ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ಲುಪಿವೆ. ಆರಂಭದಲ್ಲಿ ಪೂರ್ವ ಮುಂಗಾರು ಬಾರದೆ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಅಲಸಂದೆ ಬಿತ್ತನೆ ಮಾಡಲಾಗದೆ ರೈತರು ಕೈಚೆಲ್ಲಿದ್ದರು. ಈಗ ಮುಂಗಾರು ಕೂಡ ಕೈಕೊಟ್ಟಿದ್ದು, ಬಿದ್ದ ಅಲ್ಪಸ್ವಲ್ಪ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಪ್ರಮಾಣ ತೀವ್ರ ಕುಸಿತ ಕಂಡಿದ್ದು, ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದೆ.
ಮಳೆ ಪ್ರಮಾಣ: ತಾಲೂಕಿನ ವಾಡಿಕೆ ಮಳೆ ೩೮೨.೩ ಮಿ.ಮೀ. ಆಗಿದ್ದು ಚಿಕ್ಕನಾಯಕನಹಳ್ಳಿ ತಾಲೂಕಿನ ವಾಡಿಕೆ ಮಳೆ ೩೮೨.೩ ಮಿಮೀ ಆಗಿದ್ದು ೨೦೨೪ ನೇ ಸಾಲಿನಲ್ಲಿ ಆಗಸ್ಟ್ ಮಾಹೆಯವರೆವಿಗೆ ೬೯೩.೯ ಮಿ.ಮೀ ಮಳೆಯಾಗಿತ್ತು. ೨೦೨೫ ರಲ್ಲಿ ೫೧೬ ಮಿ.ಮೀ ಮಳೆಯಾಗಿತ್ತು. ಆದರೆ ೨೦೨೬ ರಲ್ಲಿ ಕೇವಲ ೨೫೩.೧೧ ಮಿ.ಮೀ ಮಳೆಯಾಗುವ ಮೂಲಕ ವಾಡಿಕೆಗಿಂತಲೂ ತೀವ್ರ ಕೊರತೆ ಎದ್ದು ಕಾಣುತ್ತಿದೆ.
ಬೀಜ ವಿತರಣೆಯಲ್ಲಿ ಭಾರೀ ಕುಸಿತ: ೨೦೨೪ ರಲ್ಲಿ ೧೪೯೨.೬ ಕ್ವಿಂಟಲ್ ಹಾಗೂ ೨೦೨೫ ರಲ್ಲಿ ೯೪೪.೯೫ ಕ್ವಿಂಟಲ್ ರಾಗಿ ಬಿತ್ತನೆ ಬೀಜ ವಿತರಿಸಲಾಗಿತ್ತು. ಆದರೆ ಪ್ರಸಕ್ತ ೨೦೨೬ ರ ಸಾಲಿನಲ್ಲಿ ಕೇವಲ ೩೧೮.೧೦ ಕ್ವಿಂಟಲ್ ಬಿತ್ತನೆ ಬೀಜ ಮಾತ್ರ ವಿತರಣೆಯಾಗಿದ್ದು, ವಾಡಿಕೆಗಿಂತ ೬೦೦ ರಿಂದ ೯೦೦ ಕ್ವಿಂಟಲ್‌ನಷ್ಟು ಇಳಿಕೆಯಾಗಿದೆ.
ಬಿತ್ತನೆ ವಿಸ್ತೀರ್ಣ ಪಾತಾಳಕ್ಕೆ: ೨೦೨೪ ರಲ್ಲಿ ೩೦,೬೯೨.೦೫ ಹೆಕ್ಟೇರ್ ಹಾಗೂ ೨೦೨೫ ರಲ್ಲಿ ೩೭,೧೪೦.೪೯ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಆದರೆ ಈ ವರ್ಷ ಕೇವಲ ೪,೯೩೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಕಳೆದ ವರ್ಷಗಳಿಗೆ ಹೋಲಿಸಿದರೆ ಸುಮಾರು ೩೦ ಸಾವಿರ ಹೆಕ್ಟೇರ್ ಬಿತ್ತನೆ ಪ್ರಮಾಣ ಕುಸಿದಿದೆ.
ಮುಂದಿದೆ ಕುಡಿಯುವ ನೀರು, ಮೇವಿನ ಅಭಾವ!: ತಾಲೂಕಿನ ಕೃಷಿ ಮತ್ತು ಮಳೆ ಅಂಕಿ-ಅAಶಗಳನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ಈ ಅಂಶಗಳು ತಾಲೂಕನ್ನು ಆವರಿಸುತ್ತಿರುವ ಭೀಕರ ಅಭಾವ ಪರಿಸ್ಥಿತಿಗೆ ಕನ್ನಡಿ ಹಿಡಿದಿವೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವುದು ಖಚಿತವಾಗಿದೆ.
ಅಷ್ಟೇ ಅಲ್ಲದೆ, ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ಎದುರಾಗಲಿದ್ದು, ಕೃಷಿ ಉಪಕಸುಬುಗಳಾದ ಹೈನುಗಾರಿಕೆ ಮತ್ತು ಕುರಿ ಸಾ ಸಾಕಣೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿ, ಅಗತ್ಯ ಪರಿಹಾರ ಮತ್ತು ಮೇವಿನ ಬ್ಯಾಂಕ್‌ಗಳನ್ನು ತೆರೆಯಬೇಕಿದೆ.

(Visited 1 times, 1 visits today)