ಕೊರಟಗೆರೆ :

      ಪ್ರೀತಿಸಿದ ಯುವತಿಯ ಜೊತೆ ಯುವಕ ತನ್ನ ಸ್ವಗ್ರಾಮಕ್ಕೆ ಬಂದು ಹಿಂದಿರುಗುವ ವೇಳೆ ಪಾವಗಡ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾರನ್ನು ಅಡ್ಡಗಟ್ಟಿ ಕಾರಿನಿಂದ ಯುವಕನನ್ನು ಹೊರಗೆಳೆದ 6ಜನ ದುಷ್ಕರ್ಮಿಗಳ ತಂಡ ತಲೆ ಮತ್ತು ಕುತ್ತಿಗೆಗೆ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

      ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ಜಿ.ನಾಗೇನಹಳ್ಳಿ ಸಮೀಪದ ರಾಜ್ಯ ಹೆದ್ದಾರಿಯ ಮೂಲಕ ಬೆಂಗಳೂರಿಗೆ ತೆರಳುವ ವೇಳೆ ಮಾರ್ಗಮಧ್ಯೆ ಪಾವಗಡದಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದ 6ಜನ ದುಷ್ಕರ್ಮಿಗಳ ತಂಡ ಯುವಕನ ಕಾರನ್ನು ಅಡ್ಡಗಟ್ಟಿ ಕಾರಿನಿಂದ ಶ್ರೀನಿವಾಸ್‍ನನ್ನು ಹೊರಗೆಳೆದು ತಲೆ ಮತ್ತು ಕುತ್ತಿಗೆಗೆ ಲಾಂಗಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.

      ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗಲುಕುಂಟೆ ನಿವಾಸಿ ಶ್ರೀನಿವಾಸ್(25) ಹತ್ಯೆಯಾದ ದುರ್ದೈವಿ. ಈತ ಮೂಲತಃ ಆಂದ್ರಪ್ರದೇಶ ರಾಜ್ಯದ ಮಡಕಶಿರಾ ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಧ್ಯೆ ಇರುವ ಮಿಡಿಗೇಶಿ ಹೋಬಳಿ ಸಮೀಪದ ಸಂಕಮ್ಮನಪಾಳ್ಯ ಗ್ರಾಮದ ನಿವಾಸಿ ಆಗಿದ್ದಾನೆ. ಮೃತ ಶ್ರೀನಿವಾಸ್ ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರಿ ಆಗಿದ್ದಾನೆ.

      ಬೆಂಗಳೂರು ನಗರದ ಇದೇ ಬಗಲುಗುಂಟೆ ನಿವಾಸಿಯಾದ ಅಕ್ಷಿತಾ(19) ಜೊತೆ ತನ್ನ ಸ್ವಗ್ರಾಮವಾದ ಸಂಕಮ್ಮನಪಾಳ್ಯಕ್ಕೆ ಬುಧವಾರ ಬಂದಿದ್ದಾನೆ. ಗುರುವಾರ ಮನೆಯಿಂದ ದವಸದಾನ್ಯ ಶೇಖರಣೆ ಮಾಡಿಕೊಂಡು ತೆರಳುವ ವೇಳೆ ಮಾರ್ಗಮಧ್ಯೆಯೇ ಟೊಯೋಟೊ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ 6ಜನ ದುಷ್ಕರ್ಮಿಗಳ ತಂಡ ಯುವತಿಯ ಮುಂದೆಯೇ ಕೊಚ್ಚಿ ಕೊಲೆಮಾಡಿ ಸ್ಥಳದಿಂದ ಪರಾರಿ ಆಗಿದ್ದಾರೆ.

      ಹತ್ಯೆಯಾದ ಶ್ರೀನಿವಾಸ್ ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರಿ ಆಗಿದ್ದಾನೆ. ವ್ಯಾಪಾರದ ವಿಚಾರವಾಗಿ ತನ್ನ ಸ್ನೇಹಿತರೊಂದಿಗೆ ದ್ವೇಷ ಕಟ್ಟಿಕೊಂಡ ಹಿನ್ನಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ಸಿನಿಮಿಯ ರೀತಿಯಲ್ಲಿ ಯುವಕನ ಕೊಲೆಯಾಗಿದ್ದ ಯುವತಿಯ ಆಕ್ರಂಧನ ಮುಗಿಲುಮುಟ್ಟಿದೆ. ಸ್ಥಳದಲ್ಲಿದ್ದ ಯುವತಿಯಿಂದ ಪೊಲೀಸರ ಮಾಹಿತಿ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.
ಯುವಕನ ಕೊಲೆಯಾದ ಸ್ಥಳಕ್ಕೆ ತುಮಕೂರು ಪೊಲೀಸ್ ವರೀಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ಸಿಪಿಐ ನದಾಫ್, ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

(Visited 38 times, 1 visits today)