ತುಮಕೂರು


ಯಾವುದೇ ಒಂದು ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಬೇಕೆಂದರೆ, ಅದಕ್ಕೆ ಶಿಕ್ಷಣವೇ ಪೂರಕವಾದ ಅಂಶವಾಗಿದ್ದು, ನೇಕಾರರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಾಂಗದತ್ತ ಗಮನಹರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಜಿಲ್ಲಾ ನೇಕಾರರ ಸಮಾವೇಶ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮುದಾಯದಲ್ಲಿ ಹೆಚ್ಚು ಹೆಚ್ಚು ಜನ ವಿದ್ಯಾವಂತರಾದಂತೆ, ಅವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯೂ ಬದಲಾಗಲಿದೆ. ಹಾಗಾಗಿ ಎಲ್ಲರೂ ಶಿಕ್ಷಣದತ್ತ ಗಮನಹರಿಸಬೇಕೆಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಇದುವರೆಗೂ ಒಂದು ಅಭಿವೃದ್ದಿ ನಿಗಮ ಇಲ್ಲದಿರುವುದು ಶೋಚನೀಯ.ನಿಗಮಗಳ ಸ್ಥಾಪನೆಯಿಂದ ಸರಕಾರದಿಂದ ಜನಾಂಗದ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗುತ್ತದೆ.ಆ ಅನುದಾನವನ್ನು ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ದಿಗೆ ವಿನಿಯೋಗಿಸಿ, ಸಮುದಾಯವನ್ನು ಬಲಿಷ್ಠಗೊಳಿಸಲು ಸಾಧ್ಯ. ನೇಕಾರರ ಅಭಿವೃದ್ದಿ ನಿಗಮ ಸ್ಥಾಪನೆ ಕುರಿತಂತೆ ನಾವು ಸಹ ನಿಮ್ಮೊಂದಿಗೆ ಇರುತ್ತೇವೆ ಎಂದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್ ಮಾತನಾಡಿ, ರಾಜ್ಯದಲ್ಲಿರುವ ಸುಮಾರು 1467 ಜಾತಿಗಳಲ್ಲಿ ಪ್ರವರ್ಗ 1ರಲ್ಲಿನ 102 ಮತ್ತು ಪ್ರವರ್ಗ 2ರಲ್ಲಿನ 95 ಹಿಂದುಳಿದ ಜಾತಿಗಳಲ್ಲಿ,ಸುಮಾರು 27 ಜಾತಿಗಳು ನೇಕಾರರ ಸಮುದಾಯಕ್ಕೆ ಸೇರಿವೆ.ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ,ಕುಲಕಸುಬುಗಳನ್ನಾಧರಿಸಿದ, ಜಾತಿಗಳನ್ನು ಒಂದು ವೇದಿಕೆಗೆ ತಂದು, ಸುಮಾರು 75 ಕೋಟಿ ರೂಗಳನ್ನು ಅನುದಾನವನ್ನು ನೀಡಿದ್ದರು. ಆ ನಂತರದಲ್ಲಿ ನೇಕಾರ ಸಮುದಾಯಕ್ಕೆ ಅಂತಹ ಸಹಾಯ, ಸಹಕಾರ ಸರಕಾರಗಳಿಂದ ಸಿಕ್ಕಿಲ್ಲ.ಇಂದಿನ ಪೈಪೋಟಿ ಯುಗದಲ್ಲಿ ನೇಕಾರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರ ಸರಕಾರದ ಉನ್ನತ ಹುದ್ದೆಗೆ ಹೋಗುವಂತೆ ಮಾಡುವತ್ತ ನಾವೆಲ್ಲರೂ ಗಮನಹರಿಸಬೇಕಿದೆ ಎಂದರು.
ರಾಜಕೀಯದಲ್ಲಿ ನಮ್ಮ ಸಮುದಾಯದ ಸಾಧನೆ ಶೂನ್ಯ.ಉಮಾಶ್ರೀ ಮತ್ತು ನಾನು ಎಂ.ಎಲ್.ಎ ಗಳಾಗಿದ್ದು ಬಿಟ್ಟರೆ ಆ ನಂತರದಲ್ಲಿ ಯಾರು ಇಲ್ಲ.ರಾಜಕೀಯ ಸ್ಥಾನಮಾನದ ಹಿನ್ನೆಲೆಯಲ್ಲಿ ಎಲ್ಲರನ್ನು ಒಗ್ಗೂಡಿ ಪಕ್ಷಗಳ ಮುಂದೆ ಶಕ್ತಿ ಪ್ರದರ್ಶನಕ್ಕೆ ಒಕ್ಕೂಟದ ಆಧ್ಯಕ್ಷರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಅವರ ಕೈ ಬಲಪಡಿಸುವ ಕೆಲಸ ಆಗಬೇಕು.ಯಾರಿಗೆ ರಾಜಕೀಯದಲ್ಲಿ ಆಸಕ್ತಿ ಇದೆಯೋ ಅವರು ಪಕ್ಷಕ್ಕೆ ಟಿಕೇಟ್‍ಗೆ ಆರ್ಜಿ ಸಲ್ಲಿಸುವಂತೆ ಎಂ.ಡಿ.ಎಲ್ ಸಲಹೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ,11 ವರ್ಷಗಳ ಹಿಂದೆ ಆರಂಭವಾದ ನಮ್ಮ ಸಂಘಟನೆ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಆಸ್ಥಿತ್ವದಲ್ಲಿದೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವಾರು ಸಂಘಟಿಸುವ ಗುರಿಯನ್ನು ಒಕ್ಕೂಟ ಹೊಂದಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಈ ಸಮುದಾಯಕ್ಕೆ ಬರುವ ಸವಲತ್ತುಗಳನ್ನು ಜನರಿಗೆ ತಲುಪಿಸಲು ಒಕ್ಕೂಟ ಶಕ್ತಿ ಮೀರಿ ಕೆಲಸ ಮಾಡಲಿದೆ.ನಮ್ಮ ಮಕ್ಕಳು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಆರಂಭಿಸಲು ಒಕ್ಕೂಟ ಮುಂದಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ನೇಕಾರರೆಂದರೆ ಕೇವಲವಾಗಿ ಕಾಣುತ್ತಿದ್ದ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಆಗಸ್ಟ್ 07ನೇ ತಾರೀಖನ್ನು ನೇಕಾರ ದಿವಸ್ ಎಂದು ಘೋಷಿಸಿದ ನಂತರ ಸಮುದಾಯದಲ್ಲಿ ಒಂದು ರೀತಿಯ ಸಂಚಲನ ಮೂಡಿದೆ. ಇಂದು ದೇಶದಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜವನ್ನು ರೂಪಿಸಿಕೊಟ್ಟವರು ನಾವು ಎಂಬ ಹೆಮ್ಮೆ ನಮಗಿದೆ.ಸರಕಾರ ನೇಕಾರರು, ರೈತರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದೆ. ಆದರೆ ರೈತರಿಗೆ ನೀಡಿದಂತೆ ಉಚಿತ ವಿದ್ಯುತ್, ಸಾಲ ಮನ್ನಾ ಯೋಜನೆ ನಮ್ಮಗಿಲ್ಲ. ಸರಕಾರ ನೆರೆಯ ಆಂಧ್ರ, ತಮಿಳುನಾಡು ಸರಕಾರದಂತೆ ನೇಕಾರರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್, ಸಾಲಮನ್ನಾ ಯೋಜನೆ, ನೇಕಾರರ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ಬಲಿಜ ಸಮಾಜದ ಟಿ.ಆರ್.ಅಂಜನಪ್ಪ,ಈಡಿಗ ಸಮಾಜದ ಜೆ.ಪಿ.ಶಿವಣ್ಣ, ಆರ್ಯವೈಶ್ಯ ಸಮಾಜದ ನಟರಾಜು,ಪಿ.ಎನ್.ರಾಮಯ್ಯ,ನೇಕಾರರ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಆರ್.ರಾಮಕೃಷ್ಣಯ್ಯ,ಉಪಾಧ್ಯಕ್ಷ ಎನ್.ವೆಂಕ ಟೇಶ್,ಕರಿಯಪ್ಪ,ಟಿ.ರೇವಣ್ಣಕುಮಾರ್,ಯೋಗಾನಂದ್,ಅನಿಲ್‍ಕುಮಾರ್,ಬಿ.ಎಲ್.ರವೀಂದ್ರಕುಮಾರ್,ಗೌರವಾಧ್ಯಕ್ಷ ಟಿ.ಹೆಚ್. ಶಿವಾನಂದ್,ಚೌಡಪ್ಪ,ಎಸ್.ವಿರೂಪಾಕ್ಷಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ 250ಕ್ಕೂ ಹೆಚ್ಚು ನೇಕಾರ ಸಮುದಾಯಕ್ಕೆ ಸೇರಿದ, ಎಸ್.ಎಸ್,ಎಲ್,ಸಿ. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು.

(Visited 8 times, 1 visits today)