ತುಮಕೂರು:

      ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಪಾರ್ಲಿಮೆಂಟಿನ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

      ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಾಸಕ ಡಿ.ಸತ್ಯನಾರಾಯಣ್ ಶ್ರದ್ಧಾಂಜಲಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾಗಿ, ಆರಂಭದಿಂದಲೂ ರೈತರು, ಕಾರ್ಮಿಕರ ವಿಚಾರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆಯೂ ರೈತರ ಪರವಾಗಿ ನಿಲ್ಲಲ್ಲಿದೆ ಎಂದರು.

      ರೈತ ವಿರೋಧಿ ಕಾಯ್ದೆಗಳಾಗಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ-2020, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ, 2020 ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕುರಿತಂತೆ ಇನ್ನೊಂದು ರಾಷ್ಟ್ರೀಯ ಪಕ್ಷದ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಇಂತಹ ಕರಾಳ ಕಾಯ್ದೆಗಳು ಜಾರಿಯಾಗಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಹೆಚ್.ಡಿ.ದೇವೇಗೌಡ ಈ ಮೂರು ಕಾಯ್ದೆಗಳ ತಿದ್ದುಪಡಿಯಿಂದ ಇದರ ಫಲಾನುಭವಿಗಳಾಗಲಿರುವ ರೈತರು, ಕಾರ್ಮಿಕರಿಗೆ ಏನಾದರೂ ಉಪಯೋಗವಿದೆಯೇ ಎಂದು ಬಿಜೆಪಿ ಸರಕಾರವನ್ನು ಪ್ರಶ್ನಿಸಿದ್ದಾರೆ.

      ಹಾಲಿ ಇದ್ದ ಭೂ ಸುಧಾರಣಾ ಕಾಯ್ದೆಯಿಂದ ಏನಾದರೂ ಕೈಗಾರಿಕೆ ತೆರೆಯಲು ಅನಾನುಕೂಲವಿತ್ತೇ ಎಂದು ಪ್ರಶ್ನಿಸಿದ ದೇವೇಗೌಡರು, ಭೂ ಸುಧಾರಣೆ ಕಾಯ್ದೆ ಕಲಂ 79(ಬಿ)ಗೆ ತಿದ್ದುಪಡಿ ಮತ್ತು 109ನೇ ಕಲಂ ರದ್ದಿನಿಂದ ಕರ್ನಾಟಕ ಸೇರಿದಂತೆ ರಾಷ್ಟ್ರದಲ್ಲಿ ತುಂಡು ಭೂಮಿ ಹೊಂದಿದ್ದ ರೈತರು ಬೀದಿಗೆ ಬೀಳಲಿದ್ದಾರೆ. ಅಲ್ಲದೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಯಿಂದ ದೊಡ್ಡ ಕಂಪನಿಗಳ ಏಕಸ್ವಾಮ್ಯದಿಂದ ಸಣ್ಣ ವರ್ತಕರು ಮತ್ತು ರೈತರು ಮತ್ತಷ್ಟು ಅದೋಗತಿಗೆ ತಳ್ಳಲ್ಪಡಲಿದ್ದಾರೆ. ಈ ಬಗ್ಗೆ ಕಿಂಚಿತ್ತು ಯೋಚನೆಯಿಲ್ಲದ, ಉದ್ದಿಮೆದಾರರು, ಬಂಡವಾಳ ಶಾಹಿಗಳ ಪರವಾಗಿ ಬಿ.ಎಸ್.ವೈ ಸರಕಾರ ತರಾತುರಿಯಲ್ಲಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವುದು ಸರಕಾರಕ್ಕೆ ಇರುವ ರೈತಪರ ಕಾಳಜಿಯನ್ನು ತೋರಿಸುತ್ತದೆ ಎಂದು ಹೆಚ್.ಡಿ.ದೇವೇಗೌಡರು ಟೀಕಿಸಿದರು. 

      ಸರಕಾರ ತಂದಿರುವ ಹೊಸ ಕಾಯ್ದೆಗಳಿಂದ ಇದುವರೆಗೂ ಸರಕಾರ ಭೂಮಿ ಒತ್ತುವರಿ ಮಾಡಿಕೊಂಡಿದ್ದ ದೊಡ್ಡ ದೊಡ್ಡ ಕುಳಗಳು ಸದರಿ ಭೂಮಿಯನ್ನು
ತಮ್ಮಂತೆ ಮಾಡಿಕೊಳ್ಳಲಿವೆ. ಅಲ್ಲದೆ ಎ.ಟಿ.ರಾಮುಸ್ವಾಮಿ ವರದಿ ಅನ್ವಯ ಒತ್ತುವರಿ ಎಂದು ಗುರುತಿಸಲ್ಪಟ ಸುಮಾರು 45 ಸಾವಿರ ಎಕರೆ ಪ್ರದೇಶವು ಉಳ್ಳವರ ಪಾಲಾಗಲಿದೆ ಎಂಬ ಆತಂಕವನ್ನು ಹೆಚ್.ಡಿ. ದೇವೇಗೌಡರು ವ್ಯಕ್ತಪಡಿಸಿದರು.

      ಇತ್ತೀಚಿಗೆ ನಿಧನರಾದ ಶಾಸಕ ಡಿ.ಸತ್ಯನಾರಾಯಣ ಪಕ್ಷ ನಿಷ್ಠೆಗೆ ಇರುವ ಮತ್ತೊಂದು ಹೆಸರು, ಎಂದಿಗೂ ತಾನು ನಂಬಿರುವ ತತ್ವ ಸಿದ್ಧಾಂತಗಳಿಗೆ ದ್ರೋಹ ಬಗೆಯದ ಸೈದ್ಧಾಂತಿಕ ನಿಲುವಿನ ವ್ಯಕ್ತ್ತಿ .ಇಂತಹ ಇಳಿವಯಸ್ಸಿನಲ್ಲಿಯೂ ನಾನು ಈ ಸಭೆಯಲ್ಲಿ ಭಾಗವಹಿಸಿರುವುದು ಸತ್ಯನಾರಾಯಣ ಅವರ ವ್ಯಕ್ತಿತ್ವಕ್ಕೆ ಗೌರವ ನೀಡಿ ಎಂದು ಅತೀವ ದುಖಃ ವ್ಯಕ್ತಪಡಿಸಿದರು.

      ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್, ಜೆಡಿಎಸ್ ಪಕ್ಷವನ್ನು ರೈತರು, ಕಾರ್ಮಿಕರು, ಬಡವರಿಂದ ಕಟ್ಟಿ ಬೆಳೆಸಿರುವ ಹೆಚ್.ಡಿ.ದೇವೇಗೌಡರು, ರೈತರು ಸಂಕಷ್ಟದಲ್ಲಿರುವಾಗ ತಮ್ಮ ವಯಸ್ಸನ್ನು ಲೆಕ್ಕಿಸದೆ ಹೋರಾಟಕ್ಕೆ ಇಳಿದಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

      ಪ್ರತಿಭಟನೆಯಲ್ಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಎಂ.ಟಿ.ಕೃಷ್ಣಪ್ಪ, ಹೆಚ್.ನಿಂಗಪ್ಪ, ಸುಧಾಕರಲಾಲ್, ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜೀ ನಪ್ಪ, ಉಪಾಧ್ಯಕ್ಷ ಟಿ.ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಮುಖಂಡರಾದ ಎ.ಗೋವಿಂದರಾಜು, ಬೆಳ್ಳಿಲೋಕೇಶ್, ಸೋಲಾರ್ ಕೃಷ್ಣಮೂರ್ತಿ, ಮಹಿಳಾ ಘಟಕದ ತಾಹೀರಾ ಬೇಗಂ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

      ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಧಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

(Visited 6 times, 1 visits today)