ಮಧುಗಿರಿ :
ಮಧುಗಿರಿ ಪಟ್ಟಣದಲ್ಲಿ ಹಾದುಹೋಗಿರುವ ಕೆಶಿಪ್ ಬೈಪಾಸ್ ರಸ್ತೆಗೆ ರೈತರು ತಡೆ ಗೋಡೆ ರೀತಿಯಲ್ಲಿ ಅಡ್ಡಹಾಕಿ ಪರಿಹಾರ ಹಣ ಬಿಡುಗಡೆಗಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ
ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನವನ ದಿಂದ ಆರಂಭಗೊಳ್ಳುವ ಬೈಪಾಸ್ ರಸ್ತೆಯ ಬಸವನಹಳ್ಳಿ ಸಮೀಪ ಇರುವ ಕೆಎಸ್ ಆರ್ ಟಿಸಿ ಡಿಪೋ ವರೆಗೂ ಇದೆ.
ಮಧುಗಿರಿ ಹಿಂದೂಪುರ ರಸ್ತೆಗೆ ಹೊಂದಿಕೊಂಡಿರುವ ಬೈಪಾಸ್ ರಸ್ತೆಯಲ್ಲಿ ಕಳೆದ 4ದಿನಗಳಿಂದ ಕಲ್ಲಿನ ಗುಂಡುಗಳನ್ನು ಹಾಕಿದ್ದಾರೆ. ಇನ್ನೊಂದು ರಸ್ತೆಗೆ ಮಣ್ಣಿನಿಂದ ತುಂಬಿ ಬೈಪಾಸ್ ರಸ್ತೆಯನ್ನು ಬಂದ್ ಮಾಡಲಾಗಿದೆ.
ಹಿಂದೂಪುರ ರಸ್ತೆ ಮತ್ತು ಬಸವನಹಳ್ಳಿ ರಸ್ತೆ ನಾಲ್ವರು ರೈತರಿಗೆ ಮತ್ತು ಗೌರಿಬಿದನೂರು ಹಿಂದೂಪುರ ರಸ್ತೆಯಲ್ಲಿ ನ ನಾಲ್ವರು ರೈತರಿಗೆ ಸರಕಾರದಿಂದ ಇಲ್ಲಿಯವರೆಗೂ ಸೂಕ್ತ ಪರಿಹಾರ ಹಣ ನೀಡಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ 8ರೈತರಿಗೆ ಕೆಶಿಪ್ ನವರು ಖಾಲಿ ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡು ಕಾಮಗಾರಿ ನಡೆಸಿದ್ದಾರೆ ಎನ್ನಲಾಗಿದೆ.
ಭೂಸ್ವಾಧೀನದ ಪರಿಹಾರದ ಹಣವನ್ನು 3ಪಟ್ಟು ನೀಡುವ ಬದಲು 1ಪಟ್ಟಿನಷ್ಟು ಮಾತ್ರ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಈ ಪರಿಹಾರದ ಹಣವನ್ನು 3ಪಟ್ಟು ನೀಡಬೇಕೆಂದು ಕಾನೂನು ಹೇಳುತ್ತಿದೆ. ಇದನ್ನು ಒಪ್ಪಿಕೊಳ್ಳದ ರೈತರು ಶಾಸಕ ಎಂ.ವಿ.ವೀರಭದ್ರಯ್ಯನವರ ಗಮನಕ್ಕೆ ಹಲವು ಬಾರಿ ತಂದರೂ ಕೂಡ ಪರಿಹಾರದ ಹಣ ನೀಡದೇ ಇರುವುದರಿಂದ ಬೇಸತ್ತ ರೈತರು ಬೇರೆ ದಾರಿ ಕಾಣದೆ ಬೈಪಾಸ್ ರಸ್ತೆಗೆ ಅಡ್ಡಪಡಿಸಿದ್ದಾರೆನ್ನಲಾಗಿದೆ. ರೈತರುಗಳಾದ ಹನು ಮಂತರಾಯಪ್ಪ, ನರಸಮ್ಮ , ದೊಡ್ಡಹನುಮಂತಪ್ಪ, ಹನು ಮಂತರಾಯ, ಪಾಲ್ಕಿರಣ್ಣ, ಹೊನ್ನಕ್ಕ ,ಬೈರಣ್ಣ ,ಮುದ್ದಪ್ಪ ರವರುಗಳಿಗೆ ಸೂಕ್ತ ಪರಿಹಾರ ನೀಡದ ಹೊರತು ರಸ್ತೆ ತೆರವುಗೊಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪುರಸಭಾ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ರೈತರಿಗೆ ಸೂಕ್ತ ಪರಿಹಾರ ನೀಡಿ ರಸ್ತೆ ತೆರವಿಗೆ ಮುಂದಾಗಿ. ಹಲವು ವರ್ಷಗಳಿಂದ ರೈತರಿಗೆ ಹಣ ಸಂದಾಯವಾಗಿಲ್ಲ. ಜಮೀನು ಕಳೆದುಕೊಂಡು ಹಣ ಕಳೆದುಕೊಂಡ ರೈತರು ಹತಾಶರಾಗಿದ್ದಾರೆ.ಸೂಕ್ತ ಪರಿಹಾರ ನೀಡಿ ರಸ್ತೆ ತೆರವುಗೊಳಿಸಲು ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಹೋರಾಟಕ್ಕೆ ರೈತರು ಮುಂದಾಗಬೇಕಾಗುತ್ತದೆಂದರು.