ಹುಳಿಯಾರು:

     ಮಾನ್ಯ ಸುಪ್ರೀಂ ಕೋರ್ಟ್ ತೀರ್ಪಿನಂತೆ ಮತ್ತು ಸಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮಾದಿಗರಿಗೆ ನೀಡಿದ ಭರವಸೆಯಂತೆ ಕೂಡಲೇ ಕರ್ನಾಟಕದಲ್ಲಿ ಸದಾಶಿವ ವರದಿ ಜಾರಿ ಮಾಡಿ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಮಾದಿಗ ಚೈತನ್ಯ ರಥ ಯಾತ್ರೆಯು ಹುಳಿಯಾರಿಗೆ ಆಗಮಿಸಿತು.

      ಹುಳಿಯಾರಿನ ಎಸ್‍ಎಲ್‍ಆರ್ ಬಂಕ್ ಬಳಿ ರಥ ಯಾತ್ರೆಗೆ ಸ್ವಾಗತ ಕೋರಿದ ಮಾದಿಗ ಸಮುದಾಯದವರು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ರಾಮಗೋಪಾಲ್ ಸರ್ಕಲ್, ವಿನಾಯಕ ನಗರ, ಪೊಲೀಸ್ ಸ್ಟೇಷನ್ ಸರ್ಕಲ್‍ನಲ್ಲಿ ಸಭೆ ನಡೆಸಿ ಬೆಂಗಳೂರಿನಲ್ಲಿ ಫೆಬ್ರವರಿ 8 ರಂದು ಮಾದಿಗ ಮತ್ತು ಸಂಬಂಧಿತ 47 ಜಾತಿಗಳ 10 ಲಕ್ಷ ಜನರ ಬೃಹತ್ ವಿರಾಟ್ ಶಕ್ತಿ ಪ್ರದರ್ಶನ ಮತ್ತು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಲ್ಲರೂ ಭಾಗವಹಿಸುವಂತೆ ಕರೆ ನೀಡಲಾಯಿತು.

ಅಂಬೇಡ್ಕರ್ ಅವರ ಸಂವಿಧಾನದ ಮುನ್ನುಡಿಯಲ್ಲಿ ಎಲ್ಲಾ ಜಾತಿ, ಜನಾಂಗ ಧರ್ಮದವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ನೀಡಬೇಕೆಂದು ಮತ್ತು ಅವಕಾಶಗಳಲ್ಲಿ ಸ್ಥಾನಮಾನದಲ್ಲಿ ಸಮಾನತೆ ನೀಡಬೇಕೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂವಿಧಾನದ 14 ಮತ್ತು 15ನೇ ವಿಧಿಯಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಭಾಷೆ, ಪ್ರಾಂತ್ಯ, ಜಾತಿ, ಧರ್ಮ, ಅಂಗದ ಆಧಾರಲ್ಲಿ ಯಾರಿಗೂ ತಾರತಮ್ಯ, ಅನ್ಯಾಯ ಆಗಬಾರದೆಂದು ಹೇಳಿದ್ದಾರೆ. ಆದರೆ, ಕರ್ನಾಟಕದ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ಅನುಸಾರವಾಗಿ ಶಿಕ್ಷಣ, ಸರ್ಕಾರಿ ಉದ್ಯೋಗ, ಭೂಮಿ, ಸಂಪತ್ತಿನಲ್ಲಿ ಪಾಲು ಸಿಗದೆ ಅನ್ಯಾಯಕ್ಕೆ ಒಳಗಾಗಿದೆ ಎಂದು ಆರೋಪಿಸಲಾಯಿತು.

      ಕಳೆದ ವರ್ಷದಲ್ಲಿ ಬಂದ ಸುಪ್ರೀಂ ಕೋರ್ಟ್‍ನ ತೀರ್ಪು ಎಸ್ಸಿ/ಎಸ್ಟಿ ಮೀಸಲಾತಿಗೆ ಕುರಿತಂತೆ ರಾಜ್ಯಗಳೇ ತೀರ್ಮಾನ ತೆಗೆದುಕೊಳ್ಳಬಹುದು ಮತ್ತು ಒಳಮೀಸಲಾತಿಯನ್ನು ಮಾಡಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದೆ. ಅದೇ ರೀತಿ ತಮಿಳುನಾಡು ಸರ್ಕಾರ ಈ ಹಿಂದೆಯೇ ಒಳಮೀಸಲಾತಿಯನ್ನು ಜಾರಿಗೊಳಿಸಿರುವ ಉದಾಹರಣೆ ನಮ್ಮ ಮುಂದಿದೆ. ಕೇಂದ್ರ ಸರ್ಕಾರವೇ ನೇಮಿಸಿದ್ದ ಉಷಾ ಮೆಹ್ನ ಆಯೋಗ ಕೂಡಾ ಒಳಮೀಸಲಾತಿಯನ್ನು ಕೊಡಬಹುದೆಂದು ಶಿಫಾರಸ್ಸು ನೀಡಿದೆ. ಹಾಗಾಗಿ ರಾಜ್ಯ ಸರ್ಕಾರವೂ ಒಳಮೀಸಲಾತಿ ನೀಡಿ ಸಂವಿಧಾನದ ಆಶಯದಂತೆ ಮಾದಿಗ ಸಮುದಾಯಕ್ಕೂ ಪಾಲು ಸಿಗುವಂತೆ ಮಾಡುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

      ಲಕ್ಷ್ಮೀನಾರಾಯಣ ಹೆಣ್ಣೂರು, ಅಂಬಣ್ಣ ಅರೊಳ್ಳಿಕರ್, ಕುಮಾರ್, ಹರಿರಾಮ್ ಬೆಂಗಳೂರು ನಾಗರಾಜ್, ವಿಜಯಕುಮಾರ್, ರಾಮಚಂದ್ರ ಕಾಂಬ್ಳೆ, ರಾಜಣ್ಣ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(Visited 13 times, 1 visits today)