ತುಮಕೂರು: ಶಿಕ್ಷಣಕ್ಕೆ ಸಾಣಿ ಹಿಡಿಯುವ ಕೆಲಸ ಆಗಬೇಕಾಗಿದೆ. ತರಬೇತಿಗಳು ಅನಿವಾರ್ಯವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದು ಅತ್ಯವಶ್ಯಕ ಎಂದು ಶ್ರೀ ಸಿದ್ದಗಂಗಾ ಪ.ಪೂ. ಕಾಲೇಜುಗಳ ಸಂಯೋಜನಾಧಿಕಾರಿ ಪ್ರೊ. ಜಿ.ಎಸ್. ರೇಣುಕಪ್ಪ ಅಭಿಪ್ರಾಯಪಟ್ಟರು.
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ಮಾರ್ಗದರ್ಶನ ತರಬೇತಿಯನ್ನು ಸರಿಯಾಗಿ ತಿಳಿದುಕೊಂಡಾಗ ವಿಫುಲ ಅವಕಾಶಗಳು ಯುವ ಜನತೆಯ ಕಣ್ಮುಂದೆ ಬರುತ್ತವೆ. ಉದ್ಯೋಗ ಕೇವಲ ಸಂಪಾದನೆಗೆ ಸೀಮಿತವಾಗಬಾರದು. ದೇಶದ ಭವಿಷ್ಯದ ದೃಷ್ಠಿಯಿಂದ ಪ್ರತಿಭಾ ಪಲಾಯನ ಗೈಯದೆ ಸ್ವದೇಶದಲ್ಲಿಯೇ ವೃತ್ತಿ ಕೈಗೊಂಡು ದೇಶವನ್ನು ಮುನ್ನಡೆಸುವ ಸಂಕಲ್ಪ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಯಾದ ರಮೇಶ್ ಉಮ್ರಾಣಿರವರು ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದು, ವಿದ್ಯಾರ್ಥಿನಿಯರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ (ಮೃದು ಕೌಶಲ್ಯ ತರಬೇತುದಾರರು) ರಮೇಶ್ ಬಿ. ಉಮ್ರಾಣಿ ಅವರು, ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಮೌಲ್ಯಗಳ ಮೂಲಕ ಶೈಕ್ಷಣಿಕ ಉತ್ಕöÈಷ್ಠತೆಗೆ ಬಲವಾದ ಅಡಿಪಾಯವನ್ನು ನಿರ್ಮಿಸುವ ವಿಷಯದ ಬಗ್ಗೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಓದಿನಲ್ಲಿ ಯಶಸ್ಸು ಪಡೆಯಲು ಏಕಾಗ್ರತೆ ಮತ್ತು ಆದ್ಯತೆ ನೀಡುವುದು ಅತ್ಯಂತ ಮುಖ್ಯವಾದ ಕೌಶಲ್ಯಗಳು ಎಂಬ ವಿಷಯದ ಬಗ್ಗೆ ವೃತ್ತಿ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳ ಜತೆಗೆ ಪರಿಶ್ರಮದ ಅಧ್ಯಯನಕ್ಕೆ ಒತ್ತು ನೀಡಬೇಕು. ಇದರೊಂದಿಗೆ ತಮ್ಮ ನೆನಪಿನ ಶಕ್ತಿ ವೃದ್ಧಿಸಿಕೊಂಡು ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಸಿದ್ದಗಂಗಾ ಪ.ಪೂ. ಕಾಲೇಜಿನನ ಕಾರ್ಯಕ್ರಮ ಅಭಿವೃದ್ಧಿ ಸಂಯೋಜನಾಧಿಕಾರಿ ರತ್ನಕಲಾ ಹೆಚ್.ಎಸ್., ಸಿದ್ದಗಂಗಾ ಮಹಿಳಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಪಿ. ಚಂದ್ರಶೇಖರ್, ಉಪನ್ಯಾಸಕರು, ವಿದ್ಯಾರ್ಥಿನಿಯರು ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರುಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಬಿ. ಉಮ್ರಾಣಿ ರವರನ್ನು ಸನ್ಮಾನಿಸಲಾಯಿತು.
(Visited 1 times, 1 visits today)



