
ಹುಳಿಯಾರು: “ಬಾರಪ್ಪಾ ಮಳೆರಾಯ… ಯಾಕಪ್ಪಾ ಬರುತ್ತಿಲ್ಲ…” – ಈ ಸಾಲುಗಳು ಯಾವುದೋ ಸಿನೆಮಾ ಗೀತೆಯಲ್ಲ, ಬದಲಿಗೆ ಮುಗಿಲ ಕಡೆಗೆ ಕಣ್ಣು ನೆಟ್ಟು ಕುಳಿತಿರುವ ಕೋಟ್ಯಂತರ ಅನ್ನದಾತರ ಎದೆಯಾಳದಿಂದ ಹೊರಹೊಮ್ಮಿದ ಆಕ್ರಂದನ. ಮಳೆಯಿಲ್ಲದೆ ಕಂಗಾಲಾಗಿರುವ ಇಂದಿನ ಕೃಷಿ ಸ್ಥಿತಿಯನ್ನು ತಾಲೂಕಿನ ಹುಳಿಯಾರು ಹೋಬಳಿಯ ದೊಡ್ಡಬಿದ್ರೆ ಗ್ರಾಮದ ಯುವರೈತ ಹಾಗೂ ಹವ್ಯಾಸಿ ಗಾಯಕ ರಮೇಶ್ ಅವರು ತಮ್ಮದೇ ಶೈಲಿಯಲ್ಲಿ ಹಾಡು ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ. ಪ್ರಸ್ತುತ ಈ ವಿಡಿಯೋ ಗ್ರಾಮೀಣ ಭಾಗದ ಕರುಣಾಜನಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ವೈರಲ್ ಆಗುತ್ತಿದೆ.
ಅಭಿವೃದ್ಧಿ ಹೆಸರಲ್ಲಿ ವಿನಾಶ: ರೈತನ ಮಾರ್ಮಿಕ ಪ್ರಶ್ನೆ: “ಮರಗಿಡವನ್ನ ಕಡಿದೆವಾ, ಅರಣ್ಯ ನಾಶ ಮಾಡೇವಾ… ಅಭಿವೃದ್ಧಿ ಹೆಸರಲ್ಲಿ ಸರ್ವನಾಶ ಮಾಡೇವಾ…” ಎಂದು ರಮೇಶ್ ಹಾಡಿನ ಆರಂಭದಲ್ಲೇ ಪರಿಸರ ನಾಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಾನವನ ಸ್ವಾರ್ಥ, ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ಅವಸಾನವೇ ಇಂದು ಮಳೆ ಕೈಕೊಡಲು ಮುಖ್ಯ ಕಾರಣ ಎಂಬುದನ್ನು ಈ ಯುವ ರೈತ ಅತ್ಯಂತ ಮಾರ್ಮಿಕವಾಗಿ ನೆನಪಿಸಿದ್ದಾರೆ. ಪ್ರಕೃತಿಯ ಮುನಿಸಿಗೆ ಇಡೀ ಜೀವಸಂಕುಲವೇ ಬೆಲೆ ತೆರುತ್ತಿದೆ ಎಂಬ ಸತ್ಯ ಅವರ ಹಾಡಿನ ಪ್ರತಿ ಸಾಲಿನಲ್ಲೂ ಎದ್ದು ಕಾಣುತ್ತದೆ.
ಮೇವಿಲ್ಲ, ನೀರಿಲ್ಲ: ಮೂಕಪ್ರಾಣಿಗಳ ಗೋಳು!: ರಮೇಶ್ ಅವರು ತಮ್ಮ ಹೊಲದಲ್ಲಿ ನಿಂತು, ದನಕರುಗಳನ್ನು ಹಿಡಿದುಕೊಂಡು ಹಾಡುತ್ತಿರುವ ದೃಶ್ಯ ಯಾವುದೇ ಸಹೃದಯಿ ಗ್ರಾಮೀಣ ಜನರನ್ನು ಕಣ್ಣೀರು ತರಿಸುವಂತಿದೆ. “ದನಕರುಗಳಿಗೆ ಮೇವಿಲ್ಲ, ಕೆರೆಕಟ್ಟೆಗಳಲ್ಲಿ ನೀರಿಲ್ಲ…” ಎನ್ನುವ ಸಾಲುಗಳು ಹಳ್ಳಿಗಳ ಇಂದಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಡುತ್ತವೆ. ಹನಿ ಮಳೆಯೂ ಇಲ್ಲದೆ ಹಸಿರೆಲ್ಲ ಒಣಗಿ ಹೋಗಿದ್ದು, ಮೂಕಪ್ರಾಣಿಗಳಿಗೆ ತಿನ್ನಲು ಹುಲ್ಲು ಸಿಗುತ್ತಿಲ್ಲ. ಹಳ್ಳಿಗಳ ಜೀವಾಳವಾಗಿರುವ ಕೆರೆ, ಕಟ್ಟೆಗಳು, ಬಾವಿಗಳು ತಳ ಹಿಡಿದಿದ್ದು, ಕುಡಿಯುವ ನೀರಿಗೂ ಜಾನುವಾರುಗಳು ತತ್ತರಿಸುತ್ತಿವೆ. ರಮೇಶ್ ಹಂಚಿಕೊAಡಿರುವ ವಿಡಿಯೋದಲ್ಲಿ ತಲೆಯ ಮೇಲೆ ಒಣಗಿದ ಹುಲ್ಲಿನ ಮೂಟೆ ಹೊತ್ತು ಸಾಗುವ ರೈತ ಮಹಿಳೆಯ ಚಿತ್ರಣ, ಹಳ್ಳಿಗಳಲ್ಲಿ ಮೇವಿಗಾಗಿ ಪಡುತ್ತಿರುವ ಕಷ್ಟವನ್ನು ಸಾಬೀತುಪಡಿಸುತ್ತದೆ.
ಸ್ತಬ್ಧಗೊಂಡ ಕೃಷಿ ಚಟುವಟಿಕೆ: ರಮೇಶ್ ವಿಡಿಯೋದಲ್ಲಿ ಕಾಣಿಸುವಂತೆ ಇಡೀ ಭೂಮಿ ಒಣಗಿ ಬಂಜರಾಗಿದೆ. ಬಿತ್ತನೆಗೆ ಸಿದ್ಧವಾಗಬೇಕಿದ್ದ ಭೂಮಿ ಮಳೆಯಿಲ್ಲದೆ ಧೂಳೆಬ್ಬಿಸುತ್ತಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೈಯಲ್ಲಿ ನೇಗಿಲು ಹಿಡಿಯಬೇಕಾದ ರೈತರು, ಮುಗಿಲತ್ತ ಮುಖ ಮಾಡಿ ನಿಟ್ಟುಸಿರು ಬಿಡುತ್ತಿದ್ದಾರೆ. “ನೀ ಹಿಂಗೆ ಮಾಡಿದರೆ ರೈತರ ಗತಿಯೋ ಏನಪ್ಪಾ… ರೈತರ ಸ್ಥಿತಿಯೋ ಹೆಂಗಪ್ಪಾ…” ಎಂಬ ರಮೇಶ್ ಅವರ ಆಕ್ರಂದನ ಕೇವಲ ಒಬ್ಬ ರೈತನದ್ದಲ್ಲ, ಇಡೀ ಕೃಷಿ ಸಮುದಾಯದ ಆತಂಕವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದ ಕಳಕಳಿ: ಯುವ ರೈತ ರಮೇಶ್ ಅವರ ಈ ಹಾಡು ಕೇವಲ ಮನರಂಜನೆಯಲ್ಲ, ಅದು ವ್ಯವಸ್ಥೆಯ ವಿರುದ್ಧ ಮತ್ತು ಪ್ರಕೃತಿಯ ಮುನಿಸಿನ ವಿರುದ್ಧದ ಪ್ರತಿಭಟನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, “ರೈತನ ನೋವನ್ನು ಇಷ್ಟೊಂದು ಅರ್ಥಗರ್ಭಿತವಾಗಿ ಯಾರು ಹೇಳಲು ಸಾಧ್ಯವಿಲ್ಲ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ, ದೊಡ್ಡಬಿದ್ರೆಯ ಈ ಯುವ ರೈತನ ಹಾಡು ತಾಲೂಕಿನಲ್ಲಿ ತಲೆದೂರಿರುವ ಭೀಕರ ಬರ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಸರ್ಕಾರ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಜಾನುವಾರುಗಳಿಗೆ ಮೇವಿನ ಬ್ಯಾಂಕ್ ತೆರೆಯುವುದು ಹಾಗೂ ರೈತರ ನೆರವಿಗೆ ಧಾವಿಸುವುದು ಇಂದಿನ ತುರ್ತು ಅಗತ್ಯವಾಗಿದೆ.


