ತುಮಕೂರು:

      ಇತಿಹಾಸ ಪ್ರಸಿದ್ಧ ಸಿದ್ದಗಂಗಾ ಮಠದ ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿಯಾಗಿದ್ದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಐಕ್ಯ ಸ್ಥಳದ ಗದ್ದುಗೆಯ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪಿಸಲಾಯಿತು.

      ಇಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳ ಗದ್ದುಗೆಯ ಪೀಠದ ಮೇಲೆ 38 ಇಂಚು ಉದ್ದದ ಶಿವಲಿಂಗವನ್ನು ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಪ್ರತಿಷ್ಠಾಪಿಸಲಾಯಿತು.

      ಪ್ರಾತಃಕಾಲದಿಂದಲೇ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹಲವು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಶಿವಲಿಂಗವನ್ನು ದೈವೀಕರಿಸಿ ಪ್ರತಿಷ್ಠಾಪನೆ ಮಾಡಲಾಯಿತು.

      ಇಂದು ಪ್ರತಿಷ್ಠಾಪಿಸಿದ ಶಿವಲಿಂಗವನ್ನು ಶ್ರೀಗಳು ತಂಗುತ್ತಿದ್ದ ಹಳೇ ಮಠದಲ್ಲಿ ಮಂಡಲದ 48 ದಿನಗಳ ಕಾಲ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಹಾಗೂ ಶಯನಾಧಿವಾಸದ ವಿಧಿ-ವಿಧಾನ ಪೂರೈಸಲಾಗಿತ್ತು.

       ಹೀಗೆ ಸಕಲ ವಿಧಿ ವಿಧಾನವನ್ನು ಪೂರೈಸಿ ದೈವೀಶಕ್ತಿಯನ್ನು ಪಡೆದ ಪವಿತ್ರ ಲಿಂಗವನ್ನು ಶ್ರೀಗಳ ಗದ್ದುಗೆಯ ಪೀಠದ ಮೇಲೆ ಇರಿಸಲಾಗಿದೆ.

      ಶ್ರೀಗಳ ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗವು 27 ಇಂಚು ಉದ್ದವಿದ್ದು, ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರುಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪಾನ ಬಟ್ಟಲು ಸೇರಿ ಪೂರ್ಣವಾಗಿ ಲಿಂಗ 38 ಇಂಚು ಇದೆ.

       ಶಿವಲಿಂಗ ಪ್ರತಿಷ್ಠಾಪನೆಯ ವಿಧಿ ವಿಧಾನ ಪೂರ್ಣಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಮ್ಮ ಗುರುದೇವರಾದ ಶ್ರೀಗಳ ಗದ್ದುಗೆಯ ಮೇಲೆ ಅವರ ಆಶಯದಂತೆ ಅಪೇಕ್ಷೆಯಂತೆ ಮತ್ತು ಭಕ್ತರ ಒತ್ತಾಸೆಯಂತೆ ಇಂದು ಗದ್ದುಗೆಯ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಶ್ರೀಗಳು ತಮ್ಮ ಗುರುಗಳ ಗದ್ದುಗೆಯ ಮೇಲೆ ಯಾವ ರೀತಿ ಇದೆಯೋ ಅದೇ ರೀತಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವಂತೆ ತಮಗೆ ಆದೇಶಿಸಿದ್ದರು. ಅದರಂತೆ ಇಂದು ಆ ಕಾರ್ಯ ನೆರವೇರಿಸಲಾಗಿದೆ ಎಂದು ಹೇಳಿದರು.

      ಶ್ರೀಗಳು ಇಷ್ಟಲಿಂಗಪೂಜೆಗೆ ಬಹಳ ಒತ್ತುಕೊಡುತ್ತಾ ಪೂಜೆ ನೆರವೇರಿಸಿಕೊಂಡು ಬಂದಿದ್ದರು. ಇಂದು ಶಿವಲಿಂಗ ಪ್ರತಿಷ್ಠಾಪಿಸಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ ಎಂದರು.

       ಭಾರತೀಯ ಪರಂಪರೆಯ ಯಾವುದೇ ಗದ್ದುಗೆಯ ಮೇಲೆ ಶಿವಲಿಂಗ ಇಡುವ ಪರಂಪರೆ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.
      ಶ್ರೀಗಳ ಗದ್ದುಗೆಯ ಮೇಲೆ ಶಿವಲಿಂಗ ಪ್ರತಿಷ್ಠಾಪನಾ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಇತಿಹಾಸ ಪ್ರಸಿದ್ದ ಶ್ರೀಗಳ ಗದ್ದುಗೆಗೆ ಶಾಸ್ತ್ರೋಕ್ತವಾಗಿ ಮಂತ್ರ ಪಠಣ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಅತ್ಯಂತ ಮಹತ್ವದ ಶಕ್ತಿ ಪೀಠ ಇದಾಗಿದೆ ಎಂದರು.

ಶಿವಲಿಂಗ ಕಣ್ತುಂಬಿಕೊಂಡ ಭಕ್ತರು:

      ಇಂದು ಮುಂಜಾನೆ ನೆರವೇರಿಸಿದ ಶ್ರೀಗಳ ಗದ್ದುಗೆ ಮೇಲೆ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ವಿವಿಧೆಡೆ ಭಕ್ತ ಸಮೂಹ ಹರಿದು ಬಂದಿತ್ತು.

     ರಾತ್ರಿಯೇ ಶ್ರೀಮಠಕ್ಕೆ ಬಂದು ತಂಗಿದ್ದ ಭಕ್ತಾದಿಗಳು ಶಿವಲಿಂಗ ಪ್ರತಿಷ್ಠಾಪನೆಯ ಪ್ರತಿಯೊಂದು ಪೂಜಾ ವಿಧಿ ವಿಧಾನವನ್ನು ಕಣ್ತುಂಬಿಕೊಂಡು ಶ್ರೀಗಳ ಗದ್ದುಗೆ ಮೇಲಿನ ಶಿವಲಿಂಗ ದರ್ಶನ ಪಡೆದರು.

     ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಶಾಸಕ ಜ್ಯೋತಿಗಣೇಶ್, ಗಣ್ಯರು, ಶ್ರೀಮಠದ ಮಕ್ಕಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನಕೆಂಕೆರೆ ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.

(Visited 36 times, 1 visits today)