ತುಮಕೂರು: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಪ್ರವಾದಿ ಮಹಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಆಕೆಯ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಂದು ಮಜೀದ್ ಇ ಅಲ್ಲಾ ನೇತೃತ್ವದಲ್ಲಿ ನೂರಾರು ಮುಸ್ಲಿಂ ಭಾಂಧವರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಗುಂಚಿ ಸರ್ಕಲ್‌ನಲ್ಲಿ ಮಸೀದಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಮುಸ್ಲಿಂ ಭಾಂಧವರು ಪ್ರವಾದಿ ಮಹಮದ್ ಫೈಗಂಬರ್ ಅವರ ಬಗ್ಗೆ ಸಂದರ್ಶನವೊAದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆಯನ್ನು ಬಂಧಿಸಿ, ಆಕೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ, ಆಕೆಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮಹಮದ್ ಫೈಗಂಬರ್ ಮತ್ತು ಅವರ ಪತ್ನಿಯ ಬಗ್ಗೆ ಆಧಾರವಿಲ್ಲದ ಆರೋಪ ಮಾಡುತ್ತಾ, ತೀರ ತುಚ್ಚವಾಗಿ ಮಾಡಿರುವ ನಾಜಿಯಾ ಇಲಾಹಿ ಖಾನ್ ಉದ್ದೇಶ ಪೂರ್ವಕವಾಗಿಯೇ ಈ ಹೇಳಿಕೆ ನೀಡಿ, ನಮ್ಮ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು. ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಜಮಾ ಆತೆಯ ತುಮಕೂರು ಉಸ್ತುವಾರಿ ಅಬ್ದುರ್ ರೆಹಮಾನ ಮೊಗರ್ ಪಾಣೆ ಮಾತನಾಡಿ, ದೇವ ದೂತರಾದ ಪ್ರವಾದಿ ಮಹಮದ್‌ರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ನಾಜಿಯಾ ಇಲಾಹಿ ಖಾನ್ ಹೇಳಿಕೆಯನ್ನು ಖಂಡಿಸಿ, ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ. ಆಕೆಯ ವಿರುದ್ದ ಸರಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಮಜೀದ್ ಇ ಅಲ್ಲಾನ ಕಾರ್ಯದರ್ಶಿ ಫಯಾಜ್ ಖಾನ್ ಮಾತನಾಡಿದರು. ಪ್ರತಿಭಟನೆಯಲ್ಲಿ ವಕ್ಪ್ ಸಮಿತಿ ಮಾಜಿಉಪಾಧ್ಯಕ್ಷರಾದ ಮೌಲಾನಾ ಆರೀಫ್ ರಜಾ, ರಿಜ್ವಾನ್ ಪಾಷ ಜುನೇದಿ, ಅಭ್ರಹಾರ್ ಖಾದ್ರಿ, ಸನ್ನತ್ ಸ್ಟೂಡೆಂಟ್ ಆರ್ಗನೈಜೇಷನ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಸುನ್ನತ್ ಜಮಾ ಆತೆ ಮೌಲ್ವಿಗಳು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

(Visited 1 times, 1 visits today)