ಹುಳಿಯಾರು: ಪಟ್ಟಣದ ಬಸ್ ನಿಲ್ದಾಣದ ಸಮೀಪದ ಕೆರೆ ಅಂಗಳದಲ್ಲಿ ಒತ್ತುವರಿ ಮಾಡಿಕೊಂಡು ಇಡಲಾಗಿದ್ದ ಸುಮಾರು ೫೦ ಕ್ಕೂ ಹೆಚ್ಚು ಗೂಡಂಗಡಿಗಳನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಉಚ್ಚ ನ್ಯಾಯಾಲಯದ ಆದೇಶ ಹಾಗೂ ಇತ್ತೀಚೆಗೆ ಕೆರೆಗೆ ಔಷಧೀಯ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಪತ್ರಿಕಾ ವರದಿ ಆಧರಿಸಿ ಉಪಲೋಕಾಯುಕ್ತರು ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ನೀರಾವರಿ ಇಲಾಖೆಗೆ ನೋಟಿಸ್ ನೀಡಲಾಗಿದ್ದು, ಇಂದಿನ ತೆರವು ಕಾರ್ಯಾಚರಣೆ ಕೈಗೊಳ್ಳಲು ಕಾರಣ ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ನೀರಾವರಿ ಇಲಾಖೆಯ ಎಇಇ ಗಂಗಾಧರಯ್ಯ, ಎಇ ಚಿತ್ತಯ್ಯ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಜೆಸಿಬಿ ಹಾಗೂ ಪೌರಕಾರ್ಮಿಕರೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ರೈ, ಕಾಮನಬಿಲ್ಲು ಫೌಂಡೇಶನ್ನ ಚೆನ್ನಕೇಶವ ಹಾಗೂ ಆರ್.ಟಿ.ಓ. ರಾಜಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಖಚಿತ ಸರ್ವೆ ವರದಿ ತರದೆ, ಕೇವಲ ಬಡವರ ಗೂಡಂಗಡಿಗಳನ್ನು ಮಾತ್ರ ತೆರವುಗೊಳಿಸುತ್ತಿರುವುದು ಲೋಕಾಯುಕ್ತಕ್ಕೆ ಕಣ್ಣೊರೆಸುವ ತಂತ್ರ. ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಬೃಹತ್ ಮನೆಗಳು, ಶಂಕರಪುರದ ಭಾಗದ ಕಟ್ಟಡಗಳು, ಇಟ್ಟಿಗೆ ಫ್ಯಾಕ್ಟರಿಗಳು ಹಾಗೂ ತೋಟಗಳನ್ನು ಮೊದಲು ತೆರವುಗೊಳಿಸಿ. ದೊಡ್ಡ ಒತ್ತುವರಿದಾರರ ತಂಟೆಗೆ ಹೋಗದೆ ಕೇವಲ ಸಣ್ಣ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ? ಪೂರ್ಣ ಪ್ರಮಾಣದ ಸರ್ವೆ ಮುಗಿಸಿ, ಎಲ್ಲ ಒತ್ತುವರಿಯನ್ನೂ ಏಕಕಾಲಕ್ಕೆ ತೆರವುಗೊಳಿಸಿ ಎಂದು ಪಟ್ಟು ಹಿಡಿದರು.
ಕೆರೆ ಅಂಗಳಕ್ಕೆ ಸೇರಿದ ಜಾಗದಲ್ಲಿ ಫುಟ್ಪಾತ್ ಕರ (ಟ್ಯಾಕ್ಸ್) ಅನ್ನು ಇಷ್ಟು ದಿನ ಪಟ್ಟಣ ಪಂಚಾಯಿತಿಯಿAದ ಹೇಗೆ ವಸೂಲಿ ಮಾಡುತ್ತಿದ್ದೀರಿ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಗಾಗಿ ಕೆರೆ ಅಂಗಳದಿAದ ತೆರವು ಮಾಡಿಸಿದರೆ ಬದಲಿ ಸ್ಥಳ ಗುರುತಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಒಟ್ಟು ೩೮ ಕೆರೆಗಳ ಸರ್ವೆ ಕಾರ್ಯ ನಡೆಯಬೇಕಿದೆ. ಹಿರಿಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಆದಷ್ಟು ಬೇಗ ಕೆರೆ ಗಡಿ ಗುರುತಿಸಲಾಗುವುದು. ಕೋರ್ಟ್ ಆದೇಶದಂತೆ ನಾವು ಯಾವುದೇ ಒತ್ತುವರಿಯನ್ನೂ ಬಿಡುವುದಿಲ್ಲ. ಸರ್ವೆ ವರದಿ ಬಂದ ತಕ್ಷಣ ಎಲ್ಲಾ ಒತ್ತುವರಿ ತೆರವುಗೊಳಿಸಿ ಚೈನ್ ಲಿಂಕ್ ಬೇಲಿ ಹಾಕಲಾಗುವುದು ಎಂದು ಎಇಇ ಗಂಗಾಧರಯ್ಯ ಉತ್ತರಿಸಿ ತೆರವು ಕಾರ್ಯ ಪೂರ್ಣಗೊಳಿಸಿದರು.
(Visited 1 times, 1 visits today)





