ಚಿಕ್ಕನಾಯಕನಹಳ್ಳಿ:

      ಲಾಕ್ಡೌನ್ ಹಿನ್ನಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ ದೊರೆಯುತ್ತಿದೆ ಆದರೆ ಈ ಕೆಲಸಗಳಿಗೆ ಹೊರಗಿನ ಕೂಲಿಕಾರ್ಮಿಕರು ಬರುತ್ತಿದ್ದು ಸುರಕ್ಷತೆಯ ಕೆಲ ನಿಯಮಗಳು ಪಾಲನೆಯಾಗದಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.

      ಕಾಮಗಾರಿಗೆ ಗ್ರೀನ್ ಸಿಗ್ನಲ್:

      ಕೊರೊನಾ ಸೋಂಕಿನ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಇದೇ ಮೊದಲಬಾರಿಗೆ ಲಾಕ್‍ಡೌನ್ ಆದ ಪರಿಣಾಮ ದೇಶದಲ್ಲಿ ಕೊರೊನಾ ಹರಡುವಿಕೆಗೆ ಕಡಿವಾಣ ಬಿದ್ದಿದ್ದು ಈಗ ಲಾಕ್‍ಡೌನ್ ಸಡಿಲಿಕೆಯಾಗಿದೆ. ಕಾರ್ಮಿಕರ ನೆರವಿನಿಂದ ನಡೆಯುವ ಕಾಮಗಾರಿಗಳನ್ನು ಆರಂಭಿಸಲು À ಸರ್ಕಾರ ಕೆಲವು ಶರತ್ತುಬದ್ದದನ್ವಯ ನಡೆಸಲು ಸೂಚಿಸಿದೆ.
ಅದರಂತೆ ತಾಲ್ಲೂಕಿನಲ್ಲಿ ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದೆ ಪಟ್ಟಣದ ಮುಲಕ ಹಾದುಹೋಗುವು ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಆರಂಭಗೊಂಡಿದ್ದು ಎತ್ತಿನಹೊಳೆ, ಹೇಮಾವತಿಯ ನಾಲಾ ಕಾಮಗಾರಿಗಳು ಇನ್ನೇನು ಆರಂಭಗೊಳ್ಳಲಿದೆ.

ಸುರಕ್ಷತಾ ಕ್ರಮಕ್ಕೆ ತಿಲಾಂಜಲಿ:

       ಈ ನಡುವೆ ಹೆದ್ದಾರಿ ಕಾಮಗಾರಿ ಆರಂಭಕ್ಕಾಗಿ ಹೊರ ಪ್ರದೇಶದಿಂದ ಸುಮಾರು 34 ಮಂದಿ ಆಗಮಿಸಿದ್ದಾರೆ. ಇಂತಹ ಕಾರ್ಮಿಕರು ಉಳಿದುಕೊಳ್ಳಲು ಗ್ಯಾರೆಹಳ್ಳಿ, ಜೆ.ಸಿ.ಪುರ ಹಾಗೂ ಆಲದಕಟ್ಟೆಯಲ್ಲಿ ನಿರ್ಮಿಸಲಾದ ಕ್ಯಾಂಪ್‍ಗಳಲ್ಲಿ ಇರುತ್ತಾರೆ. ಸದರಿ 34 ರಲ್ಲಿ 31 ಮಂದಿ ಕಾರ್ಮಿಕರು ರಸ್ತೆ ಕಾಮಗಾರಿಯಲ್ಲಿ ಭಾಗಿಗಳಾಗಿ ಜೆ.ಸಿ.ಪುರದಿಂದ ಹಾಲುಗೊಣದವರೆಗೆ ರಸ್ತೆ ಬದುವಿನ ಮರಗಳನ್ನು ಕಟಾವ್ ಮಾಡುತ್ತಿದ್ದಾರೆ. ಆದರೆ ಹೊರಗಿನಿಂದ ಅಂದರೆ ಮೈಸೂರು ಹಾಗೂ ಮಂಡ್ಯ ಭಾಗದಿಂದ ಬಂದಿರುವ ಇವರನ್ನು ತಪಾಸಣೆಗೊಳಪಡಿಸಲಾದರೂ ಇವರ ಕಫದ ವರದಿ ಬಂದಿಲ್ಲ, ವರದಿ ಬರುವ ಮುನ್ನವೇ ಕಾಮಗಾರಿಗಿಳಿದಿದ್ದಾರೆ, ಹಾಗೂ ಇವರು ಉಳಿದುಕೊಂಡಿರುವ ಆಲದಕಟ್ಟೆ ಕ್ಯಾಂಪ್‍ನಲಿನಲ್ಲಿರುವ ಕೊಠಡಿಗಳಲ್ಲಿ ಇಬ್ಬರು ಮೂವರು ಮಾತ್ರ ಇರಲ್ಲಿಕ್ಕೆ ಸಾಧ್ಯ ಆದರೆ ಅಲ್ಲಿ ಹತ್ತಾರು ಮಂದಿ ಒಟ್ಟಾಗಿದ್ದಾರೆ. ಯಾವುದೇ ಸಾಮಾಜಿಕ ಅಂತರ ಹಾಗೂ ಮಾಸ್ಕ್‍ಗಳನ್ನು ಬಳಸದೆ ಇರುವುದು ಹೆಚ್ಚು ಆತಂಕಕ್ಕೆಡೆಮಾಡಿದೆ.

      ಇನೂ ಹೆಚ್ಚಿನ ಕಾರ್ಮಿಕರು ಬರುವ ಸಂಭವ: ಎತ್ತಿನಹೊಳೆ ಹಾಗೂ ಹೇಮಾವತಿ ನಾಲಾ ಕಾಮಗಾರಿಗೆ ಇನ್ನೂ ಸುಮಾರು 150ರಿಂದ 200 ಮಂದಿ ಕೆಲಸಗಾರರು ಬರುವ ನಿರೀಕ್ಷಯಿದೆ. ಸೋಂಕು ರಹಿತ ಪ್ರದೇಶದಿಂದ ಕರೆಸಲಾಗುವುದೆಂದು ಕಾಮಗಾರಿ ಮುಖ್ಯಸ್ಥರಿಂದ ತಿಳಿದುಬಂದಿದೆ. ಆದರೆ ಹೆಚ್ಚು ಮಂದಿ ಕೆಲಸಗಾರರು ಬರುವುದರಿಂದ ಇನ್ನು ಹೆಚ್ಚಿನ ಸುರಕ್ಷತಾಕ್ರಮ ನಡೆಸುವುದು ಹೆಚ್ಚು ಸೂಕ್ತವೆನಿಸಿದೆ.

ತುರ್ತಾಗಿ ಅನುದಾನ ಖರ್ಚಾಕುವ ಧಾವಂತ:

       ಯೊಜನೆಗಳಲ್ಲಿರುವ ಅನುದಾನಗಳು ಸದರಿ ಮಾರ್ಚ್ ಅಂತ್ಯದಲ್ಲಿಯೇ ಖರ್ಚಾಗಿರಿಬೇಕಿತ್ತು, ಆದರೆ ಕೊರೊನಾ ಬಂದ ಕಾರಣ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿದ್ದು ತರಾತುರಿಯಲ್ಲಿ ಈ ಕಾಮಗಾರಿಗಳ ಕೆಲಸ ಮುಗಿಸಿ ಅನುದಾನದ ಲೆಕ್ಕಾಚಾರವನ್ನು ಚುಕ್ತಾಮಾಡಿಕೊಳ್ಳುವ ಧಾವಂತದಲ್ಲಿ ಕಾಂಗಾರಿಗಳನ್ನು ಅವಸರವಾಗಿ ನಡೆಸಲಾಗುತ್ತಿದೆ ಎಂಬುದ ಕೆಲವ ರ ಅಭಿಪ್ರಾಯ.

          ಒಟ್ಟಿನಲ್ಲಿ ತಾಲ್ಲೂಕಿನಲ್ಲಿ ಅಭಿವೃದ್ದಿ ಕಾಮಗಾರಿಗಳೂಸಹ ನಡೆಯಬೇಕು, ಹಾಗೂ ಸುರಕ್ಷಿತವಲಯವಾಗಿರುವ ತಾಲ್ಲೂಕಿನಲ್ಲಿ ಹೊರಗಿನಿಂದ ಬರುವ ಕೆಲಸಗಾರರಿಂದ ಸೋಂಕು ಬರದಂತೆ ಸಂರಕ್ಷಣಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜನರಿಗಿರುವ ಭಯವನ್ನು ಹೋಗಲಾಡಿಸುವ ಕ್ರಮವೂ ಜರುಗಬೇಕಿದೆ.
ಎಲ್ಲರಿಗೂ ನೆಗಟೀವ್: ಕಾಮಗಾರಿಗೆ ಹೊರಗಿನಿಂದ ಆಗಮಿಸಿರುವ ಕಾರ್ಮಿಕರ ಆರೋಗ್ಯದ ವರದಿಯಂತೆ ಈಗ ನೆಗಟೀವ್ ಬಂದಿದೆ ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದ್ದರೂ , ಪರೀಕ್ಷಾ ವರದಿ ಬರುವುದಕ್ಕೂಮುನ್ನವೇ ಕಾರ್ಮಿಕರು ಕೆಲಸ ಮಾಡಿದ್ದಾರೆ ಹಾಗೂ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಹಾಗೂ ಇನ್ನಿತರ ಸುರಕ್ಷಾತಾ ಕ್ರಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಅವರಲ್ಲಿ ಉತ್ತರವಿರಲಿಲ್ಲ.

       ಕಾನೂನು ಸಚಿವರ ಕ್ಷೇತ್ರದಲ್ಲಿ ಪ್ರತಿ ಕೆಲಸಗಳೂ ಅವರ ನಿರ್ದೇಶನದಂತೆ ಎಲ್ಲವೂ ನಡೆದಿರುವುದು ಕನ್ನಡಿಯಷ್ಟೆ ಸತ್ಯವಾಗಿದೆ. ಹೊರಗಿನ ವಿದ್ಯಮಾನದಲ್ಲಿ ಪ್ರತಿಯೊಂದಕ್ಕೂ ಕಾನೂನಿನ ಹಗ್ಗವನ್ನು ಬಿಗಿಗೊಳಿಸಿದರೂ. ಇಲ್ಲಿ ನಡೆಯುವ ವಿದ್ಯಮಾನಕ್ಕೆ ಕಾನೂನು ಸಡಿಲಗೊಂಡು ಎಲ್ಲವೂ ಅವರ ಮೂಗಿನ ನೇರಕ್ಕೆ ನಡೆಯುತ್ತಿದ್ದು ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೆಂದು ತಿಳಿದಂತಿದೆ.

 

(Visited 21 times, 1 visits today)