಾಗುತ್ತಿರುವ ನಮ್ಮ ಕ್ಲಿನಿಕ್‍ಗಳ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ವೀಣಾ, ಡಿಹೆಚ್‍ಓ ಡಾ. ಮಂಜುನಾಥ್, ಆರ್‍ಸಿಎಚ್ ಅಧಿಕಾರಿ ಡಾ. ಕೇಶವರಾಜು, ಆಂಜಿನಪ್ಪ, ಹೇಮಂತರಾಜು ಮತ್ತಿತರರು
ಉಪಸ್ಥಿತರಿದ್ದರು.

(Visited 1 times, 1 visits today)