ಚಿಕ್ಕನಾಯಕನಹಳ್ಳಿ:
ಬಗರ್ಹುಕುಂ ಸಾಗುವಳಿಮಾಡಿಕೊಂಡು ಬಂದಿದ್ದ ಬಡರೈತರ ಜಮೀನಿಗೆ ನನ್ನದೆಂದು ಬಲಿತ ರೈತನೊಬ್ಬ ಜೆಸಿಬಿ ಬಳಸಿ ಮೂರುಮಂದಿ ರೈತರು ಬೆಳೆಸಿದ್ದ ಬೆಳೆಯನ್ನು ನಾಶಪಡಿಸಿದ ಘಟನೆ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿಬಳಿ ನಡೆದಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿ ಸಾಸಲು ನಡುವೆಯ ಜಮೀನಿನಲ್ಲಿ ಕಳೆದ 35-40ವರ್ಷದಿಂದ ಬಗರ್ಹುಕುಂ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರಾದ ಕಲ್ಲಪ್ಪನವರ ಮಗ ಪುಟ್ಟಯ್ಯ, ಕೃಷ್ಣಪ್ಪ ಹಾಗೂ ಭಜಂತ್ರಿ ವರ್ಗಕ್ಕೆ ಸೇರಿದ ಶಶಿಕಲಾ ಎಂಬ ಮೂವರ ಜಮೀನನ್ನು ಕಬಳಿಸುವ ಉದ್ದೇಶದಂತೆ ಎ.ಎಂ.ಲಿಂಗರಾಜು ಎಂಬುವನು ಜೆಸಿಬಿ ಮೂಲಕ ಬೆಳೆದುನಿಂತ ಹುರುಳಿ, ರಾಗಿ ಬೆಳೆಯನ್ನು ನಾಶಮಾಡಿದ್ದಾನೆ. ಇದರ ಜೊತೆಗೆ ತನ್ನದಲ್ಲದ ಬೇರೆ ಸರ್ವೆ ನಂಬರ್ಗಳಿಗೆ ಸೇರಿದ ಬದುಗಳನ್ನು ಸಹ ದೌರ್ಜನ್ಯದಿಂದ ಜೆಸಿಬಿ ಬಳಸಿ ಒತ್ತುವರಿ ಮಾಡಿದ್ದಾನೆ. ನಾನೂ ಸಹ ಖರಾಬು ಜಮೀನಿನಲ್ಲಿ ಸಾಗುವಳಿಮಾಡಿ ಐದುಎಕರೆಗೆ ಟಿಟಿ ಕಟ್ಟಿದ್ದೇನೆ ಎಂದು ಈ ಹಿಂದೆ ಸರ್ವೇಮಾಡಿ ಹಾಕಲಾಗಿದ ಹಳೆಯ ಬಾಂದ್ಕಲ್ಲುಗಳನ್ನು ಕಿತ್ತು ಅವನಿಗೆ ಬೇಕಾದಕಡೆ ನೆಟ್ಟಿದ್ದಾನೆ. ಎಂದು ಗಂಡ ಮಕ್ಕಳಿಲ್ಲದ ಒಬ್ಬಂಟಿ ಮಹಿಳೆಯ ಶಶಿಕಲಾಳ ಅಳಲಾಗಿದೆ. ಬೆಳೆ ನಾಶಮಾಡಿದ ಲಿಂಗರಾಜು ಈಕೆಗೆ ಆಗಾಗ್ಗೆ ಕೊಲೆಬೆದರಿಕೆ ಹಾಕುತ್ತಾ ಭಯಮೂಡಿಸಿದ್ದಾನೆ. ಇದೇ ವಿಚಾರವಾಗಿ ಈತನಮೇಲೆ ಈ ಹಿಂದೆ ಈಕೆ ಠಾಣೆಯಲ್ಲಿ ದೂರು ನೀಡಿದಾಗ, ಈತನು ಪೊಲೀಸ್ ಸಮ್ಮುಖದಲ್ಲಿ ಕ್ಷಮಾಪಣೆಯ ಮುಚ್ಚಳಿಕೆ ಬರೆದುಕೊಟ್ಟಿದ್ದನೆನ್ನಲಾಗಿದೆ. ಈತನಿU ಕೇವಲ 20 ಗುಂಟೆ ಬಗರಹುಕುಂ ಜಮೀನು ಮಂಜೂರಾಗಿದ್ದು ಇದೇ ನೆಪ ಇಟ್ಟುಕೊಂಡು ಹೆಚ್ಚು ಜಮೀನು ಕಬಳಿಸುವ ಉದ್ದೇಶದಿಂದ ಏಕಾಏಕಿ ಜೆಸಿಬಿಯಿಂದ ಬೆಳೆಗಳನ್ನು ಹಾನಿಮಾಡಿದ್ದಾನೆ. ಈ ಕೃತ್ಯದ ಬಗ್ಗೆ ಪ್ರಶ್ನಿಸಿದರೆ ನನಗೆ ರಾಜಕೀಯ ಮುಖಂಡರ ಬೆಂಬಲ ಹಾಗೂ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಬಲವಿದೆ ಎಂದು ಹೆದರಿಸುತ್ತಿದ್ದಾನೆ. ನಾವು ಕಳೆದ 35-40 ವರ್ಷದಿಂದ ಈ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು ಅಂದಿನಿಂದಲೂ ಟಿಟಿಯನ್ನುಸಹ ಕಟ್ಟಿದ್ದೇವೆ ಎಂದು ಶಶಿಕಲಾ, ಕೃಷ್ಣಪ್ಪ ಹಾಗೂ ಪುಟ್ಟಯ್ಯ ತನ್ನ ಅಳಲನ್ನು ತೋಡಿಕೊಳ್ಳುತ್ತಾರೆ.
ತಾಲ್ಲೂಕಿನ ಇತರೆಡೆಯೂಸಹ ಇಂತಹ ಘಟನೆಗಳು ನಡೆದಿದೆ. ತಾಲ್ಲೂಕಿನ ಕಂದಿಕೆರೆ ಹೋಬಳಿ ಆಶ್ರೀಯಾಳ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಜಮೀನನ್ನೂಸಹ ಬಿಡದೆ ಅಕ್ರಮವಾಗಿ ಎಕರೆಗಟ್ಟಲೆ ಸಾಗುವಳಿ ಮಾಡುವ ಭಂಡತನಕ್ಕೆ ಭಲಾಡ್ಯರು ಇಳಿದಿದ್ದಾರೆ. ಬಡವರಿಗೆ, ದುರ್ಭಲರಿಗೆ ಯಾವುದೇ ಕಾನೂನು ರಕ್ಷಣೆ ದೊರೆಯುತ್ತಿಲ್ಲ. ತಾಲ್ಲೂಕು ಆಡಳಿತ ಹಾಗು ಸಚಿವರ ಅಧ್ಯಕ್ಷತೆಯಲ್ಲಿರುವ ಬಗರ್ಹುಕುಂ ಸಮಿತಿ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಡ ರೈತರಿಗೆ ನ್ಯಾಯ ಒದಗಿಸಬೇಕಿದೆ.