ಹುಳಿಯಾರು: ಮದ್ಯವೆಂಬ ಹೆಮ್ಮಾರಿಗೆ ತುತ್ತಾಗಿ ಬದುಕು ಕಳೆದುಕೊಳ್ಳುತ್ತಿದ್ದ ನೂರಾರು ಜೀವಗಳಿಗೆ ಹೊಸ ಭರವಸೆ ತುಂಬುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿರುವ ಮದ್ಯವರ್ಜನ ಶಿಬಿರಗಳು ಸಮಾಜದಲ್ಲಿ ಮಹತ್ತರ ಬದಲಾವಣೆ ತರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಹುಳಿಯಾರಿನಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರ.
ಆರಂಭದಲ್ಲಿ ಹೆದರಿ ಓಡಲು ಯತ್ನಿಸುತ್ತಿದ್ದ ಶಿಬಿರಾರ್ಥಿಗಳು, ಕೇವಲ ಐದಾರು ದಿನಗಳಲ್ಲಿ ಶಿಸ್ತು ಮತ್ತು ಸಂಸ್ಕಾರದ ಹಾದಿಗೆ ಮರಳಿರುವುದು ಇಡೀ ಯೋಜನೆಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.
ಆತಂಕದಿ0ದ ಆರಂಭವಾದ ಕಾವಲು: ಹುಳಿಯಾರಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಆರಂಭದ ದಿನಗಳಲ್ಲಿ ಆಯೋಜಕರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಒಂದು ದೊಡ್ಡ ಆತಂಕವಿತ್ತು. ಮದ್ಯದ ವ್ಯಸನದಿಂದ ಹೊರಬರಲಾರದೆ ಶಿಬಿರಾರ್ಥಿಗಳು ಎಲ್ಲಿ ಮಧ್ಯದಲ್ಲೇ ಓಡಿಹೋಗುತ್ತಾರೋ ಎಂಬ ಭಯದಿಂದಾಗಿ ಕಲ್ಯಾಣ ಮಂಟಪದ ಬಾಗಿಲುಗಳನ್ನು ಸಂಪೂರ್ಣವಾಗಿ ಲಾಕ್ ಮಾಡಿ ಶಿಬಿರ ನಡೆಸಲಾಗುತ್ತಿತ್ತು. ಶಿಬಿರಾರ್ಥಿಗಳು ಕೂಡ ಸಣ್ಣದೊಂದು ಸಂದಿ ಸಿಕ್ಕರೂ, ಬಾಗಿಲು ಸ್ವಲ್ಪ ತೆರೆದರೂ ಸಾಕು ಕಾಲ್ಕಿತ್ತಲು ಸನ್ನದ್ಧರಾಗಿ ಕುಳಿತಿರುತ್ತಿದ್ದರು. ಎಷ್ಟೇ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರೂ ಆರಂಭದಲ್ಲಿ ಓರ್ವ ವ್ಯಕ್ತಿ ಶಿಬಿರದಿಂದ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದ. ಇದರಿಂದ ಎಚ್ಚೆತ್ತ ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು ಇಡೀ ಕಲ್ಯಾಣ ಮಂಟಪಕ್ಕೆ ಸರ್ಪಗಾವಲು ಹಾಕಿ ಶಿಬಿರವನ್ನು ಮುನ್ನಡೆಸುತ್ತಿದ್ದರು.
ಮನಸು ಬದಲಿಸಿದ ಐದು ದಿನಗಳ ಸಾಧನೆ: ಆದರೆ, ಕೇವಲ ಐದಾರು ದಿನಗಳ ಸತತ ಕೌನ್ಸಿಲಿಂಗ್, ಪ್ರೀತಿ ಮತ್ತು ಶಿಸ್ತಿನ ವಾತಾವರಣ ಶಿಬಿರಾರ್ಥಿಗಳಲ್ಲಿ ಅಸಾಧ್ಯ ಬದಲಾವಣೆಯನ್ನು ತಂದಿದೆ. ಇಂದು ಬೆಳಗಿನ ಉಪಹಾರದ ವಿತರಣೆಯ ವೇಳೆ ಕಂಡು ಬಂದ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುವಂತಿತ್ತು. ಕಲ್ಯಾಣ ಮಂಟಪದ ಬಾಗಿಲುಗಳನ್ನು ಪೂರ್ತಿಯಾಗಿ ತೆರೆದು ಹೊರಗಡೆ ಮುಕ್ತ ವಾತಾವರಣದಲ್ಲಿ ಉಪಹಾರ ವಿತರಿಸಲಾಗುತ್ತಿತ್ತು. ಆದರೂ ಕೂಡ ಯಾರೊಬ್ಬರೂ ಅಲ್ಲಿಂದ ಓಡಿಹೋಗುವ ಪ್ರಯತ್ನ ಮಾಡಲೇ ಇಲ್ಲ! ಬದಲಾಗಿ, ತಾವಾಗಿಯೇ ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಂತು, ಉಪಹಾರ ಪಡೆದು, ಸಮಾಧಾನದಿಂದ ತಿಂದು ಮುಗಿಸಿದರು. ಅಷ್ಟೇ ಅಲ್ಲದೆ, ಎಂದಿನ0ತೆ ಕಲ್ಯಾಣ ಮಂಟಪದ ಒಳಗೆ ಪ್ರವೇಶಿಸಿ ಇಂದಿನ ಶಿಬಿರದ ಕಾರ್ಯಕ್ರಮಗಳಲ್ಲಿ ಅತ್ಯಂತ ಸಡಗರದಿಂದ ಭಾಗಿಯಾಗಿದ್ದಾರೆ.
ಶ್ರಮಕ್ಕೆ ಸಿಕ್ಕ ನಿಸ್ವಾರ್ಥ ಸಾರ್ಥಕತೆ: ಇದೇ ಅಲ್ಲವೇ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಮದ್ಯವರ್ಜನ ಶಿಬಿರದ ನಿಜವಾದ ಯಶಸ್ಸು? ಕಳೆದ ಐದಾರು ದಿನಗಳಿಂದ ಹಗಲಿರುಳು ಶ್ರಮಿಸುತ್ತಿರುವ ಧರ್ಮಸ್ಥಳ ಯೋಜನೆಯ ಸಿಬ್ಬಂದಿ ವರ್ಗದವರ ಕಠಿಣ ಪರಿಶ್ರಮ, ವ್ಯವಸ್ಥಾಪನಾ ಸಮಿತಿಯವರ ನಿಸ್ವಾರ್ಥ ಸೇವೆ ಹಾಗೂ ಸ್ಥಳೀಯ ಸಾರ್ವಜನಿಕರು ನೀಡಿದ ಉದಾರವಾದ ದೇಣಿಗೆ ಇಂದು ನೂರಾರು ಕುಟುಂಬಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸುವ ಮೂಲಕ ಸಾರ್ಥಕವೆನಿಸಿದೆ. ತಪ್ಪು ದಾರಿಗೆ ತುಳಿದಿದ್ದ ಪಾದಗಳು ಇಂದು ಸನ್ಮಾರ್ಗದತ್ತ ಹೆಜ್ಜೆ ಇಡುತ್ತಿರುವುದಕ್ಕೆ ಹುಳಿಯಾರಿನ ಈ ಶಿಬಿರವೇ ಜೀವಂತ ಸಾಕ್ಷಿ.

(Visited 1 times, 1 visits today)