ತುಮಕೂರು :

      ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ತಲಾ 11 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಂಪ್ಯೂಟರ್ ಆಪರೇಟರ್‍ಗಳನ್ನು ಸನ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ತಿಳಿಸಿದರು.

      ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ನಡೆದ ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಯೊಬ್ಬ ಗರ್ಭಿಣಿ, ಬಾಣಂತಿಯರ ಮನೆಗೆ ಭೇಟಿ ನೀಡಿ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಶ್ರಮಿಸಿರುವುದು ಶ್ಲಾಘನೀಯ ಎಂದರಲ್ಲದೆ ಮುಂದೆಯೂ ಸಹ ಇದೇ ರೀತಿ ಉತ್ತಮ ಸೇವೆ ಸಲ್ಲಿಸಿ ಎಲ್ಲಾ ಅರ್ಹ ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯುವಂತೆ ಮಾಡಬೇಕು ಎಂದು ಕರೆ ನೀಡಿದರು.

      ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಎಸ್.ನಂದಕುಮಾರ್ ಮಾತನಾಡಿ, 6 ವರ್ಷದೊಳಗಿನ ಸಣ್ಣ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿವಿಧ ಸೌಲಭ್ಯವನ್ನು ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಸ್ಮರಣೀಯ. ಇಂತಹ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ಸನ್ಮಾನಿಸುತ್ತಿರುವುದು ಅರ್ಥಪೂರ್ಣ ಎಂದು ನುಡಿದರು.

      ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್ ಶ್ರೀಧರ್ ಮಾತನಾಡಿ ಡಿಸೆಂಬರ್ 2 ರಿಂದ ಡಿಸೆಂಬರ್ 9 ರವರೆಗೆ ಒಂದು ವಾರಗಳ ಕಾಲ ನಡೆದ ಮಾತೃವಂದನಾ ಸಪ್ತಾಹದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಹಾಗೂ ಯಾವೊಬ್ಬ ಅರ್ಹ ಫಲಾನುಭವಿ ಬಿಟ್ಟು ಹೋಗದ ಹಾಗೆ ಶ್ರಮಿಸಿರುವ ಕಾರ್ಯಕರ್ತೆಯರು ಮತ್ತು ಎಲ್ಲಾ ಅರ್ಜಿಗಳನ್ನು ಸಕಾಲದಲ್ಲಿ ಗಣಕೀಕರಣ ಮಾಡಿದ ಕಂಪ್ಯೂಟರ್ ಆಪರೇಟರ್‍ಗಳಿಗೆ ಸನ್ಮಾನಿಸುವ ಕಾರ್ಯಕ್ರಮ ಇದಾಗಿದೆ ಎಂದರು.

      ಸಮಾರಂಭದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಪಾಲಾಕ್ಷಮ್ಮ, ಕಂಪ್ಯೂಟರ್ ಆಪರೇಟರ್ ಮಾನಸ, ಗುಬ್ಬಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಕಮಲ, ಕಂಪ್ಯೂಟರ್ ಆಪರೇಟರ್ ಭಾಗ್ಯ, ಕೊರಟಗೆರೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಮ್ಮ, ಕಂಪ್ಯೂಟರ್ ಆಪರೇಟರ್ ನಂದಿನಿ, ಕುಣಿಗಲ್ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ನಾಜೀಯ ಬಾನು, ಕಂಪ್ಯೂಟರ್ ಆಪರೇಟರ್ ರಶ್ಮಿ, ಮಧುಗಿರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಎನ್.ಆರ್ ರೂಪಾ, ಕಂಪ್ಯೂಟರ್ ಆಪರೇಟರ್ ರಂಜಿತಾ, ಪಾವಗಡ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಯಶೋಧ, ಕಂಪ್ಯೂಟರ್ ಆಪರೇಟರ್ ಮಂಜುಳ, ಶಿರಾ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮಂಜೂರ್ ಉನ್ನೀಸ, ಕಂಪ್ಯೂಟರ್ ಆಪರೇಟರ್ ಕೃಷ್ಣಮೂರ್ತಿ, ತಿಪಟೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮಂಜುಳ ಕಂಪ್ಯೂಟರ್ ಆಪರೇಟರ್ ಕವಿತ, ತುಮಕೂರು ಗ್ರಾಮಾಂತರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಇಂದ್ರಮ್ಮ, ಕಂಪ್ಯೂಟರ್ ಆಪರೇಟರ್ ಎಸ್.ರೂಪಕುಮಾರಿ, ತುಮಕೂರು ನಗರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮಂಜುಳ, ಕಂಪ್ಯೂಟರ್ ಆಪರೇಟರ್ ಪವಿತ್ರ, ತುರುವೇಕೆರೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಚಿಕ್ಕಮ್ಮ, ಕಂಪ್ಯೂಟರ್ ಆಪರೇಟರ್ ಮಹಾಲಕ್ಷ್ಮಮ್ಮ ಇವರನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಿಬ್ಬಂದಿ ಹೆಚ್.ಜಿ.ಶಶಿಧರ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಎನ್.ಆರ್.ರಂಗರಾಜು, ಜಿಲ್ಲಾ ಕಾರ್ಯಕ್ರಮ ಸಹಾಯಕರು ಸೇರಿದಂತೆ ಮಹಿಳಾ ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.

(Visited 34 times, 1 visits today)