ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಂಕಷ್ಟ  ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ  ಕೆ.ಎನ್. ರಾಜಣ್ಣ ತಿಳಿಸಿದರು.

      ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಧನ ಬೆಲೆ ಹೆಚ್ಚಳದಿಂದ ರೈತರು ಸೇರಿದಂತೆ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ರೈತರು ಟ್ರಾಕ್ಟರ್‍ಗೆ ಡೀಸೆಲ್ ಹಾಕಿಸಲು ಯೋಚನೆ ಮಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್ ಖಚ್ಚಾ ತೈಲ ಬೆಲೆ 125 ಡಾಲರ್ ಇತ್ತು, ಆಗ 60 ರೂ.ಗೆ ಪೆಟ್ರೋಲ್, 50 ರೂ.ಗೆ ಡೀಸೆಲ್ ಸಿಗುತ್ತಿತ್ತು. ಈಗ ಒಂದು ಬ್ಯಾರಲ್ ಖಚ್ಚಾ ತೈಲ ಬೆಲೆ 71 ಡಾಲರ್ ಇದೆ. ಇವರು ಅರ್ಧದಷ್ಟು ಇಳಿಸಬೇಕಿತ್ತು. ಅದನ್ನು ಬಿಟ್ಟು ಪ್ರತಿದಿನ ಇಂಧನ ಬೆಲೆ ಹೆಚ್ಚು ಮಾಡುತ್ತಿದ್ದಾರೆ. ಇದು ಯಾರೂ ಒಪ್ಪುವಂತಹುದಲ್ಲ, ಸರ್ಕಾರ ತೆರಿಗೆಗಳನ್ನು ರದ್ದುಪಡಿಸಿದರೆ ಕೇವಲ 30 ರೂ.ಗೆ ಪೆಟ್ರೋಲ್, ಡೀಸೆಲ್ ಕೊಡಬಹುದು ಎಂದು ಹೇಳಿದರು.\

      ಎಣ್ಣೆ ಕಾಳುಗಳು ಯುಪಿಎ ಸರ್ಕಾರದಲ್ಲಿ 75 ರೂ.ಗೆ ಸಿಗುತ್ತಿದ್ದವು, ಈಗ 130 ರೂ.ಗಳಿಗೆ ಏರಿಕೆಯಾಗಿದೆ. ಅಡುಗೆ ಎಣ್ಣೆ 200 ರೂ.ಗಳಿಗೆ ತಲುಪಿದೆ. ಇದರ ಜೊತೆಗೆ ಈಗ ವಿದ್ಯುತ್ ಧರವನ್ನೂ ಹೆಚ್ಚಿಸಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದೆ ಎಂದು ಹರಿಹಾಯ್ದರು.

      ಕೊರೋನದಿಂದ ಜನರಿಗೆ ದುಡಿಯುವ ಶಕ್ತಿ ಕಡಿಮೆಯಾಗಿದೆ. ದುಡಿಯಲು ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದಂತಹ ವೇಳೆಯಲ್ಲಿ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ನೋಡಿದರೆ ಈ ಸರ್ಕಾರಗಳಿಗೆ ಏನು ಹೇಳಬೇಕೋ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ಮೋದಿ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಈಗಾಗಲೇ ದೇಶದ ಜನರಿಗೆ ಗೊತ್ತಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿಯವರು ಒತ್ತಾಯ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಕೊರೋನ ಔಷಧಿ ನಾವೇ ಕೊಡುತ್ತೇವೆ ಎಂದು ಹೇಳಿದೆ. ಇದಕ್ಕೆ ಸ್ವಾಗತಿಸುತ್ತೇನೆ. ಆದರೆ ಔಷಧಿ ಸರ್ಟಿಫಿಕೇಟ್‍ಗೆ ಮೋದಿ ಫೋಟೋ ಬಳಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ದೇಶದ ಚಿಹ್ನೆ ಹಾಕಲಿ, ಅದನ್ನು ಬಿಟ್ಟು ಮೋದಿ ಫೊಟೋ ಬಳಸಿ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದು, ಇದರಿಂದ ಸರ್ಕಾರಿ ಹಣ ದುರುಪಯೋಗ ಮಾಡುತ್ತಿರುವುದು ಸಾಧುವಲ್ಲ ಎಂದರು.

(Visited 5 times, 1 visits today)