ತುಮಕೂರು

ಸಿದ್ದರಾಮೇಶ್ವರರ ಯಾವ ಜಾತಿಗೂ ಸೀಮಿತರಲ್ಲ, ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿ ವಚನ ಕ್ರಾಂತಿಯನ್ನು ಮನೆಮನೆಗೆ ತಲುಪಿಸಿದ ಆದ್ಯ ಶರಣರು ಎಂದು ಶಾಸಕ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯ ಮಟ್ಟದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಗುರು ಸಿದ್ದರಾಮೇಶ್ವರರು ನೀಡಿದ ಸಂದೇಶ ಇಂದಿನ ಸಮಾಜಕ್ಕೂ ಅವಶ್ಯಕವಾಗಿದೆ ಎಂದರು.
ವಚನ ಕ್ರಾಂತಿಯೊಂದಿಗೆ ಸಮಾಜದ ಪರಿವರ್ತನೆಗೆ ಶ್ರಮಿಸಿ, ನಾಡಿನೆಲ್ಲೆಡೆ ಕೆರೆ ಕಟ್ಟಿ ನೀರಿನ ಮಹತ್ವವನ್ನು 12ನೇ ಶತಮಾನದಲ್ಲಿಯೇ ತಿಳಿಸಿದ ಗುರು ಸಿದ್ದರಾಮೇಶ್ವರರ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ, ಸಮುದಾಯದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಸಮುದಾಯದ ಯುವಕ-ಯುವತಿಯರಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.
ಸಮುದಾಯದ ಹಿತವನ್ನು ಕಾಯುವ ನಿಟ್ಟಿನಲ್ಲಿ ಸಮುದಾಯದ ಎಲ್ಲರು ಒಗ್ಗಟ್ಟಾಗಬೇಕಿದೆ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿ ಒಟ್ಟಾಗಿ ವಿರೋಧಿಸಬೇಕಿದೆ, ಇಲ್ಲದೆಹೋದಲ್ಲಿ ಸಮುದಾಯ ಹಿಂದುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಸಮುದಾಯ ಎಂದಾಗ ಎಲ್ಲರೂ ಪಕ್ಷಾತೀತವಾಗಿ ಒಂದಾಗುವಂತೆ ಕರೆ ನೀಡಿದರು.
ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿ, ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ನೀಡಿದವರು ಡಾ.ಬಿ.ಆರ್. ಅಂಬೇಡ್ಕರ್ ಅವರು, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯವಾಗಿ ಮೀಸಲಾತಿ ಸಿಕ್ಕಿದ್ದರಿಂದಲೇ ಭೋವಿ ಸಮಾಜದಂತಹ ಹಿಂದು ಳಿದ ಸಮುದಾಯಕ್ಕೆ ಎಂಟು ಶಾಸಕ ಸ್ಥಾನ ಸಿಕ್ಕಿವೆ ಎಂದರು.
ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಸಿದ್ದರಾಮರು ಬುದ್ಧನಂತೆ ಸಮಾಜಕ್ಕೆ ಬೆಳಕು ತೋರಬಲ್ಲ ವ್ಯಕ್ತಿತ್ವವುಳ್ಳವರು, ವಚನಗಳ ಮೂಲಕ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಪವಾಡವನ್ನು ಬಿಟ್ಟು ಸಾಮಾಜಿಕ ನೆಲೆಗಟ್ಟಿನಲ್ಲಿ ಅಭ್ಯಸಿಸಬೇಕಾದ ಅನಿವಾರ್ಯತೆ, ಸಿದ್ದರಾಮೇಶ್ವರರ ವಚನಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಸಿದ್ದರಾಮೇಶ್ವರರ ಗದ್ದುಗೆಗಳು ರಾಜ್ಯದ ಉದ್ದಗಲಕ್ಕೂ ಇವೆ, ಜನರೊಂದಿಗೆ ಬೆರೆತು, ಜನರಿಗೆ ಅವಶ್ಯಕವಾದ ಲೋಕೋಪಯೋಗಿ ಕೆಲಸ ಮಾಡಿದ ಅವರನ್ನು ಜಾತ್ಯಾತೀತ, ಭಾಷಾÁತೀತ, ಧರ್ಮಾತೀತವಾಗಿ ಮಹಾರಾಷ್ಟ್ರ, ಕರ್ನಾಟಕದ ಜನರು ಒಪ್ಪಿಕೊಂಡು ಆರಾಧಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎತ್ತಿನಹೊಳೆ ಭೂಸ್ವಾಧೀನ ಅಧಿಕಾರಿ ಮಂಜುನಾಥ್,ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಏಕೇಶ್ ಬಾಬು,ಸರ್ಕಾರಿ ನೌಕರರ ಸಂಘದ ಖಜಾಂಚಿ ಚೌಡಯ್ಯ ಹಾಗೂ ಗುತ್ತಿಗೆದಾರ ರಾಜೇಂದ್ರ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್ ಹಾಲ್‍ನಿಂದ ಪ್ರಾರಂಭವಾದ ಸಿದ್ದರಾಮೇಶ್ವರರ ಭಾವಚಿತ್ರ ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮೆರವಣಿಗೆಗೆ ಸಂಸದ ಜಿ.ಎಸ್.ಬಸವರಾಜು ಚಾಲನೆನೀಡಿದರು.
ಸಿದ್ದರಾಮೇಶ್ವರ ಜಯಂತಿಯಲ್ಲಿ ತುಮಕೂರು ಉಪವಿಭಾಗಧಿಕಾರಿ ನಟರಾಜ್, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಊರಕೆರೆ ಉಮೇಶ್ ,ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ಎಸ್ ಮಂಜುನಾಥ್,ವಿಶ್ವನಾಥ್,ಮಾಜಿ ತಾ ಪಂ ಸದಸ್ಯ ಹೆಚ್ ಎಸ್ ಶಿವ ಕುಮಾರ್, ಕೆಪಿಸಿಸಿ ಸದಸ್ಯ ಯೋಗೀಶ್,ಉದ್ಯಮಿಗಳಾದ ಮಾಕಳಿರವಿ,ಎಸ್ ಡಿ ಎಲ್ ರಾಜೇಂದ್ರ, ಭೋವಿ ಸಮುದಾಯದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಲ್ ಗಂಗಾಧರಪ್ಪ, ಕೆಎಎಸ್ ಅಧಿಕಾರಿಗಳಾದ ಮಂಜುನಾಥ್, ಏಕೇಶ್ ಬಾಬು, ವೃತ್ತ ನಿರೀಕ್ಷಕ ಮುನಿರಾಜು , ಮುಖಂಡರಾದ ವೆಂಕಟಸ್ವಾಮಿ,ಗಿರಿಯಪ್ಪ, ಕೆ ಆರ್ ನಾಗೇಶ್, ಕೊತ್ತೂರು ಹನುಮಂತರಾಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ, ಹರಿಕಥಾ ವಿದ್ವಾಂಸ ಲಕ್ಷ್ಮಣ್ ದಾಸ್, ಮತ್ತಿತರರು ಹಾಜರಿದ್ದರು.

(Visited 1 times, 1 visits today)