ಹುಳಿಯಾರು:

      ಹುಳಿಯಾರು ಪಂಚಾಯ್ತಿ ಚುನಾವಣೆಯ ಇತಿಹಾಸದಲ್ಲಿ ಇಂತಹ ಭ್ರಷ್ಟ ಚುನಾವಣೆ ಹಿಂದೆಂದೂ ನಡೆದಿರಲಿಲ್ಲ. ಮತದಾರರೇ ಭಷ್ಟ್ರರಾಗಿದ್ದಾರೋ ಅಥ ವಾ ಅಭ್ಯರ್ಥಿಗಳೇ ಬಲವಂತದಿಂದ ತಲುಪಿಸುತ್ತಿದ್ದಾರೋ ತಿಳಿಯದಾಗಿದೆ. ಒಟ್ಟಿನಲ್ಲಿ ಇಲ್ಲಿನ ಮನೆಮನೆಗಳಿಗೆ ಗೃಹ ಉಪಯೋಗಿ ವಸ್ತುಗಳು ಬಂದು ಸೇರಿವೆ.

      ಬಹಳ ವರ್ಷಗಳ ಹಿಂದೇನಲ್ಲ ಹತ್ತನ್ನೆರಡು ವರ್ಷಗಳ ಹಿಂದೆಷ್ಟೆ ಮತದಾನಕ್ಕೆ ಬಂದಾಗ ಟೀ, ತಿಂಡಿ ಕೊಡಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಮನೆಮನೆಗೆ ಕೋಳಿ, ಮದ್ಯ ಸರಬರಾಜು ಮಾಡುತ್ತಿದ್ದರು. ಆದರ ಈಗ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರೂ ತಮ್ಮ ಶಕ್ತಾನುಸಾರ ತಮ್ಮ ವಾರ್ಡ್‍ಗಳ ಮನೆಮನೆಗೆ ಚುನಾವಣಾ ಗಿಫ್ಟ್ ನೀಡುತ್ತಿದ್ದಾರೆ.

     ಸೀರೆ, ಕುಕ್ಕರ್, ಡ್ರಸ್ ಮೆಟಿರಿಯಲ್, ಬೆಳ್ಳಿ ಬಟ್ಟಲು, ಮಿಕ್ಸಿ, ಫ್ಯಾನ್, ಎಲ್‍ಇಡಿ ಚಾರ್ಜ್ ಲೈಟ್ ಹೀಗೆ ಒಂದೊಂದು ವಾರ್ಡ್‍ಗಳಲ್ಲಿ ಒಂದೊಂದು ಬಗೆಯ ಗೃಹ ಉಪಯೋಗಿ ವಸ್ತುಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಕೆಲ ವಾರ್ಡ್‍ಗಳಲ್ಲಿ ಯುಗಾದಿ ಕಿಟ್ ಎಂದು ಅಕ್ಕಿ, ಬೇಳೆ, ಬೆಲ್ಲ, ಮೈದಾ, ಸಕ್ಕರೆ ಸೇರಿದಂತೆ ದಿನಸಿ ಪದಾರ್ಥಗಳನ್ನೂ ಹಂಚುತ್ತಿದ್ದಾರೆ.

      ಇನ್ನು ಕೋಳಿ ಮತ್ತು ಮದ್ಯ ಪ್ರಿಯರಿಗೆ ಕಳೆದೊಂದು ವಾರದಿಂದ ಶುಕ್ರದೆಸೆ ತಿರುಗಿದೆ. ಪ್ರಚಾರದ ಸಂದರ್ಭದಲ್ಲೇ ಕೋಳಿ ಟೋಕನ್ ಕೊಟ್ಟು ಕಳುಹಿಸುತ್ತಿದ್ದು ಕೋಳಿ ವ್ಯಾಪಾರಿಗಳಿಗೂ ಭರ್ಜರಿ ವ್ಯಾಪಾರ ಆಗುತ್ತಿದೆ. ಮೊದಲೆಲ್ಲಾ ಚುನಾವಣಾ ಹಿಂದಿನ ದಿನ ಚೀಪರ್ ಡ್ರಿಂಗ್ಸ್ ಕೊಡುತ್ತಿದ್ದರು. ಈಗ ಮದ್ಯ ಪ್ರಿಯರು ಕೇಳಿದ ಬ್ರಾಂಡ್ ಎಣ್ಣೆ ಕೊಡುತ್ತಿದ್ದು ವಾರದಿಂದಲೂ ಯಾರೊಬ್ಬರೂ ದುಡ್ಡು ಕೊಟ್ಟು ಮದ್ಯ ಕುಡಿಯದಂತೆ ಕುಡುಕರನ್ನು ನೋಡಿಕೊಳ್ಳಲಾಗಿದೆ.

       ದಿನ ಭತ್ಯೆ ನೀಡಿ ಅಭ್ಯರ್ಥಿಗಳ ಜೊತೆ ಚುನಾವಣಾ ಪ್ರಚಾರಕ್ಕೆ ಜನರನ್ನು ಕರೆತರಲಾಗುತ್ತಿದೆ. ಕೆಲವರಂತೂ 3 ಪಕ್ಷದ ಪ್ರಚಾರಕ್ಕೂ ಹೋಗಿ ನಿತ್ಯ ಸಾವಿರಾರು ರೂ. ಸಂಪಾದಿಸುತ್ತಿದ್ದಾರೆ. ಪ್ರೀತಿಪಾತ್ರರು, ವಿಐಪಿಗಳು, ಯುವಜನರಿಗೆ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿದ್ದು ಡಾಬಾ, ನಾನ್ ವೆಜ್ ಹೋಟೆಲ್‍ಗಳು ವಾರದಿಂದ ಭರ್ತಿಯಾಗುತ್ತಿವೆ. ಅಲ್ಲದೆ ಕೊನೆ ದಿನ ಓಟಿಗೆ ಐನೂರರಿಂದ ಎರಡು ಸಾವಿರದವರೆವಿಗೆ ನಿಗಧಿಯಾಗಿ ಹಂಚಿಕೆಯಾಯಿತು.

ಪಕ್ಷದ ಅಭ್ಯರ್ಥಿಗಳು ಮಾತ್ರ ಇಷ್ಟೆಲ್ಲ ಹಂಚುತ್ತಿದ್ದಾರೆಂದು ತಿಳಿಯಬೇಡಿ, ಪಕ್ಷೇತರ ಅಭ್ಯರ್ಥಿಗಳು ಸಹ ಹಂಚಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಈ ಬಗ್ಗೆ ಕೇಳಿದರೆ ಪ್ರತಿಸ್ಪರ್ಧಿ ಕೊಟ್ಟಾಗ ನಾವು ಕೊಡದಿದ್ದರೆ ತಪ್ಪಾಗುತ್ತದೆ. 4 ಮತಗಳಿರುವ ಒಂದು ಮನೆಯಲ್ಲಿ ನಾಲ್ವರಿಗೂ ಒಂದೊಂದು ಓಟು ಬೀಳಲಿ ಬಿಡಿ. ಇದರ ಜೊತೆ ಸ್ವಜಾತಿ ಮತ್ತು ಬಂದು, ಬಳಗದ ಓಟಾಕಿಸಿಕೊಂಡು ಗೆಲ್ಲುತ್ತೇವೆ ಎನ್ನು ತ್ತಿದ್ದಾರೆ. ಒಟ್ಟಾರೆ ಮತದಾರರನ್ನು ಸೆಳೆಯಲು ಅಭ್ಯರ್ಥಿ ಗಳು ಕಸರತ್ತು ಮಾಡುತ್ತಿದ್ದಾರೆ. ಅದರಲ್ಲೂ ಇನ್ಯಾರೋ ಬಲವಂತಕ್ಕೆ ಸ್ಪರ್ಧಿಸಿದ ಆರ್ಥಿಕ ದುರ್ಬಲರೂ ಸಾಲ ಮಾಡಿ ಹಣ, ಹೆಂಡ, ಸೀರೆ ಹಂಚುತ್ತಿದ್ದಾರೆ. ಇಷ್ಟು ಹಂಚಿ ಸೋಲುವ ಅಭ್ಯರ್ಥಿ ಸ್ಥಿತಿ ಯಾರನ್ನಾದರೂ ಹಾಳು ಮಾಡಬೇಕೆಂದಿದ್ದರೆ ಚುನಾವಣೆಗೆ ನಿಲ್ಲಿಸು ಎನ್ನುವ ಮಾತಿನಂತ್ತಾಗುತ್ತದೆ. ಗೆದ್ದವರು ನೀವೇನು ಪುಗ್ಸಟ್ಟೆ ಓಟಾಕಿಲ್ಲ ಎಂದು ಹೇಳುವುದರಲ್ಲಿ ಸಂಶಯವಿಲ್ಲ. ಅಭಿವೃದ್ಧಿಯ ಗತಿ ಏನು ಎನ್ನುವಂತ್ತಾಗಿದೆ.

(Visited 19 times, 1 visits today)