ತುಮಕೂರು :

      ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸದಸ್ಯರು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಜ್ಯೋತಿಗಣೇಶ್ ಅವರಿಗೆ ಮನವಿ ಸಲ್ಲಿಸಿದರು.

      ತುಮಕೂರು ನಗರದಲ್ಲಿ ಈಗಾಗಲೇ 130 ಅನುದಾನ ರಹಿತ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳ ಹತ್ತಿರದಲ್ಲಿಯೇ ಮತ್ತೊಂದು ಪ್ರಿಸ್ಕೂಲ್ ಶಾಲೆಯನ್ನು ತೆರೆಯಲು ಡಿಡಿಪಿಐ ಹಾಗೂ ಬಿಇಒ ಅನುಮತಿ ನೀಡುತ್ತಿರುವುದು ಸರಿಯಲ್ಲ, ಕಾರ್ಪೋರೇಟ್ ಶಾಲೆಗಳ ವ್ಯಾಮೋಹದಲ್ಲಿ ಅಧಿಕಾರಿಗಳು ಸ್ಥಳೀಯ ಶಾಲಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕುವಂತೆ ಕಳೆದ ಜೂನ್‍ನಲ್ಲಿಯೇ ಡಿಡಿಪಿಐ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದರು, ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ, ಕಾನೂನು ಉಲ್ಲಂಘಿಸಿ ಇಂತಹ ಶಾಲೆಗಳು ಕಾರ್ಯನಿರ್ವಹಿಸಲು ಅಧಿಕಾರಿಗಳೇ ಅನುವು ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

      ತುಮಕೂರು ನಗರದಲ್ಲಿಯೇ ಹೈದ್ರಾಬಾದ್, ಬಾಂಬೆ ಮೂಲದ ಶಿಕ್ಷಣ ಸಂಸ್ಥೆಗಳ ದಾಂಧಲೆ ಹೆಚ್ಚಿದ್ದು, ಎಂಟು ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ದಾಖಲಾತಿಯನ್ನು ಮಾಡಿಕೊಳ್ಳುತ್ತಿವೆ, ಪ್ರಿಸ್ಕೂಲ್ ಹೆಸರಿನಲ್ಲಿ ಮೂಲಸೌಕರ್ಯವಿಲ್ಲದ ಕಡೆಯೂ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ವೃತ್ತಿಪರತೆ ಇಲ್ಲದ ಶಿಕ್ಷಕರನ್ನು ಈ ಶಾಲೆಗಳು ನೇಮಿಸಿಕೊಳ್ಳುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಇಂದು ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಚೈತನ್ಯ ಟೆಕ್ನೋ, ಪೋದಾರ್, ಶೇಷಾದ್ರಿಪುರಂ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಅನುಮತಿ ಇಲ್ಲದೆ ತರಗತಿಗಳನ್ನು ನಡೆಸುತ್ತಿದ್ದು, ಡಿಡಿಪಿಐ ಕ್ರಮ ಕೈಗೊಳ್ಳದೇ ಹೋದರೆ ಕಚೇರಿಗೆ ಬೀಗ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್ ಅವರು ಮಾತನಾಡಿ ಅಧಿಕಾರಿಗಳ ಧೋರಣೆಯಿಂದಾಗಿ ಯಾರು ಬೇಕಾದರೂ ಅನಧಿಕೃತವಾಗಿ ಪ್ರೀ ಸ್ಕೂಲ್ ಪ್ರಾರಂಭ ಮಾಡಬಹುದಾಗಿದೆ, ಶಿಕ್ಷಣ ಇಲಾಖೆಯ ಷರತ್ತುಗಳನ್ನು ಉಲ್ಲಂಘಿಸಿ ಪ್ರಿಸ್ಕೂಲ್ ಪ್ರಾರಂಭ ಮಾಡುತ್ತಿದ್ದು, ಇಂಟಿಗ್ರೇಟೆಡ್ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸ್ಥಳೀಯ ಖಾಸಗಿ ಶಾಲೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

      ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಅಡಿಯಲ್ಲಿ ದಾಖಲಾಗಿರುವ ಮಕ್ಕಳ ಅನುದಾನವನ್ನು ಶಿಕ್ಷಣ ಇಲಾಖೆ ಕಳೆದ ವರ್ಷದಿಂದಲೂ ನೀಡಿಲ್ಲ, ಶೇ.80ರಷ್ಟು ಕಡತವನ್ನು ವಾಪಾಸ್ ಮಾಡಲಾಗಿದೆ, ಮಾರ್ಚ್ ತಿಂಗಳೊಳಗೆ ಮೊದಲ ಹಂತದ ಅನುದಾನ ಬಿಡುಗಡೆಯಾದರೆ ಸರ್ಕಾರದಿಂದ ಅನುದಾನವನ್ನು ಪಡೆಯುವುದಕ್ಕೆ ತೊಂದರೆಯಾಗಲಿದ್ದು, ಡಿಡಿಪಿಐ ಕಚೇರಿಯಿಂದ ಮನಸೋಇಚ್ಛೆ ಶಾಲೆಗೆ ಭೇಟಿ ತೊಂದರೆ ನೀಡುತ್ತಿದ್ದಾರೆ, ಅನುದಾನರಹಿತ ಶಾಲೆಗಳ ಆಡಳಿತಕ್ಕೆ ತೊಂದರೆ ನೀಡುತ್ತಿದ್ದು, ಕಾನೂನುಬದ್ಧವಾಗಿ ನಡೆಸಲು ಅವಕಾಶವನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅವರು, ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಬೇಡಿಕೆ ಹಳೆಯ ವಿಚಾರವಾಗಿದ್ದು, ಆಂಧ್ರ ಮೂಲದ ಶಾಲೆಗಳು ನಾಯಿ ಕೊಡೆಗಳಂತೆ ಪ್ರಾರಂಭವಾಗುತ್ತಿದ್ದು, ಶಿಕ್ಷಣವನ್ನು ವ್ಯಾಪಾರಿಕರಣ ಮಾಡಲು ಮುಂದಾಗುತ್ತಿದ್ದು, ಅಧಿಕಾರಿಗಳು ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚಿಸಲು ಕ್ರಮವಹಿಸಬೇಕು ಎಂದು ಡಿಡಿಪಿಐ ಕಾಮಾಕ್ಷಮ್ಮ ಹಾಗೂ ಬಿಇಒ ರಂಗಧಾಮಪ್ಪ ಅವರಿಗೆ ಸೂಚಿಸಿದರು.

      ಶೈಕ್ಷಣಿಕ ನಗರಿ ತುಮಕೂರು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು, ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕಬೇಕು, ಹೊರರಾಜ್ಯಗಳ ಶಾಲೆಗಳನ್ನು ತೆರಯುವುದಕ್ಕೆ ಅವಕಾಶ ನೀಡಿದರೆ, ಕನ್ನಡಿಗರ ಸ್ಥಳೀಯ ಶಾಲೆಗಳನ್ನು ಉಳಿಸಲು ತೊಂದರೆಯಾಗಲಿದೆ, ಲಕ್ಷಗಟ್ಟಲೆ ಶುಲ್ಕವನ್ನು ವಸೂಲಿ ಮಾಡುತ್ತಿರುವ ಶಾಲೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.

      ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತರಾಂ ಅವರು ಮಾತನಾಡಿ ಅಧಿಕಾರಿಗಳು ಶಾಲೆಗೆ ಅನುಮತಿ ಕೊಡುವ ಮುಂಚೆ ಪರಿಶೀಲನೆ ನಡೆಸಬೇಕು, ಅವಶ್ಯಕತೆ ಇಲ್ಲದೆ ಕಡೆ ತರಗತಿಗಳನ್ನು ನಡೆಸಲು ಅನುಮತಿ ಕೊಡಬಾರದು ಇದರಿಂದ ಉಳಿದ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ನೀಡಬಾರದು ಒತ್ತಾಯಿಸಿದರು.

      ಪ್ರತಿಭಟನೆಯಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಲ್ಯಾನ್ಸಿಪಾಯಸ್, ನಯಾಜ್ ಅಹ್ಮದ್, ಶ್ರೀನಿವಾಸ್, ಪ್ರಕಾಶ್, ರಹಮತ್ ಅಲಿ, ಚಂದ್ರಣ್ಣ, ದೇವೇಗೌಡ, ಅರುಣ್‍ಕುಮಾರ್, ಲೋಕೇಶ್, ಪಾಲಾಕ್ಷಯ್ಯ, ಮುಮ್ತಾಜ್ ಬೇಗಂ, ಶರ್ಮಿಳಾ, ರೇಖಾ ಬಾಬು, ಅಶ್ವಿನಿ, ಸೇರಿದಂತೆ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

(Visited 8 times, 1 visits today)