ತುಮಕೂರು


ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ 2022-23ನೇ ಸಾಲಿನ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನವು ಫೆಬ್ರವರಿ 8, 2023 ರಿಂದ ಫೆ.22ರವರೆಗೆ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ವ್ಯವಸ್ಥಿತವಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಏರ್ಪಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರಿಂದು ಸಿದ್ದಗಂಗಾ ಮಠದ ವಸ್ತುಪ್ರದರ್ಶನ ಆವರಣದಲ್ಲಿ ನಡೆದ ಶ್ರೀ ಸಿದ್ದಗಂಗಾ ಕ್ಷೇತ್ರದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ಇಲಾಖೆಗಳ ಜನಪರ ಯೋಜನೆಗಳಿಗೆ ವ್ಯಾಪಕ ಪ್ರಚಾರ ನೀಡುವ ಇಂತಹ ಕಾರ್ಯಕ್ರಮಗಳ ಸದ್ಭಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಸರ್ಕಾರಿ ಕಾರ್ಯಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕು. ವಸ್ತುಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದು, ಸಂವಹನ ಕೌಶಲ್ಯ ಇರುವಂತಹ ಸಿಬ್ಬಂದಿಗಳನ್ನು ಮಳಿಗೆಗಳ ಬಳಿ ನೇಮಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ಸೂಚಿಸಿದರು.
ಮಳಿಗೆಗಳು ವಿನೂತನವಾಗಿದ್ದು, ಹೊಸತನದಿಂದ ಕೂಡಿರಲಿ ಎಂದು ತಿಳಿಸಿದ ಸಿಇಓ ಅವರು, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳು ಆನ್‍ಲೈನ್ ವ್ಯವಸ್ಥೆಯಡಿ ಒದಗಿಸಲಾಗುತ್ತಿರುವ ಹಾಸ್ಟೆಲ್‍ಗಳ ಪ್ರವೇಶಾತಿ, ಸೀಟು ಹಂಚಿಕೆ ಮತ್ತು ಸ್ಕಾಲರ್‍ಶಿಫ್ ಹಾಗೂ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಪ್ರಚಾರ ನೀಡುವಂತೆ ಸೂಚಿಸಿದರು.
ಮೈದಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಶ್ರೀ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ವಸ್ತುಪ್ರದರ್ಶನ ಟ್ರಸ್ಟಿನ ಜಂಟಿ ಕಾರ್ಯದರ್ಶಿ ಎಸ್. ಶಿವಕುಮಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

(Visited 1 times, 1 visits today)